ಶಿವಮೊಗ್ಗ, ವಿರೂಪಗೊಂಡಿದ್ದ 9 ತಿಂಗಳ ಮಗುವಿನ ತಲೆಬುರುಡೆಯನ್ನು ಸರ್ಜಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ
ಈ ಬಗ್ಗೆ ಮಾಹಿತಿ ನೀಡಿದ ಡಾ!! ಹರೀಶ್, ಚೇತನ್ ಕುಮಾರ್ ನವಿಲೆಹಾಳ್, ಅಪರೂಪದ ಕಾಯಿಲೆಯಿಂದ ತಲೆಬುರುಡೆ ವಿರೂಪಗೊಂಡು ಬಳಲುತ್ತಿದ್ದ 9 ತಿಂಗಳ ಮಗುವಿನ ತಲೆ ಬುರುಡೆ ಚಿಪ್ಪನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಸರಿಪಡಿಸಿಸಲಾಗಿದೆ.
ತಲೆಬುರುಡೆಯ ಮೂಳೆಗಳ ಮಧ್ಯೆ ಸೂಚರ್ಸ್ (ಬಿರುಕುಗಳು) ಇರುತ್ತದೆ, ಈ ಬಿರುಕುಗಳು ಅವಧಿಗಿಂತ ಮುಂಚೆ ಕೂಡಿಕೊಂಡರೆ ಆ ಸಂದರ್ಭದಲ್ಲಿ ಬುರುಡೆಯ ಒಂದು ಭಾಗ ಸರಿಯಾಗಿ ಬೆಳವಣಿಗೆ ಆಗುವುದಿಲ್ಲ ಇದನ್ನೇ ಕ್ರೇನಿಯೊಸಿನೋಸ್ಟೋಸಿಸ್ ಎಂದು ಕರೆಯಲಾಗುತ್ತದೆ ಎಂದರು.
ಕ್ರೇನಿಯೊಸಿನೋಸ್ಟೋಸಿಸ್ ನಿಂದ ಮಗುವಿನ ತಲೆಬುರುಡೆ ವಿರೂಪವಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿ ಹೋಗಬಹುದು, ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಅಥವಾ ಜೀವಕ್ಕೂ ಅಪಾಯವಾಗಬಹುದು.
ಶಿವಮೊಗ್ಗದಲ್ಲಿ ಇದೇ ಮೊದಲ ಕ್ರೇನಿಯೊಸಿನೋಸ್ಟೋಸಿಸ್ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ, ಈ ಸರ್ಜರಿ ಗೆ ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಮಕ್ಕಳ ಅರವಳಿಕೆ ತಜ್ಞ ವೈದ್ಯರಿರಬೇಕು, ಮಕ್ಕಳ ಐ.ಸಿ.ಯು ವ್ಯವಸ್ಥೆ ಇರಬೇಕು ಹಾಗಾಗಿ ಈ ಶಸ್ತ್ರಚಿಕಿತ್ಸೆಗೆ ಒಂದು ತಜ್ಞ ವೈದ್ಯರ ತಂಡ ಬೇಕಾಗುತ್ತದೆ.
ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡುವಂತಹ ಕೇಂದ್ರಗಳು ತುಂಬಾ ಕಡಿಮೆ ಇವೆ ಎಂದರು. ಈ ಶಸ್ತ್ರಚಿಕಿತ್ಸೆಯಲ್ಲಿ ನರಶಸ್ತ್ರಚಿಕಿತ್ಸಾ ತಜ್ಞವೈದ್ಯ ಡಾ!!.ಹರೀಶ್ ಮೆದುಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮೆದುಳಿನ ಚಿಪ್ಪನ್ನು ಬೇರ್ಪಡಿಸಿ ಕೊಟ್ಟಿದ್ದಾರೆ.
ನಂತರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯ ಡಾ!!. ಚೇತನ್ ಕುಮಾರ್ ನವಿಲೆಹಾಳ್ ಅವರು ಆ ತಲೆ ಬುರುಡೆಯ ಚಿಪ್ಪಿನ ಆಕಾರವನ್ನು ಬದಲಾಯಿಸಿ ಸರಿಯಾದ ಆಕಾರಕ್ಕೆ ಬರುವಂತೆ ಸರಿಪಡಿಸಿ ಅಳವಡಿಸಿದ್ದಾರೆ.
ಮಕ್ಕಳ ಅರವಳಿಕೆ ತಜ್ಞ ವೈದ್ಯ ಡಾ!!.ಅರ್ಜುನ್ ಭಾಗವತ್ ಮಗುವಿಗೆ ಅನೆಸ್ತೇಶಿಯಾ ನೀಡಿ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದರು.
ಮಗುವಿಗೆ 8 ತಿಂಗಳು ಇರಬೇಕಾದರೆ ಪೋಷಕರು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ಮಕ್ಕಳ ತಜ್ಞ ವೈದ್ಯೆ ಡಾ!! ಕಾವ್ಯಾ ಅವರ ಬಳಿ ತೋರಿಸಿದ್ದಾರೆ.
ಈ ಸಂದರ್ಭದಲ್ಲಿ ಸಿ.ಟಿ ಸ್ಕ್ಯಾನ್ ಮಾಡಿಸಲಾಗಿತ್ತು. ಈ ಸಿ.ಟಿ ಸ್ಕ್ಯಾನ್ ನಲ್ಲಿ ಮಗುವಿಗೆ ಕ್ರೇನಿಯೊಸಿನೋಸ್ಟೋಸಿಸ್ ಇರುವುದು ದೃಢಪಟ್ಟಿತ್ತು.
ಈ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಗುವಿನ ಪೋಷಕರಿಗೆ ವಿವರಿಸಿದಾಗ ಅವರು ಕೂಡ ದೃಢ ಮನಸ್ಸಿನಿಂದ ಈ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡ ನಂತರ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಮಗು ಕೂಡಾ ಆರೋಗ್ಯವಾಗಿದೆ ಎಂದರು.