ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಣ, ಆರೊಗ್ಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಶಾಸಕ ಡಾ. ಎನ್ ಟಿ ಶ್ರೀನಿವಾಸ್ ಅವರು ವಸತಿ ಶಾಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಸೂಚಿಸಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ವಿಜ್ಞಾನ ಪದವಿ ಪೂರ್ವ ಕಾಲೇಜು ವಿಭಾಗದ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
“ಕ್ಷೇತ್ರದಲ್ಲಿ ಹಸಿವು, ಬಡತನ, ಬಾಲ್ಯ ವಿವಾಹ ಮತ್ತು ಮೌಢ್ಯತೆಗಳನ್ನು ಸಂಪೂರ್ಣವಾಗಿ ತೊಲಗಿಸಲು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಅಹಾರ ನೀಡುವಲ್ಲಿ ಹೆಚ್ಚು ಒತ್ತು ಕೊಡಲಾಗುವುದು. ನಮ್ಮ ವಿದ್ಯಾರ್ಥಿಗಳ ಪೋಷಕರು ವಸತಿ ಶಿಕ್ಷಣಕ್ಕೆ ಕೊಡುವ ಕಾಳಜಿ, ಇಲಾಖೆಗಳ ಸ್ಥಳೀಯ ಅಧಿಕಾರಿಗಳ ಪ್ರೋತ್ಸಾಹ ಮತ್ತು ಸರ್ಕಾರದ ಉನ್ನತ ಮಟ್ಟದಲ್ಲಿ ತಾವು ಪಟ್ಟ ಶ್ರಮದ ಫಲಾವಾಗಿ ವಿಜಯನಗರ ಜಿಲ್ಲೆಯ ಪೈಕಿ ಈ ಭಾಗದಲ್ಲಿ ಶಿಕ್ಷಣದ ಅಗತ್ಯತೆಯನ್ನು ಅರಿತು, ತುರ್ತಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನೂತನವಾಗಿ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜು ಪ್ರಾಂರಂಭಿಸಲು ಸಾಧ್ಯವಾಯಿತು” ಎಂದರು.
ಈ ನಿಟ್ಟಿನಲ್ಲಿ ವಸತಿ ಶಾಲಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ನೀಡಬೇಕು, ಅವರಲ್ಲಿ ವೈಯಕ್ತಿಕ ಶುಚಿತ್ವ ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡುವಲ್ಲಿ ಹೆಚ್ಚು ಆದ್ಯತೆ ಕೊಡಬೇಕಯ” ಎಂದು ಸೂಚಿಸಿದರು.
“ವಸತಿ ಶಾಲೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲೆ ಹಾಗೂ ತಾಲೂಕು ಅಧಿಕಾರಿಗಳ ಮೇಲಿದೆ. ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅತಿ ಹೆಚ್ಚು ಕಾಳಜಿ ಹೊಂದಿ ಶ್ರದ್ಧೆ, ನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಿನಕ್ಕೆ 300 ಪ್ಲೇಟ್ ಊಟದ ಮಿತಿ; ಅರ್ಧಕಾಲಿಕ ಸೇವೆಗೆ ಸೀಮಿತವಾಯಿತೇ ಇಂದಿರಾ ಕ್ಯಾಂಟೀನ್?
ವಿಜಯನಗರ ಜಿಲ್ಲಾ ಶಾಲಾ ಶಿಕ್ಷಣ ಇಲಾಖಾ ನಿರ್ದೇಶಕರು ಹಾಗೂ ಎಸ್ಟಿ ಇಲಾಖೆ ಅಧಿಕಾರಿ ರವಿಕುಮಾರ್, ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಹವಲ್ದಾರ್, ತಹಶೀಲ್ದಾರ್ ವಿ ಕೆ ನೇತ್ರಾವತಿ, ಸಮಾಜ ಕಲ್ಯಾಣ ಇಲಾಖೆಯ ಸಹ ನಿರ್ದೇಶಕ ಡಿ ಜಗದೀಶ, ತಾಲೂಕಿನ ಎಸ್ಟಿ ಇಲಾಖಾಧಿಕಾರಿ ಮೆಹಬೂಬ್ ಭಾಷಾ, ಕೂಡ್ಲಿಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸದಸ್ಯೆ ಲಕ್ಷ್ಮೀದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಟಿ ವಿಮಲಾಕ್ಷಿ ಹಾಗೂ ಸದಸ್ಯ ಈಡಿಗರ ಸಂತೊಷಕುಮಾರ, ಪ್ರಾಂಶುಪಾಲೆ ಎಂ ಶೋಭಾ ಹಾಗೂ ಸಿಬ್ಬಂದಿ ವರ್ಗದವರು, ವಸತಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.