ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಜಿಲ್ಲೆಯ ನಂಜನಗೂಡು ತಾಲ್ಲೂಕು ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಯ ಪರಿಹಾರದ ಹಣ ದುರುಪಯೋಗವಾಗಿದೆ ಎಂದು ಆರೋಪ ಮಾಡಿದರು.
ರೈತ ಸಂಘದ ಹೋರಾಟದ ಫಲವಾಗಿ ಭೂಮಿಯ ಅನುಭವದಲ್ಲಿದ್ದವರಿಗೆ ತಲಾ 4 ಲಕ್ಷ್ಮದಂತೆ ಪರಿಹಾರ ನಿಗದಿಯಾಗಿದ್ದು, ಫಲಾನುಭವಿಗಳಿಗೆ ಹಣ ಸಿಗದೆ ರಾಜಕಾರಣಿಗಳ ಹಿಂಬಾಲಕರು, ಮುಂಬಾಲಕರು ಪಡೆದುಕೊಳ್ಳುತ್ತಿದ್ದಾರೆ. ಇದೇ ವಿಚಾರವಾಗಿ ತನಿಖಾ ವರದಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸೆ.8 (ಸೋಮವಾರ) ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದೆ ಎಂದರು.
ಚಿತ್ರನಗರಿಗೆ ಭೂ ಸ್ವಾಧೀನವಾಗಿದ್ದು ಭೂಮಿ ಕಳೆದುಕೊಂಡ ಸಂತ್ರಸ್ತರು125 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕಬೇಕು. ಇದಕ್ಕಾಗಿಯೇ ಕೆಐಎಡಿಬಿ ₹18 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಆದರೆ, ಅಧಿಕಾರಿಗಳು ನೈಜ ರೈತರಿಗೆ ಪರಿಹಾರ ನೀಡದೆ ಅನ್ಯರಿಗಿ ನೀಡುವ ಮೂಲಕ ಅಕ್ರಮ ಎಸಗಿದೆ.
ರೈತ ಸಂಘದ ಹೋರಾಟದಿಂದ ಜಿಲ್ಲಾಧಿಕಾರಿಯವರು ತನಿಖಾಧಿಕಾರಿಯನ್ನು ನೇಮಿಸಿ ತಿಂಗಳು ಕಳೆದಿದೆ. ಆದರೆ, ಇದುವರೆಗೆ ವರದಿ ಬಿಡುಗಡೆಯಾಗಿಲ್ಲ. ಸೋಮವಾರ (ಸೆ.8)ರಂದು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ನೀಡುತ್ತೇವೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿಕೆ ಖಂಡಿಸಿದ ಬಡಗಲಪುರ ನಾಗೇಂದ್ರ, ರೈತ ಚಳವಳಿಯಲ್ಲಿ ಭಾಗಿಯಾಗಿ ಕೂಗಾಡುವುದೇ ಚಳವಳಿಯಲ್ಲಾ ಎಂಬಂತೆ ಮಾತಾಡಿರುವುದು ಖಂಡನಿಯ. ಈ ಬಗ್ಗೆ ಹೋರಾಟಗಾರರಲ್ಲಿ ಕ್ಷಮೆ ಯಾಚಿಸಬೇಕು. ಈಗಾಗಲೇ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕರ್ತರು, ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಈ ರೀತಿಯ ನಡುವಳಿಕೆ ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ಘನತೆಯಿಂದ ಸ್ವೀಕರಿಸಬೇಕಿತ್ತು.ಆದರೆ, ಧರ್ಮದ ಹೆಸರಿನಲ್ಲಿ ಬಿಜೆಪಿಗರು ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ನಾಡಿಗೆ ಕೀರ್ತಿ ತಂದವರಿಗೆ ಅಪಮಾನ ಮಾಡುವುದು ತರವಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸೆ.13ಕ್ಕೆ ‘ಸ್ವರಾಜ್ ಉತ್ಸವ’ : ಶಾಸಕ ದರ್ಶನ್ ಪುಟ್ಟಣ್ಣಯ್ಯ
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಗ್ರಾಮಾಂತರ ತಾಲ್ಲೂಕು ಗೌರವಾಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ ಹಾಗೂ ಪ್ರೇಮ್ ರಾಜ್ ಇದ್ದರು.