ರಾಮನಗರದ ಸ್ಪಂದನ ಸಂಸ್ಥೆಯಲ್ಲಿ ಭಾನುವಾರದಂದು ರಾಮನಗರ ಕಟ್ಟಡ ಕಾರ್ಮಿಕರ ಸಂಘಟನೆ ಕಟ್ಟಲು ಏರ್ಪಡಿಸಿದ್ದ ಸಭೆಯಲ್ಲಿ ಕಾರ್ಮಿಕರ ಹಕ್ಕು, ಸೌಲಭ್ಯ ಮತ್ತು ಸಂಘಟನೆಯ ಕುರಿತು ಮಾಹಿತಿ ನೀಡಲಾಯಿತು.
ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿಯವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ವಿಸ್ತಾರವಾಗಿ ತಿಳಿಸಿದ್ದು, “ಭಾರತ ಸಂವಿಧಾನದ ಪ್ರಕಾರ ಮಹಿಳೆ ಮತ್ತು ಪುರುಷರಿಬ್ಬರಿಗೂ ಕೂಡ ಮತದಾನದ ಹಕ್ಕು ಸಮಾನವಾಗಿದೆ. ಆದರೆ ವೇತನದಲ್ಲಿ ಮಾತ್ರ ತಾರತಮ್ಯವಿದೆ, ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲ, 1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾನೂನಿನ ಬಗ್ಗೆ 29 ವರ್ಷಗಳಾದರೂ ಕಾರ್ಮಿಕರಿಗೆ ಇದರ ಮಾಹಿತಿ ಇಲ್ಲದಿರುವುದು ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಟ್ಟಡ ಕಾರ್ಮಿಕರಲ್ಲದವರು ಕಾರ್ಮಿಕ ಇಲಾಖೆಯಿಂದ ನಕಲಿ ಕಾರ್ಮಿಕ ಚೀಟಿ ಮಾಡಿಸಿಕೊಂಡು ಹಲವಾರು ಯೋಜನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಮತ್ತು ನಿಜವಾದ ಕಾರ್ಮಿಕರಿಗೆ ಸೌಲಭ್ಯಗಳು ಸಿಗುವಂತೆ ಮಾಡಲು ಸಂಘಟನೆ ಕಟ್ಟುವುದು ಅತಿ ಅವಶ್ಯಕ” ಎಂದು ತಿಳಿಸಿದರು.
ಕಾರ್ಮಿಕ ಮುಖಂಡ ರಾಘವೇಂದ್ರ ಮಾತನಾಡಿ, ಸಂಘಟನೆ ಕಟ್ಟುವುದರ ಉದ್ದೇಶ ಮತ್ತು ಅದನ್ನು ನಡೆಸಿಕೊಂಡು ಹೋಗುವುದರ ಕುರಿತು ಮಾಹಿತಿ ನೀಡಿದರು. ಕಾರ್ಮಿಕ ಕಾನೂನುಗಳು ಹಾಗೂ ದೇಶಾದ್ಯಂತ ನಡೆದ ಕಟ್ಟಡ ಕಾರ್ಮಿಕರ ಹೋರಾಟಗಳ ಕುರಿತು ತಿಳಿಸಿದರು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅದರ ಕೆಲಸಗಳನ್ನು ವಿವರಿಸಿದರು.
“ಕಾರ್ಮಿಕರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು, ಒಂದು ಕಾರ್ಮಿಕರ ಚೀಟಿ ಮಾಡಿಸಲು ಐನೂರರಿಂದ ಎರಡು ಸಾವಿರದವರೆಗೆ ಕೊಡುವ ಪರಿಸ್ಥಿತಿ ಇದೆ. ಹಾಗಿದ್ದೂ ಕಾರ್ಮಿಕರ ಹಕ್ಕುಗಳು ಕಾರ್ಮಿಕರಿಗೆ ಸಿಗುತ್ತಿಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಎನ್ನುವುದು ಸಂಘಟನೆಯೊಂದೇ. ಹಾಗಾಗಿ ಕಾರ್ಮಿಕರೆಲ್ಲರೂ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯೋಣ” ಎಂದು ನಿರ್ಣಯಿಸಲಾಯಿತು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಹದೇವಪ್ಪ ಹರಿಜನ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ ಕಾಲಾವಕಾಶ ಕೇಳಿದ ಎಸ್ಪಿ
ಕಾರ್ಯಕ್ರಮದಲ್ಲಿ ನೂರು ಜನ ಕಟ್ಟಡ ನಿರ್ಮಾಣ ಕಾರ್ಮಿಕರು, ಇಬ್ರಾಹಿಂ, ಸಲೀಮ್, ಬಾಬಾ ಜಾನ್ ಹಾಗೂ ಸ್ಪಂದನ ಸಂಸ್ಥೆಯ ಮಾಲಿನಿ ಅಂತರ್ಜನಂ, ಅಶ್ವತ, ಕಾವ್ಯ, ಪದ್ಮ, ಜಯಶ್ರೀ, ಮೇಘನ ಮತ್ತು ಇತರರು ಇದ್ದರು.