ಮಂಗಳೂರು ಸೇರಿದಂತೆ ಕರಾವಳಿ ಭಾಗದ ನಿರ್ಮಾಣ ಉದ್ಯಮವನ್ನು ಸ್ತಬ್ಧಗೊಳಿಸಿರುವ ಮತ್ತು ಸಾವಿರಾರು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿರುವ ಕೆಂಪು ಕಲ್ಲು ಗಣಿಗಾರಿಕೆ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಿಡಲಾಗಿದೆ. ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಭರವಸೆ ನೀಡಿದ್ದಾರೆ.
ಈ ಸಮಸ್ಯೆಯ ಕುರಿತು ಯು.ಟಿ. ಖಾದರ್ ಅವರನ್ನು ಭೇಟಿಯಾದ ಉಳ್ಳಾಲ ಬ್ಲಾಕ್ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಅಶ್ರಫ್ ಉಳ್ಳಾಲ್ ಅವರ ನೇತೃತ್ವದಲ್ಲಿ ಮಂಗಳೂರು ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದರು.
ಉಳ್ಳಾಲ ಬ್ಲಾಕ್ ಅಸಂಘಟಿತ ಕಾರ್ಮಿಕರ ಸಭೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಿತು. ಸರ್ಕಾರದ ಅಕ್ರಮ ಗಣಿಗಾರಿಕೆ ತಡೆಯುವ ಕ್ರಮದಿಂದಾಗಿ ಕಾನೂನುಬದ್ಧ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದು, ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಹಲವು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ರಫ್ ಉಳ್ಳಾಲ್, “ಕಾರ್ಮಿಕರ ಒಂದು ದಿನದ ದುಡಿಮೆ ನಿಂತರೂ ಅವರ ಮನೆಯ ಒಲೆ ಹೊತ್ತುವುದಿಲ್ಲ. ನಾವು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿಲ್ಲ, ಆದರೆ ಅಕ್ರಮದ ಹೆಸರಿನಲ್ಲಿ ಸಕ್ರಮ ಕಾರ್ಮಿಕರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಈ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ಸರ್ಕಾರದ ಮಟ್ಟದಲ್ಲಿ ಪರಿಹಾರ ಒದಗಿಸಬಲ್ಲ ಏಕೈಕ ನಾಯಕರೆಂದರೆ ನಮ್ಮ ಭಾಗದವರೇ ಆದ ಸ್ಪೀಕರ್ ಯು.ಟಿ. ಖಾದರ್ ಅವರು. ಹಾಗಾಗಿ, ನಾವು ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ನಮ್ಮ ಸಂಕಷ್ಟವನ್ನು ವಿವರಿಸಿ, ಕಾನೂನುಬದ್ಧವಾಗಿ ಕೆಂಪು ಕಲ್ಲು ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ಕೊಡಿಸಲು ಮನವಿ ಮಾಡುತ್ತೇವೆ,” ಎಂದು ಘೋಷಿಸಿದರು.
ಇದನ್ನು ಓದಿದ್ದೀರಾ? ದಸರಾ ಉದ್ಘಾಟನೆ: ಸಾಹಿತಿ ಬಾನು ಮುಷ್ತಾಕ್ಗೆ ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರತಿನಿಧಿಗಳು ಅಶ್ರಫ್ ಉಳ್ಳಾಲ್ ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಕಾರ್ಮಿಕರ ಹಕ್ಕು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸಂಘವು ನಿರಂತರವಾಗಿ ಹೋರಾಟ ಮುಂದುವರಿಸಲಿದೆ ಎಂದು ಅವರು ಒತ್ತಿ ಹೇಳಿದರು. ಶ್ರೀ ಯು.ಟಿ. ಖಾದರ್ ಅವರ ಮಧ್ಯಸ್ಥಿಕೆಯಿಂದ ಈ ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ದೊರಕಲಿದೆ ಎಂಬ ಸಂಪೂರ್ಣ ವಿಶ್ವಾಸವನ್ನು ಸಭೆ ವ್ಯಕ್ತಪಡಿಸಿತು.
ಈ ಸಭೆಯಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಜಾವಾ, ಯೂತ್ ಕಾಂಗ್ರೆಸ್ ಮುಖಂಡ ನವಾಜ್ ನರಿಂಗಾನ, ಮುಖಂಡರಾದ ಜಲೀಲ್ ಮೊಂಟುಗೋಳಿ, ಶಾಹಿಲ್ ಮಂಚಿಲ ಮತ್ತಿತತರರು ಹಾಜರಿದ್ದರು.
