ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಅರಣ್ಯ ವಾಸಿಗಳು ಶಿರಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರೀ ಮೆರವಣಿಗೆ ನಡೆಸಿ, ಅರಣ್ಯ ಭೂಮಿ ಹಕ್ಕು ಕಾಯಿದೆಯಡಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ವಿರುದ್ಧ 20,000ಕ್ಕೂ ಹೆಚ್ಚು ಆಕ್ಷೇಪಣಾ ಮೇಲ್ಮನವಿಗಳನ್ನು ಸಲ್ಲಿಸುವ ಮೂಲಕ ಐತಿಹಾಸಿಕ ಅಭಿಯಾನಕ್ಕೆ ಚಾಲನೆ ನೀಡಿದರು.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಈ ಮಹಾ ಪಾದಯಾತ್ರೆ-ಮಹಾಸಂಗ್ರಾಮ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಅರಣ್ಯ ವಾಸಿಗಳು, ಬುಡಕಟ್ಟು ಜನಾಂಗದವರು, ಆದಿವಾಸಿಗಳು, ಕರಾವಳಿಯ ತಗ್ಗು ಮತ್ತು ಗುಡ್ಡ ಪ್ರದೇಶದ ಮಹಿಳೆಯರು, ಯುವಕರು ಹಾಗೂ ವೃದ್ದರು ಸಹ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ಸರ್ಕಾರ ಅರ್ಜಿಗಳ ಪುನರ್ಪರಿಶೀಲನೆ ಮಾಡದೆ ಅವುಗಳನ್ನು ನೇರವಾಗಿ ಕೇಂದ್ರಕ್ಕೆ ಸಲ್ಲಿಸಿರುವುದಕ್ಕೆ ಅರಣ್ಯ ವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಿರಸ್ಕೃತ ಆದೇಶಗಳನ್ನು ಪ್ರದರ್ಶಿಸುತ್ತಾ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಮೇಲ್ಮನವಿಗಳಲ್ಲಿ ಕಾನೂನುಬಾಹಿರವಾಗಿ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಿರಸ್ಕೃತ ಆದೇಶಗಳನ್ನು ಜಾರಿಗೊಳಿಸಲಾಗಿದೆ ಎಂಬ ಆರೋಪ ಉಲ್ಲೇಖಿಸಿದರು. ಇದರ ಕುರಿತು ಈ ವರ್ಷದ ಫೆಬ್ರವರಿ 28ರಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಕೇಂದ್ರ ಸಚಿವರು ನೀಡಿದ ಉತ್ತರದ ಮಾಹಿತಿಯನ್ನು ಅರಣ್ಯ ವಾಸಿಗಳು ತಮ್ಮ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಆ ಉತ್ತರದ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ ಒಟ್ಟು 2,94,489 ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ ಕೇವಲ 16,326 ಅರ್ಜಿಗಳಿಗೆ ಮಾತ್ರ ಸಾಗುವಳಿ ಹಕ್ಕು ನೀಡಲಾಗಿದೆ. ಉಳಿದ 2,53,269 (87.77%) ಅರ್ಜಿಗಳನ್ನು ತಿರಸ್ಕರಿಸಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಇಲಾಖೆಯ ವರದಿಯ ಪ್ರಕಾರ, ಜಿಲ್ಲೆಯ ಮಟ್ಟದಲ್ಲಿ ಒಟ್ಟು 88,453 ಅರ್ಜಿಗಳು ದಾಖಲಾಗಿದ್ದು, ಕೇವಲ 2,867 (3.2%) ಅರ್ಜಿಗಳಿಗೆ ಮಾತ್ರ ಸಾಗುವಳಿ ಹಕ್ಕು ಮಂಜೂರಾಗಿದೆ. ಉಳಿದ 73,859 (82.76%) ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಜಿಲ್ಲಾಡಳಿತ ಸಜ್ಜು; ಡಿಬಿಟಿ ಮೂಲಕ ನಗದು ಜಮಾಕ್ಕೆ ಕ್ರಮ
ಈ ಹಿನ್ನೆಲೆಯಲ್ಲಿ, ಪುನರ್ಪರಿಶೀಲನೆ ಇಲ್ಲದೆ ತಿರಸ್ಕೃತ ಆದೇಶಗಳನ್ನು ಜಾರಿಗೊಳಿಸಿರುವುದನ್ನು ಅರಣ್ಯ ವಾಸಿಗಳು ಆಕ್ಷೇಪಿಸಿ, ಇದನ್ನು ಸರಿಪಡಿಸಿದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಹಕ್ಕಿನ ಪರ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.