ಆಧಾರ್ ಕಾರ್ಡ್ ಇಲ್ಲದ ಸಮಯದಲ್ಲಿ ವೈದ್ಯರಿಂದ ಅಂದಾಜು ವಯಸ್ಸು ದೃಡೀಕರಿಸಿ ನೋಂದಾವಣೆ ಮಾಡಿ, ಮಂಡಳಿ ಒಪ್ಪಿಗೆ ನೀಡಿದ ಗುರುತು ಚೀಟಿಗೆ ತಂತ್ರಾಂಶದಲ್ಲಿ ಆಧಾರ್ ವಯಸ್ಸು, ಮಂಡಳಿ ಗುರುತು ಚೀಟಿ ವಯಸ್ಸು, ವ್ಯತ್ಯಾಸ ಪರಿಣಾಮವಾಗಿ ತಿರಸ್ಕರಿಸಿದ ನೂರಾರು ಕಾರ್ಮಿಕರ ಪಿಂಚಣಿ ಅರ್ಜಿಗಳನ್ನು ಪುರಸ್ಕರಿಸಲು ಆಗ್ರಹಿಸಿ ಇಂದು ರಾಜ್ಯ ವ್ಯಾಪಿ ಕಟ್ಟಡ ಕಾರ್ಮಿಕರ ಪ್ರತಿಭಟನೆ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಸಿಐಟಿಯು ನೇತೃತ್ವದಲ್ಲಿ ವಯೋವೃದ್ಧ ಕಟ್ಟಡ ಕಾರ್ಮಿಕರು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಕಳೆದ 3-4 ವರ್ಷಗಳಿಂದ ಪಿಂಚಣಿ ವಂಚಿತರಾದ ಕಟ್ಟಡ ಕಾರ್ಮಿಕರು ಇಲಾಖೆಗಳಿಗೆ ಹಾಗೂ ಕಲ್ಯಾಣ ಮಂಡಳಿಗೆ ಮನವಿ ನೀಡಿದರೂ ಕೂಡ ಮಂಡಳಿ ಮನವಿಗೆ ಉತ್ತರ ನೀಡುತ್ತಿಲ್ಲ. ಮಂಡಳಿ ಅಧಿಕಾರಿಗಳನ್ನು ಸಂಘವು ಮುಖತಃ ಭೇಟಿ ಮಾಡಿ ಪ್ರಸ್ತಾಪ ಮಾಡಿ ಮನವಿ ನೀಡಿದಾಗ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರೂ ಪ್ರಗತಿಯಾಗಿಲ್ಲ. ಆದುದರಿಂದ ವಯೋವೃದ್ಧ ಕಣ್ಣು ಕಾಣದವರು, ಕಿವಿ ಕೇಳದವರು ನಡೆಯಲು ಅಶಕ್ತರಾದವರು ಪ್ರತಿಭಟನೆ ಮಾಡುವಂತೆ ದೂಡಿರುವುದು ಅಮಾನವೀಯವಾಗಿದೆ. ಈ ಬಗ್ಗೆ ಇತ್ತೀಚೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಾನ್ಯ ರೋಹಿಣಿ ಸಿಂಧೂರಿ, ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಮಾನ್ಯ ಶಾಸಕರಿಗೂ ಮನವಿ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ದ ಅಧ್ಯಕ್ಷ ಸುರೇಶ್ ಕಲ್ಲಾಗರ ಹೇಳಿದರು.

ಮಂಡಳಿಯು ಇಂತಹ ಇಳಿವಯಸ್ಸಿನ ವಂಚಿತರಿಗೆ ಅವರ ಆರೋಗ್ಯಕ್ಕೆ ವೆಚ್ಚಕ್ಕೆ ಹಣ ಇಲ್ಲದ ಸಂದರ್ಭದಲ್ಲಿ ಮಂಡಳಿ ಪಿಂಚಣಿ ಆಸರೆ ಆಗಿತ್ತು, ಆದರೆ ಮಂಡಳಿ ಆಧಾರ್ ಕಾರ್ಡ್ ವಯಸ್ಸೆ ಕಡ್ಡಾಯ ಮಾಡಿರುವುದರಿಂದ ಪಿಂಚಣಿಯಿಂದ ವಂಚಿತರನ್ನಾಗಿ ಮಾಡಲಾಗಿದೆ. ಕಟ್ಟಡ ಕಾರ್ಮಿಕರ ಮಂಡಳಿ ಕಟ್ಟಡ ಕಾರ್ಮಿಕರ ಪರವಾಗಿರಬೇಕು. ಮಂಡಳಿಯ ತಂತ್ರಾಂಶದಿಂದ ಹಲವು ವರ್ಷಗಳ ಪಿಂಚಣಿ ಕಳೆದುಕೊಂಡಿದ್ದಾರೆ. ಈಗಲಾದರೂ ತಂತ್ರಾಂಶದಲ್ಲಿ ಇಂತಹ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದರು.
ಮನವಿಯನ್ನು ಕುಂದಾಪುರ ಕಾರ್ಮಿಕ ನಿರೀಕ್ಷಕರಾದ ವಿಜೇಂದ್ರ ಅವರ ಮೂಲಕ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಲಾಯಿತು ಅದರ ಪ್ರತಿಗಳನ್ನು ಕಾರ್ಮಿಕ ಸಚಿವರು, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಶಾಸಕರಿಗೆ ಮತ್ತೊಮ್ಮೆ ಇಂದು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರತಿಭಟನೆ ನೇತೃತ್ವ ಪಿಂಚಣಿದಾರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಕಾರ್ಯದರ್ಶಿ ಕ್ರಷ್ಣ ಪೂಜಾರಿ ಹಂಗಳೂರು, ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ, ಸಿಐಟಿಯು ಜಿಲ್ಲಾ ಮುಖಂಡರಾದ ಬಲ್ಕೀಸ್ ಮೊದಲಾದವರಿದ್ದರು.