ಸಮಕಾಲೀನ ಕಾವ್ಯಗಳು ನಿವೇದನಾತ್ಮಕವಾಗಿವೆ. ಸಮಕಾಲೀನದಲ್ಲಿ ಭಾಷೆಗಳು ಸಂಕುಚಿತಗೊಳ್ಳುತ್ತಿದ್ದು, ಇವು ಕಣ್ಣಿಗೆ ಕಾಣದ ಹಿಂಸೆಯಾಗಿ ಪರಿವರ್ತನೆಗೊಂಡಿವೆ ಎಂದು ಕವಿ, ಅನುವಾದಕ ಆರಿಫ್ ರಾಜಾ ಅಭಿಪ್ರಾಯಪಟ್ಟರು.
ವಿಜಯನಗರದ ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ʼಕವಿತೆಗಳ ಓದು ಹಾಗೂ ಸಂವಾದ ಸಮಕಾಲೀನ ಭಾರತೀಯ ಕಾವ್ಯ ಸಂವೇದನೆಯ ಸ್ವರೂಪʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವು 90ರ ದಶಕದ ನಂತರ ದಲಿತ ಕಾವ್ಯಗಳ ಸಾಹಿತ್ಯದಲ್ಲಾದ ಏರುಪೇರುಗಳತ್ತ ಗಮನಹರಿಸಬೇಕು. ಕಾವ್ಯಗಳು ಕಲಾತ್ಮಕ ಮೌಲ್ಯಕ್ಕಿಂತ ಆತ್ಮಾವಲೋಕನಕ್ಕೆ ಹೆಚ್ಚು ಒತ್ತು ನೀಡಿದೆ. ಇನ್ನೂ ಅಮೂರ್ತ ಚಿಂತನೆಗೆ ನಾವು ಹೆಚ್ಚು ಹೊತ್ತು ನೀಡಬಾರದು ಎಂದು ನುಡಿಯುತ್ತ, ಹೆದರುವಂತಹ ಲೇಖಕ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡುವುದಿಲ್ಲ. ಸಮಕಾಲೀನ ಕಾವ್ಯಗಳು ವಾಸ್ತವವಾಗಿರಬೇಕು” ಎಂದರು.
ಡಾರ್ಜಲಿಂಗ್ನ ಕವಿ ಮತ್ತು ಪತ್ರಕರ್ತ ಮನೋಜ್ ಬೋಗಾಟಿ ಅವರು ತಮ್ಮ ‘ಇದು ಶಾಲೆಯಲ್ಲ ಅಡುಗೆ ಮನೆ’ ಮತ್ತು ‘ಅಮೆರಿಕ ಹೆದುರುತ್ತದೆ’ ಎಂಬ ಕಾವ್ಯಗಳ ಮೂಲಕ ತಮ್ಮ ಗೋರ್ಖ ಸಮುದಾಯದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿ, “ಡಾರ್ಜಲಿಂಗ್ನ ಚಹಾ ಜಗತ್ತಿನಾದ್ಯಂತ ತುಂಬಾ ಫೇಮಸ್. ಉತ್ತಮ ಗುಣಮಟ್ಟದ ಚಹಾಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತದೆ. ಆದರೆ ಅದೇ ಚಹಾದ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಡಿಮೆ ಕೂಲಿ ಸಿಗುತ್ತದೆ. ಇಲ್ಲಿಂದ ಆರಂಭವಾದ ತಾರತಮ್ಯ ಸ್ಥಳೀಯರ ಬದುಕು, ಭಾಷೆ, ಸಂಸ್ಕೃತಿಯ ಮೇಲೆ ಪ್ರಭಾವ ಬೀರಿ ಸ್ಥಳೀಯರ ಅಸ್ಮಿತೆಗೆ ಧಕ್ಕೆ ಉಂಟಾಗಿದೆ. ಅನ್ಯ ಭಾಷೆ ಏರಿಕೆಯಿಂದ ಎಲ್ಲ ಕ್ಷೇತ್ರದಲ್ಲಿಯೂ ಬುಡಕಟ್ಟು ಸಮುದಾಯಗಳ ಅನನ್ಯತೆ ಕಣ್ಮರೆಯಾಗಿವೆ ಎಂದಿದ್ದರು” ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ. ಎಫ್ ಟಿ ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನೇಪಾಳಿ ಸಾಹಿತ್ಯದ ಘಟನೆಗಳನ್ನು ನಾವೆಲ್ಲರೂ ಅರಿಯಬೇಕು. ಕಾವ್ಯಗಳ ಅಧ್ಯಯನದ ಜೊತೆಗೆ ಅಲ್ಲಿನ ಸ್ಥಳೀಯ ಭಾಷೆಯ ಧೋರಣೆಯನ್ನು ಅಧ್ಯಯನ ಮಾಡಿದಾಗ ಸ್ಥಳೀಯ ಜೀವನ ಮತ್ತು ಬದುಕನ್ನು ತಿಳಿಯಬಹುದು” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಸುಕ್ರಿ ಮಾತೆ ನಿಧನಕ್ಕೆ ಹಂಪಿ ಕನ್ನಡ ವಿವಿ ಸಂತಾಪ
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ, ವಿವಿಧ ನಿಕಾಯಗಳ ಡೀನ್ಗಳು, ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
