ʼಜನರಿಂದ ತಿರಸ್ಕೃತವಾಗಿ ಕೆಲಸವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವ ಮಾಜಿ ಸಂಸದ ಭಗವಂತ ಖೂಬಾ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಗರ ನಕ್ಸಲ್ ಎನ್ನುವಷ್ಟು ನೀಚ ರಾಜಕೀಯದ ಪರಮಾವಧಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಖಂಡಿಸಿದ್ದಾರೆ.
ʼಕಾಂಗ್ರೆಸ್ ಸಂಸದ ಹಾಗೂ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡಿರುವ ಖೂಬಾ 10 ವರ್ಷ ಸಂಸದರಾಗಿ, ನಂತರ ಕೇಂದ್ರ ಸಚಿವರಾಗಿ ಮಾಡಿದ್ದು ಶೂನ್ಯ ಸಾಧನೆ. ಜಿಲ್ಲೆಗೆ ಏನೂ ಕೊಡುಗೆ ನೀಡದ ಅವರು ಖಾಲಿ ಡಬ್ಬ ಇದ್ದಂತೆ. ಖಾಲಿ ಡಬ್ಬ ಸದಾ ಹೆಚ್ಚು ಶಬ್ದ ಮಾಡುತ್ತದೆʼ ಎಂದು ಲೇವಡಿ ಮಾಡಿದ್ದಾರೆ.
ʼಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ. ಪಂಚ ಗ್ಯಾರಂಟಿಗಳ ಮೂಲಕ ಕಡು ಬಡವರ ಜೀವನದಲ್ಲಿ ಹೊಸ ಹುರುಪು ತಂದಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಗಳ ಬಗ್ಗೆ ಮಾಜಿ ಸಂಸದರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕುʼ ಎಂದರು.
ʼಕೋವಿಡ್ ಕಾಲದಲ್ಲಿ ಬೀದರ್ ಜನತೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಬೀದಿಯಲ್ಲಿ ಬಿದ್ದಿದ್ದಾಗ ಅವರದೇ ಸರಕಾರ ಇದ್ದರೂ ಜನರ ನೆರವಿಗೆ ಖೂಬಾ ಬರಲಿಲ್ಲ. ಹೇಡಿಯಂತೆ ಬಚ್ಚಿಟ್ಟುಕೊಂಡಿದ್ದರು. ರೆಮಿಡಿಸಿವೀರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ನೊಂದವರ ಕಣ್ಣೀರು ಒರೆಸಲಿಲ್ಲ. ಖೂಬಾ ಜನವಿರೋಧಿ ನೀತಿಗೆ ಮತದಾರರೇ ಅವರನ್ನು ಸೋಲಿಸಿ ಮನೆಗೆ ಕಳಿಸಿದರು. ಈಗ ಕೆಲಸವಿಲ್ಲದ ಖೂಬಾ ನಿತ್ಯ ಪತ್ರಿಕಾ ಹೇಳಿಕೆ ನೀಡುತ್ತಾ ಕಾಲ ದೂಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ಬೀದರ್ | ಗ್ರಾಮದ ಸಮಸ್ಯೆ ಹೇಳಿದ್ರೆ ಬೆದರಿಕೆ ಹಾಕಿದ ಸಿಂಧನಕೇರಾ ಪಿಡಿಒ; ಕ್ರಮಕ್ಕೆ ಆಗ್ರಹ
ʼಶ್ವಾನ ಬೊಗಳಿದರೆ ಸ್ವರ್ಗಲೋಕಕ್ಕೆ ಕೇಡೆʼ ಎಂಬ ಗಾದೆ ಕನ್ನಡದಲ್ಲಿದೆ. ಹೀಗಾಗಿ ಇಷ್ಟು ದಿನ ತಾವು ಅವರ ಯಾವುದೇ ಹೇಳಿಕೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿರುವುದನ್ನು ನಾನು ಉಗ್ರ ಶಬ್ದಗಳಿಂದ ಖಂಡಿಸುತ್ತಿದ್ದೇನೆʼ ಎಂದು ಸಚಿವ ಈಶ್ವರ ಖಂಡ್ರೆ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.