ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕಿನ ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಆಲ್ಟೋ ಕಾರಿನಲ್ಲಿ ಶುಕ್ರವಾರ ಸಂಜೆ 4 ರ ಆಸುಪಾಸಿನಲ್ಲಿ ಪ್ರಯಾಣಿಸುವಾಗ ಬೂದಿತಿಟ್ಟು ಬಳಿ ಹೃದಯಾಘಾತದಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ ಮನಮೋಹನ್ (46) ನಿಧನರಾಗಿದ್ದಾರೆ.
ಮೂಲತಃ ಬೆಂಗಳೂರಿನವರಾಗಿದ್ದು, ಕರ್ತವ್ಯ ನಿಮಿತ್ತ ತಿತಿಮಿತಿಯಲ್ಲಿ ಕುಟುಂಬ ಸಹಿತ ವಾಸಿಸುತ್ತಿದ್ದರು. ಪೊನ್ನಪ್ಪ ಸಂತೆ, ನಿಟ್ಟೂರು, ಬಾಳೆಲೆ, ಸೋಮವಾರಪೇಟೆ, ಸಿದ್ದಾಪುರದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿದ್ದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನ ಚಾಲನೆಯಲ್ಲಿರುವಾಗಲೇ ಹೃದಯಾಘಾತವಾಗಿ ಸಾವನಪ್ಪಿದ್ದಾರೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅರ್ಚರಿ, ಫೆನ್ಸಿಂಗ್ ಕ್ರೀಡಾ ನಿಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭೇಟಿ; ಪರಿಶೀಲನೆ
ಮೃತರ ನಿಧನಕ್ಕೆ ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಣಾಧಿಕಾರಿ ಹಾಗೂ ಸಿಬ್ಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.