“ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿರುವುದು ಸಂತೋಷ. ಆದರೆ, ಪಠ್ಯದಲ್ಲೂ ಬಸವಣ್ಣ ಬರಬೇಕು. ಅದನ್ನು ಮಾಡುವುದು ಕೂಡ ಸರ್ಕಾರದ ಕರ್ತವ್ಯವಾಗಿದೆ” ಎಂದು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅವರು ಕಲಬುರಗಿ ನಗರದ ಬಸವರಾಜಪ್ಪ ಅಪ್ಪ ಸೆಂಟೆನರಿ ಸಭಾಂಗಣದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪಠ್ಯವೆಂದರೆ ಬರೀ ಒಂದು ಪಾಠದಲ್ಲಿ ಬಸವಣ್ಣ ಬರುವುದಲ್ಲ. ಬಸವಣ್ಣ ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ನೀತಿಶಾಸ್ತ್ರಜ್ಞ ಕೂಡ ಆಗಿದ್ದರು. ಹೀಗಾಗಿ ಸರ್ಕಾರ ಸಮಿತಿಯೊಂದನ್ನು ರಚಿಸಿ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಸಮಾಜಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿ ಬಸವಣ್ಣನವರನ್ನು ಸೇರಿಸಿದರೆ, ಆಗ ಬಸವಣ್ಣನವರಿಗೆ ನಿಜವಾದ ಸಾಂಸ್ಕೃತಿಕ ನಾಯಕ ಗೌರವ ಕೊಟ್ಟಂತಾಗುತ್ತದೆ” ಎಂದು ಪ್ರತಿಪಾದಿಸಿದರು.

“ಸರ್ಕಾರ ಬಸವಕಲ್ಯಾಣದಲ್ಲಿ ₹600 ಕೋಟಿ ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಿಸುತ್ತಿದೆ. ಅದು ಬರೀ ಸ್ಥಾವರ. ಅದಕ್ಕೆ ಜೀವಂತಿಕೆ ಬರಬೇಕಾದರೆ, ಜಂಗಮತ್ವ ಲಭಿಸಬೇಕಾದರೆ, ಆ ನೆಲದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ವಚನ ವಿವಿ ಸ್ಥಾಪನೆಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಒಂದು ಕಿರೀಟ ಇಟ್ಟಂತಾಗುತ್ತದೆ” ಎಂದು ಅಭಿಪ್ರಾಯಿಸಿದರು.
ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕಿ ಗುರುದೇವಿ ಹುಲ್ಲೇಪ್ಪನವರಮಠ ಮಾತನಾಡಿ, “ತನು, ಮನ, ಬುದ್ಧಿ, ಭಾವಗಳ ಶುದ್ಧಿಗೆ ಪೂಜೆ ಅತ್ಯುನ್ನತ ಸಾಧನ. ವೈಜ್ಞಾನಿಕವಾದ ಪೂಜಾ ವಿಧಾನ ಜಗತ್ತಿಗೆ ತಿಳಿಸಿಕೊಟ್ಟ ಶ್ರೇಯ ಬಸವಾದಿ ಪ್ರಮಥರ್ದು. ಜ್ಞಾನ–ವಿಜ್ಞಾನ–ತಂತ್ರಜ್ಞಾನ ಎಷ್ಟೆಲ್ಲ ಮುಂದುವರಿದರೂ ಆದಿಮಾನವ ಪಳಿಯುಳಿಕೆಯ ಪರಂಪರೆಯಂತೆ ಕಲ್ಲುದೇವರು, ಮಣ್ಣುದೇವರು, ಮರದೇವರ ಪೂಜೆ ಇಂದಿಗೂ ನಿಲ್ಲದಿರುವುದು ದುರದೃಷ್ಟಕರ. ಶರಣ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡವರು ಸ್ಥಾವರ ಪೂಜೆ ಮಾಡಲ್ಲ, ಮಾಡಕೂಡದು. ಬರೀ ಇಷ್ಟಲಿಂಗವನ್ನು ಆರಾಧಿಸಬೇಕು” ಎಂದರು.
ಸಾರಂಧರ ದೇಶಿಕೇಂದ್ರ ಸ್ವಾಮೀಜಿ, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ, ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ ಕೊಡಲಹಂಗರಗಾ, ದೊಡ್ಡಪ್ಪಗೌಡ ಪಾಟೀಲ, ನೀಲಕಂಠರಾವ ಮೂಲಗೆ ಸೇರಿದಂತೆ ಹಲವು ಮುಖಂಡರು, ಹತ್ತಾರು ಸ್ವಾಮೀಜಿಗಳು ವೇದಿಕೆಯಲ್ಲಿದ್ದರು.
ಇದನ್ನು ಓದಿದ್ದೀರಾ? ಮುಸ್ಲಿಂ ಸಮುದಾಯದಲ್ಲಿ ಜಾತಿಕಾರಣ: ಕೆಲವು ಗೊಂದಲಗಳು ಮತ್ತು ಹಲವು ಸ್ಪಷ್ಟತೆಗಳು
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಬಸವರಾಜಪ್ಪ ಅಪ್ಪ ಸಭಾಂಗಣದ ತನಕ ‘ಬಸವ ಸಂಸ್ಕೃತಿ ಅಭಿಯಾನ’ದ ಅದ್ದೂರಿ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಬಸವಲಿಂಗ ಪಟ್ಟದ್ದೇವರು ಉತ್ತರಿಸಿದರು.