ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಕೆಐಎಡಿಬಿ ಭೂ ಸ್ವಾಧೀನ ಸಂಭಂದವಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸದೆ ಅಕ್ರಮ ಎಸಗಿರುವುದು, ತನಿಖೆ ವಿಳಂಬ ಹಾಗೂ ತಪ್ಪಿತಸ್ಥ ನಂಜನಗೂಡು ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಚಿಕ್ಕಯ್ಯನ ಛತ್ರ ಹೋಬಳಿ, ಹಿಮ್ಮಾವು ಗ್ರಾಮದ ಸರ್ವೇ ನಂ.390 ರಿಂದ 430ರ ವರೆಗಿನ ಭೂಮಿಯಲ್ಲಿ ಸ್ವಾಧೀನದಲ್ಲಿದ್ದ ರೈತರಿಗೆ ಎಕ್ಸ್ಗ್ರೇಷಿಯ ಫಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಅಕ್ರಮ ನಡೆದಿರುವ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘ ಇಂದಿಗೆ 125 ದಿನಗಳಿಂದ ಹೊರಾಟ ನಡೆಸುತ್ತಿದೆ. ಈ ಸಂಬಂಧ ತಾವು 30 ದಿನಗಳೊಳಗೆ ಸಮಗ್ರ ತನಿಖೆ ನಡೆಸಿ ವರದಿಯನ್ನು ಸಲ್ಲಿಸಲು ತನಿಖಾಧಿಕಾರಿಗಳನ್ನು ನೇಮಿಸಿರುವುದು ಸರಿಯಷ್ಟೇ. ಆದರೆ, 2 ತಿಂಗಳಾದರು ಇದುವರೆವಿಗೂ ವರದಿ ಸಲ್ಲಿಕೆ ಆಗಿರುವುದಿಲ್ಲ ಮತ್ತು ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿರುವ ನಂಜನಗೂಡು ತಾಲ್ಲೂಕು ತಹಶೀಲ್ದಾರ್ ವಿರುದ್ದ ಇದುವರೆವಿಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ “ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ತಲುಪಿಲ್ಲ. ರಾಜಕಾರಣಿಗಳ ಹಿಂಬಾಲಕರಿಗೆ ಹಣ ಹಾಕಲಾಗಿದೆ. ಇದರಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದು ಕೂಡಲೇ ಕ್ರಮ ಜರುಗಿಸಬೇಕು. ಜಿಲ್ಲಾಧಿಕಾರಿಯವರು ನೇಮಿಸಿರುವ ತನಿಖಾಧಿಕಾರಿ ಇದುವರೆಗೆ ವರದಿ ಸಲ್ಲಿಸಿಲ್ಲ. ಈ ಕೂಡಲೇ ವರದಿ ಬಿಡುಗಡೆ ಮಾಡಬೇಕು. ನಂಜನಗೂಡು ತಹಶೀಲ್ದಾರ್ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು ತಕ್ಷಣವೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರೈತರು ಈ ನೀತಿಯನ್ನು ಖಂಡಿಸಿ ದೊಡ್ಡಕೆರೆ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನಾ ಧರಣಿ ನಡೆಸಿ, ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಿಮ್ಮಾವು ಭೂ ಸ್ವಾಧೀನ; ಪರಿಹಾರ ಹಣ ದುರುಪಯೋಗ : ಬಡಗಲಪುರ ನಾಗೇಂದ್ರ

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಮೈಸೂರು ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಗೌರವ ಅಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ, ಪ್ರೇಮ್ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.