ಸಾವಿರಾರು ಕುಟುಂಬಗಳು ಇಂದಿಗೂ ಅರಣ್ಯ ಭೂಮಿಯಲ್ಲಿ ವಾಸ ಮಾಡಿಕೊಂಡಿದ್ದು, ಜೀವನಾಧಾರಕ್ಕಾಗಿ ಅದೇ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬದುಕುತ್ತಿವೆ. ಆ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ಸುಮಾರು 3 ದಶಕಗಳಿಂದ ಹೋರಾಟ ಮಾಡುತ್ತಲೇ ಇದ್ದು, ಇಂದಿಗೂ ಸರಿಯಾದ ನೆಲೆ ಸಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ವಾಸಿ ಕುಟುಂಬಗಳು ತಮ್ಮ ಹಕ್ಕುಗಳನ್ನು ಸರ್ಕಾರ ಮಾನ್ಯ ಮಾಡಿ ಆ ಭೂಮಿ ಉಳಿಸಿಕೊಡುವ ಹಾಗೂ ಸೂರೊಂದನ್ನು ಕಲ್ಪಿಸಿಕೊಡುವ ನಿರೀಕ್ಷೆಯಲ್ಲಿ ಕಾಯುತ್ತಿವೆ.
ಉ.ಕ ಜಿಲ್ಲೆಯಾದ್ಯಂತ ಸುಮಾರು 88543 ಅರಣ್ಯವಾಸಿ ಕುಟುಂಬಗಳಿವೆ. ಅರಣ್ಯ ಭೂಮಿಯಲ್ಲಿ ತಮ್ಮ ಮನೆ ಮಾಡಿಕೊಂಡು ಮತ್ತು ಜೀವನದ ಆಧಾರಕ್ಕೆ ಅರಣ್ಯ ಭೂಮಿ ಮೇಲೆ ಅವಲಂಬಿತವಾಗಿರುವ ಇವರು ತಮ್ಮ ಭೂಮಿ ಉಳಿಸಿಕೊಳ್ಳಲು ಹಾಗೂ ತಮ್ಮ ಹಕ್ಕಿಗಾಗಿ ಜಿಲ್ಲೆಯಲ್ಲಿ ಕಾನೂನಾತ್ಮಕ ಹೋರಾಟ ಪ್ರಾರಂಭಿಸಿ ಇಂದಿಗೆ (ಸೆ.13) 34 ವರ್ಷ ಪೂರೈಸಲಿದೆ. 3 ದಶಕದಿಂದ ಮಾಡುತ್ತಿರುವ ಈ ಹೋರಾಟ ಇನ್ನೂ ಅರ್ಜಿ ಪರಿಶೀಲನೆ ಹಂತದಲ್ಲಿದೆ ಎಂದರೆ, ಆಡಳಿತ ವ್ಯವಸ್ಥೆ ಹಾಗೂ ಜಿಲ್ಲೆಯ ರಾಜಕಾರಣಿಗಳು ಅರಣ್ಯ ವಾಸಿಗಳ ಮೇಲೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ. 3 ದಶಕವಾದರೂ ತಮ್ಮ ನಂಬಿಕೆ ಮತ್ತು ಹೋರಾಟವನ್ನು ಬಿಡದ ಇವರು ನಮ್ಮ ಮನೆ, ನಮ್ಮ ಜಮೀನು, ನಾವು ವಾಸಿಸುವ ಭೂಮಿ ಮೇಲೆ ನಮ್ಮ ಹಕ್ಕು ನಮಗೆ ಇಂದಲ್ಲಾ ನಾಳೆ ಸಿಗುತ್ತದೆ ಎಂಬ ಆಶಾಭಾವನೆ ಮೇಲೆ ಜೀವನವನ್ನು ಸಾಗಿಸುತ್ತಿದ್ದಾರೆ.

ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಮಾಡಿರುವ ಮತ್ತು ಅರಣ್ಯ ಭೂಮಿ ಸಾಗುವಳಿ ಮೇಲೇ ಅವಲಂಬಿತರಾಗಿರುವ ಜಿಲ್ಲೆಯ ಅರಣ್ಯವಾಸಿಗಳ ಹಕ್ಕಿಗಾಗಿ, ಕಳೆದ ಮೂರು ದಶಕಗಳಿಂದ ಹೋರಾಟದ ದೀಪ ಹಿಡಿದವರು ಜಿಲ್ಲೆಯ ಸಮಾಜ ಸೇವಕ ರವೀಂದ್ರ ನಾಯ್ಕ ಅವರು. 1990ರ ದಶಕದ ಪ್ರಾರಂಭದಲ್ಲಿ ಸಂಘಟನೆಯನ್ನು ಬಲಪಡಿಸಿ, ಜಿಲ್ಲೆಯ ಸಾವಿರಾರು ಅರಣ್ಯವಾಸಿಗಳಿಗೆ ಧೈರ್ಯ ತುಂಬಿದವರು. ಪಾದಯಾತ್ರೆಗಳಿಂದ ಹಿಡಿದು ಕಾನೂನು ಹೋರಾಟಗಳವರೆಗೆ ನೇತೃತ್ವ ವಹಿಸಿದರು. ಒಬ್ಬರಿಂದ ಪ್ರಾರಂಭಿಸಿ ಅದನ್ನು ಜಿಲ್ಲೆಯ ಅರಣ್ಯ ಭೂಮಿ ವಾಸಿಗಳು ತಮ್ಮ ಭೂಮಿ ಹಕ್ಕು ಉಳಿಸಿಕೊಳ್ಳಲು ತಾವೇ ಬೀದಿಗೆ ಇಳಿದು ಚಳವಳಿ ಮಾಡುವಂತೆ ಪ್ರೇರೇಪಿಸುವಲ್ಲಿ ಯಶಸಿಯಾಗಿರುವವರು.
1991ರಲ್ಲಿ ಅರಣ್ಯ ಭೂಮಿ ಹಕ್ಕಿಗಾಗಿ ಸಂಘಟನೆಯ ಅಡಿಪಾಯ ಹಾಕಿದ ರವೀಂದ್ರ ನಾಯ್ಕ, “ಹಕ್ಕು ಸಿಗದಿದ್ದರೆ ಬದುಕು ಕುಸಿಯುತ್ತದೆ” ಎಂಬ ನಂಬಿಕೆಯಿಂದ ಹೋರಾಟಕ್ಕೆ ತೊಡಗಿದರು. ಮುಂದಿನ ಮೂರು ದಶಕಗಳಲ್ಲಿ 5,000 ಕ್ಕೂ ಹೆಚ್ಚು ಪ್ರತಿಭಟನೆಗಳು, ಪಾದಯಾತ್ರೆಗಳು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
2019ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳ ಪರವಾಗಿ ಸಂಘಟನೆಯೇ ಹೋರಾಡಿದುದು ಹೋರಾಟದ ಇತಿಹಾಸದಲ್ಲೊಂದು ಪ್ರಮುಖ ತಿರುವಾಯಿತು.

ಕಳೆದ ಮೂರು ದಶಕದಿಂದ ಅರಣ್ಯ ಹಕ್ಕು ಮಂಜೂರಿಗೆ ಸಂಬಂಧಪಟ್ಟಂತೆ ಕಾಲಕಾಲದಲ್ಲಿ 13 ಬಾರಿ ಅರ್ಜಿ ಸ್ವೀಕರಿಸಲಾಗಿದೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 18 ವರ್ಷಗಳಾದರೂ, ಇಂದಿನವರೆಗೆ ಆ ಕಾನೂನು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಇದುವರೆಗೆ 80000 ಕ್ಕಿಂತ ಹೆಚ್ಚು ಅರಣ್ಯವಾಸಿಗಳಿಂದ ಅರ್ಜಿ ಸ್ವೀಕರಿಸಲಾಗಿದೆ. 1978ರ ಪೂರ್ವದ 2513– ಅರಣ್ಯವಾಸಿಗಳಿಗೆ ಭೂಮಿ ಮಂಜೂರಿ ಅರ್ಹತೆ ಇದ್ದರೂ, ಅವರಿಗೆ ಇನ್ನೂ ಹಕ್ಕು ಪತ್ರ ವಿತರಣೆಯಾಗಿಲ್ಲ. ಅರಣ್ಯ ಸಂರಕ್ಷಣಾ ಕಾಯಿದೆ 1980ಕ್ಕಿಂತ ಪೂರ್ವದಿಂದ ಇರುವ ಸುಮಾರು 6156ಕ್ಕಿಂತ ಹೆಚ್ಚು ಇರುವ ಸಾಗುವಳಿದಾರರಿಗೆ ಖಾಯಂ ಲಾವಣಿ ಹಕ್ಕುಪತ್ರ ಕೂಡ ಸಿಕ್ಕಿಲ್ಲ. ಅದು ಇಂದಲ್ಲಾ ನಾಳೆ ಸಿಗಬಹುದು ಎಂಬ ನೀರಿಕ್ಷೆಯೊಂದೇ ಈಗವರ ಪಾಲಿಗೆ.
