ಕೋಲಾರ ಜಿಲ್ಲೆಯ ವೇಮಗಲ್ ಭಾಗದಲ್ಲಿ ಸುಮಾರು 11.50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು.
ಸೀತಿ ಗ್ರಾಮ ಪಂಚಾಯಿತಿ ವತಿಯಿಂದ ಸೀತಿ ಬೈರೇಶ್ವರಸ್ವಾಮಿ ದೇವಾಲಯದ ಬಳಿ ನಿರ್ಮಿಸಿರುವ 23 ಅಂಗಡಿ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸೀತಿ ಬೈರೇಶ್ವರ ದೇವಾಲಯ ಇತಿಹಾಸ ಪ್ರಸಿದ್ದವಾಗಿದ್ದು ಮೂರು ರಾಜ್ಯಗಳಿಂದ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಇಂತಹ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಇದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕೇಳಿದಷ್ಟು ಅನುದಾನ ತಂದು ಅಭಿವೃದ್ಧಿ ಮಾಡಲು ಸಿದ್ದವಿದ್ದು, ಅವಕಾಶಗಳು ಇವೆ. ಮಾತನಾಡುವವರಿಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುವಂತಾಗಲಿ” ಎಂದರು.
“ತಾಲೂಕಿನ ವೇಮಗಲ್ ಹೋಬಳಿಯ ಚಂಜಿಮಲೆ ಗ್ರಾಮದಿಂದ ಕಡಗಟ್ಟೂರು, ಸೀತಿಹೊಸೂರು ಮತ್ತು ಬೈರಂಡಹಳ್ಳಿವರೆಗೆ 5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ, ಬೈರಂಡಹಳ್ಳಿ ಕೆರೆ ಅಭಿವೃದ್ಧಿಗೆ 3.5, ಕಡಗಟ್ಟೂರು ಗ್ರಾಮದಿಂದ ಮಠಪುರ ಕ್ಯಾಲನೂರು ತಿಪ್ಪೇನಹಳ್ಳಿ ರಸ್ತೆ 2 ಕೋಟಿ, ಎಂಎಲ್ಸಿ ಅನಿಲ್ ಕುಮಾರ್ ಅನುದಾನದಲ್ಲಿ ಸೀತಿ ಬೆಟ್ಟದಲ್ಲಿ ಸೀತಿ ದೇವಾಲಯದ ಬಳಿ ಊಟದ ವ್ಯವಸ್ಥೆಗೆ ಡೈನಿಂಗ್ ಹಾಲ್ ನಿರ್ಮಾಣಕ್ಕೆ 95 ಲಕ್ಷ, ಮಹಿಳೆಯರ ವಿಶ್ರಾಂತಿ ಕೊಠಡಿಗೆ 25 ಲಕ್ಷ ಹಾಗೂ ಮುಡಿ ಕಟ್ಟು ನಿರ್ಮಾಣಕ್ಕೆ 15 ಲಕ್ಷ ಸೇರಿ ಒಟ್ಟು 11.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತದೆ” ಎಂದು ಮಾಹಿತಿ ನೀಡಿದರು.


ಸೀತಿ ಗ್ರಾಮ ಪಂಚಾಯತಿಯು ಮಾದರಿ ಪಂಚಾಯತಿಗಳಲ್ಲಿ ಒಂದಾಗಿದೆ. ಯಾವುದೇ ಅನುದಾನವಿಲ್ಲದೇ 23 ಅಂಗಡಿ ಮಳಿಗೆಗಳು ಕಟ್ಟಲಾಗುತ್ತಿದೆ. ನನ್ನ ಅನುದಾನದಲ್ಲಿ 10 ಲಕ್ಷ ನೀಡಲಾಗುತ್ತದೆ. ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಎಂಎಲ್ಸಿ ನಸೀರ್ ಅಹಮದ್ ಅವರಿಂದಲೂ ಅನುದಾನವನ್ನು ಪಡೆದುಕೊಳ್ಳಲಾಗುತ್ತದೆ. ವಸತಿ ನಿಲಯವನ್ನು ಮಾಡಿದರೆ ಅನುಕೂಲವಾಗುತ್ತೆ. ಅಭಿವೃದ್ಧಿ ವಿಚಾರದಲ್ಲಿ ನಿಮ್ಮೊಂದಿಗೆ ಸದಾ ಇರತ್ತೇವೆ” ಎಂದರು.
ಇದನ್ನೂ ಓದಿ: ಕೋಲಾರ | ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗೆ ಹಣ ಕೇಳಿದರೆ ಕ್ರಮ: ಶಾಸಕ ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, “ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯಾರು ಕೂಡ ಸುಮ್ಮನೆ ಬಂದು ಪೂಜೆ ಮಾಡಲ್ಲ. ಇಲಾಖೆಗಳಿಂದ ಟೆಂಡರ್ ಆಗಿ ಅನುಮೋದನೆ ಸಿಕ್ಕಿದ ಮೇಲೆಯೇ ಗುದ್ದಲಿ ಪೂಜೆಗೆ ಬಂದಿರೋದು. ಪ್ರಶ್ನೆ ಮಾಡಲಿ ಅದನ್ನು ಬಿಟ್ಟು ದೌರ್ಜನ್ಯ ಮಾಡುವುದು ದಬ್ಬಾಳಿಕೆ ನಡೆಸುವುದು ಮಾಡಬಾರದು. ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ಕೊಡುವುದಕ್ಕೆ ಬಂದವರಿಗೆ ಅಭಿವೃದ್ಧಿ ಮೂಲಕವೇ ಉತ್ತರ ಕೊಡಲಿದ್ದೇವೆ” ಎಂದರು
ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸೀತಿ ಗ್ರಾಪಂ ಅಧ್ಯಕ್ಷೆ ಕವಿತ ಮುನಿರಾಜು, ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್, ತಾಪಂ ಇಒ ಮಂಜುನಾಥ್ ಎಇಇ ಮಂಜುನಾಥ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೀರೇಂದ್ರ ಪಾಟೀಲ್, ಅಂಕತಟ್ಟಿ ಬಾಬು, ಉರಟ ಅಗ್ರಹಾರ ಚೌಡರೆಡ್ಡಿ, ಸಕಲೇಶ್, ಕುಮಾರ್, ರಾಜಕುಮಾರ್, ಪೆರ್ಜೇನಹಳ್ಳಿ ನಾಗೇಶ್, ಬೈರಪ್ಪ, ಮುನಿರಾಜು ಮುಜರಾಯಿ ತಹಶಿಲ್ದಾರ್ ಶ್ರೀನಿವಾಸ್ ನಿರ್ಮಿತಿ ಕೇಂದ್ರದ ಅಶ್ವಿನ್ ಮುಂತಾದವರು ಇದ್ದರು.