ಮಳೆ ಹೆಚ್ಚಾದ ಕಾರಣ ತೊಗರಿ ಬೆಳೆ ಜಲಾವೃತವಾಗಿದ್ದು, ಬಂದ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ರೈತ ಸಂಘದ ಅಶೋಕ ಗೌಡ ಪಾಟೀಲ ಹಾಗೂ ರಾಷ್ಟ್ರೀಯ ರೈತ ಸಂಘದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಅಶೋಕಗೌಡ ಪಾಟೀಲ ಮಾತನಾಡಿ, “ತೊಗರಿ ಬೆಳೆ ಮಳೆಗೆ ಹಾನಿಯಾಗಿ ರೈತರು ಸಂಕಷ್ಟದಲ್ಲಿ ಜೀವನ ದೂಡುವಂತಾಗಿದೆ. ಹತ್ತಿ ಬೆಳೆ ಮಳೆಗೆ ಸಿಲುಕಿ ತಾಮ್ರ ರೋಗ ಬಂದು ಕಾಂಡ ಕೊರೆವ ಕುಲದ ಬಾಧೆಯಿಂದ ಸಂಪೂರ್ಣ ಹೂವು, ಮೊಗ್ಗುಗಳು ಸಂಪೂರ್ಣ ನಾಶವಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, “ತಾಲೂಕಿನಾದ್ಯಂತ ಈರುಳ್ಳಿ, ಅಲಸಂದಿ, ಶೇಂಗಾ, ಗೋವಿನ ಜೋಳದ ತೆನೆ ಕಾಳುಗಟ್ಟುವ ಮೊದಲೇ ಕೊಳೆತು ಹಾಳಾಗಿದೆ. ರೈತರ ಸರ್ವ ಬೆಳೆಗಳೂ ಕೂಡ ಸಂಪೂರ್ಣವಾಗಿ ನಾಶವಾಗಿವೆ. ಹೆಸರು, ಉದ್ದು, ಅಲಸಂದೆ, ಶೇಂಗಾ ಬೆಳೆಗಳು ಅನಾವೃಷ್ಟಿ ಸಂಪೂರ್ಣ ಒಣಗಿತ್ತು, ಇದೀಗ ಅತಿವೃಷ್ಟಿಯಿಂದ ರೈತನ ಒಂದು ವರ್ಷದ ಸಂಪೂರ್ಣ ಬದುಕು ಹಾಳಾಗಿ ಹೋಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
“ತೋಟಗಾರಿಕೆ ಬೆಳೆಯಾದ ಕಬ್ಬು, ದ್ರಾಕ್ಷಿ, ದಾಳಿಂಬೆ, ನಿಂಬೆ, ದಾಳಿಂಬೆ, ಚಿಕ್ಕೋ ಬೆಳೆಗಳು ಮಳೆಯ ನೀರಿನ ಪ್ರಮಾಣ ಜಾಸ್ತಿಯಾಗಿ ಈ ಎಲ್ಲಾ ಬೆಳೆಗಳು ನಾಶವಾಗಿವೆ. ಸರ್ಕಾರ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ಕೈಗೊಳ್ಳಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ರೈತ ಸಂಘದ ಮುಖಂಡರುಗಳಾದ ಹಣಮಂತ ವಡ್ಡರ, ಮೆಹಬೂಬ ಮನಗೂಳಿ, ಸಂಪತ್ ಜಮಾದಾರ, ಶರಣು ಕೌದಿ, ವಿಜಯಕುಮಾರ ಉಕ್ಕಲಿ, ಸಂಗು ಹುಣಸಗಿ, ಸುಭಾಷ್ ಸಜ್ಜನ ಇದ್ದರು.