ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ ರಾಜಕೀಯ ಮತ್ತು ಜನಾಂಗೀಯ ದ್ವೇಷವೇ ಕಾರಣ. ಹಿಂಸಾಚಾರದ ಹಿಂದೆ ವಿಭಜನಕಾರಿ ಶಕ್ತಿಗಳಿವೆ ಎಂದು ಪ್ರೊ. ಫಣಿರಾಜ್ ಹೇಳಿದ್ದಾರೆ.
ಮಣಿಪುರದಲ್ಲಿ ನಡೆದ ಇಬ್ಬರು ಮಹಿಳೆಯ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ, ಸಂತ್ರಸ್ತೆಯರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಉಡುಪಿಯಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಾವು ಯೋಚಿಸಿದಷ್ಟು ಸರಳೀಕೃತವಾಗಿಲ್ಲ. ಇದರ ಹಿಂದೆ ಆರ್ಎಸ್ಎಸ್ ಮತ್ತು ಬಿಜೆಪಿಯ ಹಿಂದುತ್ವದ ವಿಭಜನಕಾರಿ ನೀತಿ ಅಡಗಿದೆ. ಈ ನೀತಿ ಇಡೀ ಭಾರತದಾದ್ಯಂತ ಹಬ್ಬುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದೀಗ ಈಶಾನ್ಯ ಭಾರತದಲ್ಲಿ ಅದೇ ನೀತಿ ಅನುಸರಿಸಿ, ಬುಡಕಟ್ಟು ಜನರನ್ನು ವಿಭಜಿಸಿ ಆಳಲು ಪ್ರಯತ್ನಿಸುತ್ತಿದೆ. ಹಿಂಸಾಚಾರದ ವಿರುದ್ಧ ತುಟಿ ಬಿಚ್ಚದ ಪ್ರಧಾನಿ ವಿಭಜನಕಾರಿ ನೀತಿಗೆ ಅನುಮೋದನೆ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಣಿಪುರದ ಹಿಂಸಾಚಾರದಲ್ಲಿ ವಿಭಜನಕಾರಿ ನೀತಿಯೊಂದಿಗೆ ಬಂಡವಾಳಶಾಹಿಗಳ ಷಡ್ಯಂತ್ರವೂ ಇದೆ. ಕುಕಿ ಸಮುದಾಯ ವಾಸವಿರುವ ಗುಡ್ಡಗಾಡು ಪ್ರದೇಶಗಳನ್ನು ಅಕ್ರಮಿಸಿಕೊಳ್ಳುವ ಯತ್ನ ನಡೆಯುತ್ತಿದೆ. ಆ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಎಣ್ಣೆ ಬೀಜ ಬೆಳೆಸುವ ಹುನ್ನಾರ ಕೂಡ ನಡೆಯುತ್ತಿದೆ. ಆ ಪ್ರದೇಶವನ್ನು ಅದಾನಿಗೆ ಮಾರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಈ ಎಲ್ಲ ಕಾರಣಗಳಿಂದ ಎರಡು ಸಮುದಾಯದ ನಡುವೆ ಹಿಂಸಾಚಾರ ಸೃಷ್ಟಿಸಲಾಗಿದೆ” ಎಂದರು.
ಪ್ರತಿಭಟನೆಯಲ್ಲಿ ಮಾತನಾಡಿದ ಫಾ.ವಿಲಿಯಂ ಮಾರ್ಟಿಸ್, “ಮಣಿಪುರದಲ್ಲಿ ಅಲ್ಪಸಂಖ್ಯಾತ ಕುಕಿ ಸಮುದಾಯ ದೌರ್ಜನ್ಯಕ್ಕೊಳಕ್ಕಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಮೌನ ವಹಿಸಿದೆ. ಇಂತಹ ಸಮಯದಲ್ಲಿ ಸಂತ್ರಸ್ತರ ಪರವಾಗಿ ನಾವು ದನಿಯೆತ್ತರಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ದ.ಕ | ಭಾರೀ ಮಳೆ : ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಸನೆಟ್ ಬೋರ್ಬೊಝಾ ಮಾತನಾಡಿ, “ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಮಣಿಪುರದಲ್ಲಿ ಯುವತಿಯರ ಮೇಲೆ ನಡೆದ ಕೃತ್ಯ ಅಮಾನವೀಯವಾದದ್ದು ಇಂತಹ ಘಟನೆಯನ್ನು ಖಂಡಿಸದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಾಗುದಿಲ್ಲ. ಮಹಿಳೆಯರ ಘನತೆಯ ರಕ್ಷಣೆ ಕೇವಲ ಘೋಷಣೆ ಮಾಡಲಾಗುತ್ತದೆ. ಆದರೆ ವಾಸ್ತವಿಕತೆ ಬೇರೆ ಇದೆ. ಮಹಿಳೆಯರ ಘನತೆಯನ್ನು ಗೌರವಿಸುವ ಸಮಾಜ ಹುಟ್ಟು ಹಾಕಬೇಕು” ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರ್ ಬೆಟ್ಟು, ಎಸ್ಐಓ ರಾಜ್ಯ ಕಾರ್ಯದರ್ಶಿ ಅಫ್ವಾನ್ ಹೂಡೆ, ಸಾಲಿಡಾರಿಟಿ ಹೂಡೆ ಘಟಕಾಧ್ಯಕ್ಷ ಜಾಬೀರ್ ಖತೀಬ್, ಸಾಲಿಡಾರಿಟಿ ಮಲ್ಪೆ ಕಾರ್ಯದರ್ಶಿ ಶುಐಬ್ ಮಲ್ಪೆ, ಉಡುಪಿಯ ಕಾರ್ಯದರ್ಶಿ ಫೈಸಲ್ ಉಡುಪಿ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಕುಲ್ಸುಮ್ ಅಬುಬಕ್ಕರ್ ಇದ್ದರು.