ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕೇಂದ್ರ ಸರಕಾರದ ಒತ್ತಾಯ ಪೂರ್ವಕ ಹಿಂದಿ ಹೇರಿಕೆಯನ್ನು ವಿರೋಧಿಸಿ ಮತ್ತು ಕರವೇ ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ, ರಾಜಭಾಷಾ ಸಮಿತಿಯು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರ ನಡೆಸುತ್ತ ಬಂದಿದೆ. ದೇಶದಲ್ಲಿ ಈಗ ಇರುವುದು ಪ್ರಜಾಪ್ರಭುತ್ವ, ಜನರ ಆಳ್ವಿಕೆಯ ಕಾಲದಲ್ಲಿ ನಾವು ಇದ್ದೇವೆ. ರಾಜಪ್ರಭುತ್ವ ಹೋಗಿ ಎಷ್ಟೋ ದಶಕಗಳಾಗಿವೆ. ರಾಜರೇ ಇಲ್ಲದ ಕಾಲದಲ್ಲಿ ರಾಜಭಾಷೆ ಇರಲು ಹೇಗೆ ಸಾಧ್ಯ? ದೇಶದಲ್ಲಿ ಈಗ ಯಾವುದೇ ರಾಜಭಾಷೆಗಳು ಇಲ್ಲ. ಇರುವುದು ನೆಲದ ಭಾಷೆಗಳು, ಜನರ ಭಾಷೆಗಳು. ರಾಜಭಾಷೆ ಎಂಬುದೇ ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿದರು.
ಒಕ್ಕೂಟ ಸರಕಾರ ರಾಜಭಾಷಾ ಸಮಿತಿ/ಆಯೋಗವನ್ನು ಈ ಕೂಡಲೇ ರದ್ದುಪಡಿಸಬೇಕು. ರಾಜಭಾಷೆಯ ಹೆಸರಲ್ಲಿ ಹಿಂದಿ ಹೇರುವುದನ್ನು ನಾವು ಸಹಿಸುವುದಿಲ್ಲ. ಹಿಂದಿ ಹೇರಿಕೆ ದೇಶಕ್ಕೆ ಮಾರಕ ಮಾತ್ರವಲ್ಲ, ಭಾರತದ ಐಕ್ಯತೆಗೆ ಧಕ್ಕೆ ತರುತ್ತಿದೆ ಎಂದು ಅವರು ದೂರಿದರು.
ಒಕ್ಕೂಟ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದಿ ನುಡಿಗೆ ನೀಡಿರುವ ಹೆಚ್ಚುಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲ ಭಾಷೆಗಳನ್ನು ಒಕ್ಕೂಟ ಸರಕಾರದ ಅಧಿಕೃತ ಆಡಳಿತ/ಸಂವಹನ ಭಾಷೆಗಳನ್ನಾಗಿ ಮಾಡಬೇಕು. ದೇಶದ ಎಲ್ಲ ನುಡಿಗಳೂ ಸಮಾನ ಎಂದು ಘೋಷಿಸಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಉಪಾಧ್ಯಕ್ಷರಾದ ಅನಿಲ್ ಪೂಜಾರಿ, ಸಾಬುದ್ದೀನ್, ನಗರ ಅಧ್ಯಕ್ಷ ಅಜರುದ್ದಿನ್, ಜಿಲ್ಲಾ ಸಂಚಾಲಕರಾದ ಕೃಷ್ಣ ಪಂಗಾಳ, ಸುಧಾಕರ್ ಕಲ್ಮಾಡಿ, ಕಾಪು ತಾಲೂಕು ಅಧ್ಯಕ್ಷ ವೀರೇಶ್ , ಕಾರ್ಕಳ ತಾಲೂಕು ಅಧ್ಯಕ್ಷ ಇಮ್ರಾನ್ ಶೇಕ್, ಕುಂದಾಪುರ ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಹಿಳಾ ಉಪಾಧ್ಯಕ್ಷ ಅಶ್ವಿನಿ ನಾಯಕ್, ಅನಿತಾ ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.