ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೆ.ಅರಿವೇಸಂದ್ರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಗೆ ನೀಡಿದ ಲೈಂಗಿಕ ಕಿರುಕುಳ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ದೂರು ದಾಖಲಾದರೂ ಘಟನೆ ಮುಚ್ಚುವ ಕೆಲಸ ಮಾಡಿದ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ 28ಸಾವಿರ ಬಾಲ ಗರ್ಭಿಣಿಯರು ಇದ್ದಾರೆ. ಆದರೆ, ಇಂತಹ ಪ್ರಕರಣ ತಡೆ ಹಿಡಿಯುವ ಅಧಿಕಾರಿಗಳ ಸಂಖ್ಯೆ 53ಸಾವಿರ. ಆದರೂ ಕೆ.ಅರಿವೇಸಂದ್ರ ಗ್ರಾಮದಲ್ಲಿ ನಡೆದ ಸಣ್ಣ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಬೇಕಾದ ಅಧಿಕಾರಿಗಳು ಇಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಕರಣದಲ್ಲಿ ಶಾಮೀಲು ಆಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಆರೋಪಿಸಿದರು.
ಜವಾಬ್ದಾರಿಯುತ ಅಧಿಕಾರಿಗಳು ಕರ್ತವ್ಯ ಲೋಪದ ಜೊತೆಗೆ, ತಮ್ಮ ಸಮಾಜಮುಖಿ ಕರ್ತವ್ಯ ಮರೆತ ಕೆಲ ಪತ್ರಕರ್ತರು ಇಡೀ ಪ್ರಕರಣ ಬೆಳಕಿಗೆ ತರುವಲ್ಲಿ ಮುಂದಾಗದೇ ನೈಜತೆ ತಿಳಿಯದೆ ಆರೋಪಿ ಪರ ನಿಂತವರ ಜೊತೆ ಪ್ರಕರಣ ಮುಚ್ಚುವ ಕಾರ್ಯಕ್ಕೆ ಕೈ ಜೋಡಿಸಿರುವುದು ಶೋಚನೀಯ ಎಂದರು.
ಮಕ್ಕಳ ಹಕ್ಕು ಆಯೋಗ ಬರೆದ ಪತ್ರದಿಂದ ಬೆಳಕಿಗೆ ಬಂದ ಈ ಪ್ರಕರಣದಲ್ಲಿ, ಈ ಹಿಂದೆ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಮೇಲಾಧಿಕಾರಿಗಳು ಅವಲೋಕಿಸಬೇಕಿದೆ. ಘಟನೆ ನಡೆದ ಮರು ದಿನವೇ ಸಂತ್ರಸ್ತ ತಾಯಿ ಮಗು ಹೇಳಿಕೆ ನೀಡಿದ್ದರು ಎನ್ನುವ ಮಾಹಿತಿ ಇದ್ದು, ಈ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳು ತನಿಖೆಗೆ ಒಳಪಡಿಸಬೇಕು. ಪ್ರಕರಣ ಮರೆ ಮಾಚಲು ಯತ್ನಿಸಿದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.