ಸೆಪ್ಟೆಂಬರ್ 22 ರಿಂದ ಕರ್ನಾಟಕ ಸರಕಾರದ ಹಿಂದುಳಿದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುವ ಸಾಮಾಜಿಕ / ಶೈಕ್ಷಣಿಕ / ಆರ್ಥಿಕ ಸಮೀಕ್ಷೆಗೆ ಸಂಬಂದಿಸಿದಂತೆ ದಲಿತ ಸಂಘಟನೆಗಳು, ಪ್ರಗತಿಪರ ಚಳುವಳಿಯ ಮುಖಂಡರು ಹಾಗೂ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಜನಜಾಗೃತಿಯನ್ನು ಮೂಡಿಸಿ, ಸಮೀಕ್ಷೆಗೆ ಬಂದವರಲ್ಲಿ ಸ್ಪಷ್ಟವಾಗಿ ಧರ್ಮದ ಕಾಲಂ ನಂಬರ್ 08 ರಲ್ಲಿ ಬೌದ್ಧ ಎಂದು ನಮೂದಿಸುವ ಮೂಲಕ ಬಾಬಾಸಾಹೇಬರ ಆಶಯದಂತೆ ನಡೆದುಕೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಉಪಜಾತಿ ಕಾಲಂ ನಂಬರ್ 09 ರಲ್ಲಿ ಪರಿಶಿಷ್ಟ ಜಾತಿ ಎಂದು ಬರೆಸಬೇಕು.
ಉಳಿದಂತೆ ಉಪಜಾತಿ ಕಾಲಂ ನಂಬರ್ B. 044.1 ರಲ್ಲಿ ತಮ್ಮ ತಮ್ಮ ಉಪಜಾತಿಯನ್ನು ನಮೂದಿಸಿ ಅಂಬೇಡ್ಕರ್ ರವರ ಅನುಯಾಯಿಗಳಾಗಿ ಮುಂದುವರಿಯಬೇಕಾಗಿ ಕೋರಿಕೊಳ್ಳುತೇನೆ ಎಂದು ಹೇಳಿದ್ದಾರೆ.
ಬಾಬಾಸಾಹೇಬರು ಅಂದು 1956 ಅಕ್ಟೋಬರ್ 14 ರಂದು ನಾಗಪುರದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿ ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ ಅದು ನನ್ನ ಆಯ್ಕೆ ಆಗಿರಲಿಲ್ಲಾ, ಆದರೆ ಅಸಾಮಾನತೆಯಿಂದ ಕೂಡಿದ, ಮನುಷ್ಯರನ್ನು ಮನುಷ್ಯರಂತೆ ಕಾಣದ ಈ ಹಿಂದು ಧರ್ಮದಲ್ಲಿ “ಹಿಂದುವಾಗಿ ಸಾಯಲಾರೆ” ಎಂದು ಕರೆಕೊಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬಾಬಾಸಾಹೇಬರ ಈ ನಂಬಿಕೆಯನ್ನು ಹುಸಿಗೊಳಿಸದೇ ದಯವಿಟ್ಟು ಎಲ್ಲರೂ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸಬೇಕೆಂದು ವಿನಂತಿಸಿಕೊಂಡಿದ್ದಾರೆ.