ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು, ಭಾರತೀಯತೆಯನ್ನು ಅರ್ಥೈಸುವುದು ಆಗಿದೆ ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಹಾಗೂ ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಗಳ ಸಹಯೋಗದಲ್ಲಿ ಈಚೆಗೆ ನಡೆದ “ಕನ್ನಡ ಸಂಸ್ಕೃತಿ ಮತ್ತು ಅಂಬೇಡ್ಕರ್ ಚಿಂತನೆಗಳು : ಅನುಸಂಧಾನ” ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಸರಳವಾಗಿ ಓದುವುದರಿಂದ, ಭಜನೆ ಮಾಡುವುದರಿಂದ ಪ್ರಯೋಜನವಿಲ್ಲ. ಸಂಕೀರ್ಣವಾಗಿ ಓದುವುದರ ಮೂಲಕ ಈ ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು. ಇದು ಅಂಬೇಡ್ಕರ್ ಅವರನ್ನು ಅಪವ್ಯಾಖ್ಯಾನ ಮಾಡುತ್ತಿರುವ ಕಾಲವಾಗಿದೆ. ಅಂಬೇಡ್ಕರ್ ಚಿಂತನೆಗಳನ್ನು ವಿರೋಧಿಸುತ್ತಿದ್ದವರೂ ಕೂಡ ಇಂದು ಅಂಬೇಡ್ಕರ್ ಅವರನ್ನು ಆರಾಧಿಸಲು ಶುರು ಮಾಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅನುಯಾಯಿಗಳು ಆರಾಧನೆ ಮಟ್ಟಕ್ಕೆ ಇಳಿಸಿದ್ದಾರೆ. ಅಂಬೇಡ್ಕರ್ ಅವರ ಬರಹಗಳಲ್ಲಿರುವ ವೈಚಾರಿಕತೆಯ ಜೀವ ತೆಗೆದು ಅವರ ವಿಚಾರಗಳನ್ನು ಮಂಡಿಸಲಾಗುತ್ತಿದೆ. ಅವರಿಗೆ ಸಂಬಂಧಿಸಿದ ಜಾಗಗಳನ್ನು ಯಾತ್ರಾಸ್ಥಳಗಳನ್ನಾಗಿ ಮಾಡಲಾಗುತ್ತಿದೆ. ಹೀಗೆ ನಿಜ ಅಂಬೇಡ್ಕರ್ ರನ್ನು ಮರೆಮಾಚಲಾಗುತ್ತಿದೆ ಎಂದು ತಿಳಿಸಿದರು.
ಎಂಥ ಅಪವ್ಯಾಖ್ಯಾನಗಳ ನಡುವೆಯೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಂಬೇಡ್ಕರ್ ಅವರನ್ನು ನಿಜ ಅರ್ಥದಲ್ಲಿ ಅರಿಯುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಪಂಚದ ಬೇರೆ ಬೇರೆ ದೇಶಗಳ ಹೋರಾಟಗಳಿಗೆ ಅಂಬೇಡ್ಕರ್ ಸ್ಪೂರ್ತಿಯಾಗಿದ್ದಾರೆ.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರಗಳನ್ನು ತೆರೆಯಲಾಗಿದೆ. ಅಂಬೇಡ್ಕರ್ ಅವರ ಚಿಂತನೆಯನ್ನು ಮೂವತ್ತಕ್ಕೂ ಹೆಚ್ಚು ಜ್ಞಾನಶಿಸ್ತುಗಳನ್ನು ಅನ್ವಯಿಸಿ ಅರ್ಥೈಸಬಹುದಾಗಿದೆ.
ಅಂಬೇಡ್ಕರ್ ಚಿಂತನೆಗಳನ್ನು ವರ್ತಮಾನಕ್ಕೆ ಅನ್ವಯಿಸಿ ನುಡಿಗಟ್ಟುಗಳ ಮೂಲಕ ಓದಿಕೊಳ್ಳಬೇಕು. ಇದರಿಂದ ಮಾತ್ರ ಅಂಬೇಡ್ಕರ್ ಜ್ಞಾನವನ್ನು ಸಮಾಜ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿದರು. ಅಂಬೇಡ್ಕರ್ ವಾದ ಅಪಮೌಲ್ಯಗೊಂಡಿರುವ ಈ ಸಂದರ್ಭದಲ್ಲಿ ಅದನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ಮಾರ್ಕ್ಸ್ ವಾದ ಹೇಗೆ ಮಾರ್ಕ್ಸ್ ನನ್ನು ದಾಟಿ ವಿವಿಧ ಆಯಾಮಗಳಿಂದ ಬೆಳೆಯುತ್ತಿದೆಯೋ ಹಾಗೆ ಅಂಬೇಡ್ಕರ್ ವಾದ ಕೂಡ ವ್ಯಕ್ತಿ ನೆಲೆಯಿಂದ ದಾಟಿ ಸಮುದಾಯಿಕ ನೆಲೆಗೆ ರೂಪಾಂತರಗೊಂಡು ಬೆಳೆಯಬೇಕಿದೆ. ಅದನ್ನು ಭಿನ್ನ ರೂಪಗಳಲ್ಲಿ ಮರು ವ್ಯಾಖ್ಯಾನ ಮಾಡಬೇಕಿದೆ. ಇಂದು ಅಂಬೇಡ್ಕರ್ ಚಿಂತನೆಗಳ ನಿಜ ಅರ್ಥವನ್ನು ಪಡೆಯುವಲ್ಲಿ ನಾವು ಸೋತಿದ್ದೇವೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಓದಲು ಗಂಭೀರವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದ ನಿರ್ದೇಶಕ ಸಿ.ಜಿ. ಲಕ್ಷ್ಮೀಪತಿ, ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷರಾದ ಡಾ. ಸಬಿತಾ ಬನ್ನಾಡಿ, ಉಪಾಧ್ಯಕ್ಷರಾದ ಡಾ. ಕುಂಸಿ ಉಮೇಶ್, ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಕುವೆಂಪು ವಿವಿ ಹಣಕಾಸು ಅಧಿಕಾರಿ ಡಾ. ಎಚ್.ಎನ್. ರಮೇಶ್, ಯುಗಧರ್ಮ ರಾಮಣ್ಣ ಮೊದಲಾದವರು ಉಪಸ್ಥಿತರಿದ್ದರು.