ನಿರಂತರ ಫೌಂಡೇಶನ್ ಮೈಸೂರಿನ ಆಯೋಜನೆಯಲ್ಲಿ ನಡೆದ ‘ಸಹಜ ರಂಗ’ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಳೆದ ಶುಕ್ರವಾರ ಸಂಜೆ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಜರುಗಿತು.
‘ರಂಗಭೂಮಿಗೆ ಭೂಮಿ ತೂಕದ ಶಕ್ತಿ ಇದೆ’ ಎಂಬ ಆಶಯದೊಂದಿಗೆ ಆರಂಭವಾದ ಸಹಜ ರಂಗ ಈ ಬಾರಿ ಸಂವಿಧಾನ ಮತ್ತು ಅದರ ಮೌಲ್ಯಗಳು ಎಂಬ ವಿಷಯವನ್ನು ಕೇಂದ್ರೀಕರಿಸಿತು. ‘ಶಿಕ್ಷಣ ಜಡವಾಗುತ್ತಿರುವ ಈ ಸಮಯದಲ್ಲಿ ಸಂವಿಧಾನವನ್ನು ಬದುಕಿನ ಅವಿಭಾಜ್ಯ ಅಂಗವಾಗಿ ನೋಡಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಗೆ ವಿಶೇಷ ರಂಗರೂಪಕವನ್ನು ರೂಪಿಸಲಾಗಿದೆ’ ಎಂದು ಶಿಬಿರದ ನಿರ್ದೇಶಕರಾದ ಸುಗುಣ ಎಂ. ಎಂ. ಹೇಳಿದರು.
ಹಿರಿಯ ಲೇಖಕ ತುಕಾರಾಂ ಅವರು ಮಾತನಾಡಿ, “ನೈತಿಕತೆ ಇಲ್ಲದಾಗ ಒಳ-ಹೊರ ಬದುಕು ಶಿಥಿಲವಾಗುತ್ತದೆ. ನಿರಂತರ ತಂಡವು ಕಾಲಕ್ಕೆ ಕನ್ನಡಿಯನ್ನು ಹಿಡಿಯುವ ಕಾರ್ಯ ಮಾಡುತ್ತಿದೆ. ‘ಜನಗಣಮನ’ ನಾಟಕವು ಸಂವಿಧಾನವನ್ನು ಬದುಕಿನ ವಿಧಾನವಾಗಿ ರೂಪಿಸುವ ಪ್ರಯತ್ನವಾಗಿದೆ” ಎಂದು ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ, “ಸಹಜ ರಂಗ ಮತ್ತು ನಿರಂತರ ಎಂಬ ಹೆಸರೇ ರಂಗಭೂಮಿಯ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ರಂಗಭೂಮಿಯ ಶಕ್ತಿ ಸಮಾಜಕ್ಕೆ ದಾರಿದೀಪವಾಗಬಲ್ಲದು” ಎಂದು ಹೇಳಿದರು.
ಬಸವರಾಜ ದೇವನೂರು ಮಾತನಾಡಿ, “ಜಾತಿ ಸಮಸ್ಯೆಯ ಆತಂಕ ಗಾಢವಾಗಿರುವ ಈ ಕಾಲದಲ್ಲಿ, ನಿರಂತರ ತಂಡವು ಜಾತಿ ಮತ್ತು ವ್ಯವಸ್ಥೆಗೆ ರಾಜಿಯಾಗದೆ ಬೆಳೆಯುತ್ತಿರುವುದು ಶ್ಲಾಘನೀಯ. ಇನ್ನಷ್ಟು ಜನಾಂಗೀಯ ಭಾವೈಕ್ಯತೆಯನ್ನು ಬಿಂಬಿಸುವ ನಾಟಕಗಳನ್ನು ಸಮಾಜಕ್ಕೆ ನೀಡಬೇಕಾಗಿದೆ” ಎಂದು ಹೇಳಿದರು.
ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಹೊಸ ಮುಖಗಳ ಪರಿಚಯ, ಶಿಕ್ಷಕರ ಪ್ರೋತ್ಸಾಹ ಮತ್ತು ರಂಗಭೂಮಿಯ ಮೂಲಕ ಬೆಸೆಯುವ ಕಲೆಯು ನಮಗೆ ಸಿಕ್ಕಿದೆ. ಸಂವಿಧಾನವು ದಲಿತ ಸಮುದಾಯದ ಆತ್ಮಗೌರವವನ್ನು ಶತಮಾನಗಳಿಂದ ಬಲಪಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹೆಚ್ ಡಿ ಕೋಟೆ | ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿ ಮಹಾದೇವ ನಾಯಕ ಪುನಾರಾಯ್ಕೆ

ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಲಹೆಗಾರರಾದ ಬಸವರಾಜ ದೇವನೂರು, ಹಿರಿಯ ಲೇಖಕ ತುಕಾರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ನಿರಂತರದ ರಂಗ ನಿರ್ದೇಶಕ ಸುಗುಣ ಎಂ. ಎಂ, ಪ್ರೊ. ಕೆ. ಸಿ. ಬಸವರಾಜ್, ಪ್ರೊ. ಕಾಳಚನ್ನೇಗೌಡ, ಪ್ರೊ. ಮಾಧವಿ ಎಂ.ಕೆ., ನಿವೃತ್ತ ಪ್ರಾಧ್ಯಾಪಕರಾದ ಅಪ್ಪಾಜಿಗೌಡ್ರು, ಮಂಗಳ, ನಿರಂತರ ಶ್ರೀನಿವಾಸ್, ಪ್ರಸಾದ್ ಕುಂದೂರ್ ಸೇರಿದಂತೆ ಇನ್ನಿತರರು ಇದ್ದರು.