ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಮಹಾನಗರ ಪಾಲಿಕೆ ಅಧಿಕಾರಿ ಎ.ಪಿ.ಶಶಿಧರ್ ಬಲೆಗೆ.
ಶಿವಮೊಗ್ಗ ನಗರದ ಮೊಹಮ್ಮದ್ ಆಸಿಫ್ ಎಂಬುವವರು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಖರೀದಿಸಿದ್ದ ನಿವೇಶನಕ್ಕೆ ಖಾತೆ ಮಾಡಿಕೊಡಲು ಶಶಿಧರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇವರ ವಾಯ್ಸ್ ರೆಕಾರ್ಡ್ ಅನ್ನು ಮೊಹಮ್ಮದ್ ಆಸಿಫ್ ಲೋಕಾಯುಕ್ತರಿಗೆ ನೀಡಿದ್ದರು. ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೂರು ನೀಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಶ್ರಯ ಮನೆಯೊಂದಕ್ಕೆ ಖಾತೆ ಮಾಡಿಕೊಡಲು ₹10,000 ಲಂಚ ಪಡೆಯುತ್ತಿದ್ದ ಮಹಾನಗರ ಪಾಲಿಕೆಯ ಆಶ್ರಯ ಕಚೇರಿಯ ಸಮುದಾಯ ಸಂಘಟನಾ ಅಧಿಕಾರಿ ಎ.ಪಿ.ಶಶಿಧರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನೆಹರು ರಸ್ತೆಯ ನೇತಾಜಿ ಸುಭಾಷಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಆಶ್ರಯ ಕಚೇರಿಯಲ್ಲಿ ಇಂದು ಸಂಜೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ₹10,000 ನಗದು ಮತ್ತು ಅಧಿಕಾರಿ ಎ.ಪಿ.ಶಶಿಧರ್ನನ್ನು ವಶಕ್ಕೆ ಪಡೆಯಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಉಪಾಧ್ಯಕ್ಷ ಬಿ.ಪಿ.ಚಂದ್ರಶೇಖರ್, ಇನ್ಸ್ಪೆಕ್ಟರ್ ರುದ್ರೇಶ್.ಕೆ.ಪಿ, ಇನ್ಸ್ಪೆಕ್ಟರ್ಗಳಾದ ಗುರುರಾಜ್ ಮೈಲಾರ್, ವೀರಬಸಪ್ಪ ಎಲ್.ಕುಸಲಾಪುರ, ಸಿಬ್ಬಂದಿ ಯೋಗೇಶ್, ಮಂಜುನಾಥ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ದೇವರಾಜ್, ಪ್ರಕಾಶ್ ಬಾರಿಮರದ, ಅರುಣ್ ಕುಮಾರ್, ಆದರ್ಶ, ಚಂದ್ರಿಬಾಯಿ, ಪ್ರದೀಪ, ಗಂಗಾಧರ, ಆನಂದ, ಗೋಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.