ಅನ್ಯಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವತಿ ಕವಿತಾ ಕೊಳ್ಳುರ (18) ಮರ್ಯಾದೆಗೇಡು ಹತ್ಯೆಯಾದ ಯುವತಿ. ಯುವತಿಯ ತಂದೆ ಶಂಕರ ಕೊಳ್ಳುರ ಹಾಗೂ ಇತರರು ಕೊಲೆಗೈದಿದ್ದು, ಯುವತಿ ತಂದೆ ಶಂಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಲಿಂಗಾಯತ ಸಮುದಾಯದ ಯುವತಿಯಾದ ಕವಿತಾ ಅದೇ ಗ್ರಾಮದ ಕುರುಬ ಜಾತಿಯ ಆಟೋ ಚಾಲಕನನ್ನು ಪ್ರೀತಿಸುತ್ತಿದ್ದಳು. ಪ್ರೀತಿಸುತ್ತಿದ್ದ ಯುವಕನನ್ನೇ ಮದುವೆ ಆಗುವೆ. ಇಲ್ಲಂದ್ರೆ ಮನೆ ಬಿಟ್ಟು ಹೋಗುವೆ’ ಎಂದು ಪಟ್ಟು ಯುವತಿ ಹಿಡಿದಿದ್ದಳು. ಈ ಕುರಿತು ಆ.27ರಂದು ಯುವತಿ ಹಾಗೂ ಕುಟುಂಬದ ನಡುವೆ ಮತ್ತೆ ಗಲಾಟೆ ನಡೆದಿತ್ತು.
‘ಮಗಳು ಬೇರೆ ಜಾತಿಯ ಯುವಕನ ಜೊತೆ ಹೋದರೆ, ಮರ್ಯಾದೆ ಹೋಗುತ್ತದೆ ಎಂದುಕೊಂಡು ತಂದೆ ಹಾಗೂ ಇತರ ಇಬ್ಬರು ಸೇರಿಕೊಂಡು ಯುವತಿಯ ಕತ್ತು ಹಿಸುಕಿ ಕೊಲೆಗೈದು, ನಂತರ ಯುವತಿ ಬಾಯಲ್ಲಿ ಕ್ರಿಮಿನಾಶಕ ಹಾಕಿದ್ದಾರೆ. ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿಸಿ, ಆಗಸ್ಟ್ 28ರಂದು ಬೆಳಿಗ್ಗೆ ಶವವನ್ನು ಸುಟ್ಟು ಹಾಕಿದ್ದಾರೆ’ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ | ʼಕೊಂದವರು ಯಾರು?ʼ ಆಂದೋಲನ; ಮಹಿಳಾ ಆಯೋಗಕ್ಕೆ ಹಕ್ಕೊತ್ತಾಯ ಸಲ್ಲಿಕೆ
ಈ ಸಂಬಂಧ ಫರಹತಾಬಾದ್ ಪೊಲೀಸರು ಮೂವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಯುವತಿಯ ತಂದೆಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ನೆರವಾದ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.