ಶಿವಮೊಗ್ಗ: , ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷದ ಉದಯಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದ ನಟ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಶಿವಮೊಗ್ಗದ ಪತ್ರಿಕಾಭವನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಈ ಸಂಬಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಶಿವಮೊಗ್ಗದಲ್ಲಿ 166ನೇ ‘ಸಮಾನತೆಯ ಸಭೆ’ಯನ್ನು ನಡೆಸಲಾಗಿದೆ ಎಂದಿದ್ದಾರೆ.
ಶಿವಮೊಗ್ಗ ಹೋರಾಟ ಮತ್ತು ಚಳುವಳಿಗಳ ತವರೂರಾಗಿದ್ದು, ಇಲ್ಲಿನ ವಿಚಾರವಂತರೊಂದಿಗೆ ಕರ್ನಾಟಕದ ಭವಿಷ್ಯ ಮತ್ತು ಅಭಿವೃದ್ಧಿಯ ಕುರಿತು ಚರ್ಚಿಸಲಾಗಿದೆ. ಸಂವಿಧಾನಾತ್ಮಕ ತತ್ವಗಳ ಆಧಾರದಲ್ಲಿ ಸಮ ಸಮಾಜವನ್ನು ಹೇಗೆ ನಿರ್ಮಿಸಬಹುದು ಎಂಬುದರ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜಕೀಯ ಪಕ್ಷ ರಚನೆ ಮಾಡುವ ಚಿಂತನೆಯಿದ್ದರೂ ಸಹ ಖುದ್ದು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ತಮಗೆ ಶಾಸಕ, ಸಂಸದರಾಗುವ ಉದ್ದೇಶವಿಲ್ಲ ಅಂತಾನೂ ಸ್ಪಷ್ಟಪಡಿಸಿದ್ದಾರೆ. ಪರಿವರ್ತನೆಯ ಅಗತ್ಯಕ್ಕಾಗಿ ಸಮ ಸಮಾಜವನ್ನು ರೂಪಿಸುವುದಕ್ಕಾಗಿ ಈ ಪ್ರಯತ್ನಕ್ಕೆ ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳ ಸಿದ್ಧಾಂತಗಳ ಕೊರತೆ ಮತ್ತು ವೈಫಲ್ಯಗಳು ತಮ್ಮ ಹೊಸ ಪಕ್ಷದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದ ಚೇತನ್ ಹಿಂದುತ್ವದಂತಹ ಸಿದ್ಧಾಂತವನ್ನು ಸಿದ್ಧಾಂತದಿಂದಲೇ ವಿರೋಧಿಸಬೇಕು.
ಅದೇ ರೀತಿ, ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಮತ್ತು ಕುವೆಂಪು ಅವರ ಆದರ್ಶಗಳನ್ನು ಇಟ್ಟುಕೊಂಡು ಉತ್ತಮ ಸಿದ್ಧಾಂತವನ್ನು ಜನರ ಮುಂದಿಡುವುದಾಗಿ ಚೇತನ್ ಹೇಳಿದರು.
ಕೇವಲ ಮಾತುಗಳಲ್ಲದೇ, ಕೆಲಸದ ಮೂಲಕವೂ ಗುರುತಿಸಿಕೊಳ್ಳುವುದಾಗಿ ತಿಳಿಸಿದರು.ಮೇಲಾಗಿ ಈ ಕುರಿತು ಬೆಂಗಳೂರು, ಮಂಡ್ಯ ಮತ್ತು ಕೋಲಾರದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.