2015ರ ಮಾರ್ಚ್ನಲ್ಲಿ 3ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಸರ್ಕಾರದ ಹಂತದಲ್ಲಿನ ಪರಿಶೀಲನೆ ಇಂದಿನವರೆಗೂ ಪ್ರಗತಿ ಹೊಂದಿಲ್ಲ. ಅರಣ್ಯವಾಸಿಗಳ ಪರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಂಜೂರಿ ಸಂಬಂಧ ಸರ್ಕಾರಗಳು ಒಂದು ಸ್ಪಷ್ಟ ನೀತಿಗೆ ಬರಬೇಕಾಗಿದೆ. ಇಲ್ಲದಿದ್ದಲ್ಲಿ, ಸುಪ್ರೀಂ ಕೋರ್ಟ್ನಿಂದ ಅನಧಿಕೃತ ಒತ್ತುವರಿದಾರರೆಂದು ತೀರ್ಪು ಬಂದರೆ ಅವರನ್ನು ಆ ಜಾಗದಿಂದ ಒಕ್ಕಲೆಬ್ಬಿಸಬಹುದೆಂಬ ಭೀತಿ ಅರಣ್ಯವಾಸಿಗಳಿಗೆ ಎದುರಾಗಿದೆ.
ಅರಣ್ಯವಾಸಿಗಳ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ, ರವೀಂದ್ರ ನಾಯ್ಕ ನೇತೃತ್ವದ ಸಂಘಟನೆಯು ಪ್ರತಿವರ್ಷ ‘ದಶಲಕ್ಷ ಗಿಡ ನೆಡುವ ಅಭಿಯಾನ’ ನಡೆಸುತ್ತಿರುವುದು ಗಮನಾರ್ಹ. ಹೋರಾಟದ ಜೊತೆಗೆ ಪರಿಸರದತ್ತ ಜವಾಬ್ದಾರಿತನ ತೋರಿಸಿರುವ ಈ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ.

ಪರಿಸರ ಸಂಘಟನೆಗಳ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅನಧಿಕೃತ ಅರಣ್ಯವಾಸಿಗಳನ್ನು ಹೊರಹಾಕುವ ಸಂಭವವನ್ನು ಸೃಷ್ಟಿಸಿದೆ. ಈ ತೂಗುಗತ್ತಿಯ ನಡುವೆಯೇ, ರವೀಂದ್ರ ನಾಯ್ಕ ಅವರ ನೇತೃತ್ವದ ಸಂಘಟನೆ ಅರಣ್ಯವಾಸಿಗಳ ಪರವಾಗಿ ಹೋರಾಟವನ್ನು ನಿರಂತರವಾಗಿ ಮುಂದುವರೆಸುತ್ತಿರುವುದು ಇಂದಿನ ಅರಣ್ಯ ಹೋರಾಟಕ್ಕೆ ಬಲವಾದ ಆಧಾರವಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಭಾರತೀಯ ಸೇನೆ ಸೇರ ಬಯಸುವ ಹಿಂದುಳಿದ ವರ್ಗದ ಯುವಕರಿಗೆ ಉಚಿತ ತರಬೇತಿ
“ಅರಣ್ಯವಾಸಿಗಳ ಹಕ್ಕುಗಳು ಕಾಗದದಲ್ಲೇ ಉಳಿಯುತ್ತವೆ ಎನ್ನುವ ಆರೋಪ ಹೆಚ್ಚು ಕೇಳಿಬರುತ್ತಿರುವ ಈ ಸಂದರ್ಭಗಳಲ್ಲಿ ಸರ್ಕಾರಗಳು ಈ ಕುರಿತು ಸ್ಪಷ್ಟ ನೀತಿಗಳನ್ನು ಜಾರಿಗೆ ತರಲೇಬೇಕು. ಇಲ್ಲವಾದರೆ ಅರಣ್ಯವಾಸಿಗಳ ಬದುಕೇ ಕತ್ತಲಲ್ಲಿ ಮುಳುಗುತ್ತದೆ” ಎಂದು ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.