ವಿಜಯನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವೈದ್ಯಕೀಯ ಕಾಲೇಜನ್ನು ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲೇ ಸ್ಥಾಪಿಸಲು ಹಾಗೂ ಪಿಪಿಪಿ ಮಾದರಿಯನ್ನು ಕೈಬಿಡಲು ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಆಗ್ರಹಿಸಿದೆ. ಈ ಸಂಬಂಧ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ ಮಾರ್ಗವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಟೀನಾ ಸೇವೂರ್ ಮಾತನಾಡುತ್ತಾ, “ಪಿಪಿಪಿ ಮಾದರಿ ತರುತ್ತಿರುವುದನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ವಿರೋಧಿಸುತ್ತಿದ್ದೇವೆ. ಬಡಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆಯುತ್ತದೆಯೇ? ಖಾಸಗಿಯವರಿಗೆ ವಹಿಸಿಕೊಟ್ಟರೆ ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಅವಕಾಶ ಮಾಡಿಕೊಟ್ಟಂತೆ” ಎಂದರು.
ಹೋರಾಟ ಸಮಿತಿ ಸದಸ್ಯ ಬಿ ಭಗವಾನ್ ರೆಡ್ಡಿ ಮಾತನಾಡಿ, “ಸರಕಾರಿ ಆಸ್ಪತೆಗೆ ಸೂಕ್ತವಾದ ಸುಮಾರು 149 ಎಕರೆಗೂ ಹೆಚ್ಚು ಸ್ಥಳಾವಕಾಶ ಸರಕಾರಿ ಆಸ್ಪತ್ರೆ ಆವರಣದಲ್ಲಿದೆ. ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ರಾಜ್ಯದ ಈ ತರ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ ಬೇರೊಂದು ಇಲ್ಲ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಂಪೂರ್ಣ ಸರ್ಕಾರಿ ಒಡೆತನದ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಪಿ ಪಿ ಪಿ ಮಾದರಿ ಅಳವಡಿಸುವ ಯೋಚನೆ ಕೈಬಿಡದಿದ್ದರೆ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ವಿಜಯಪುರ | ಮಹಿಳಾ ಸಬಲೀಕರಣದತ್ತ ʼಒಡಲ ಧ್ವನಿ ಒಕ್ಕೂಟʼದ ಹೆಜ್ಜೆ; ರೈತರಿಗೆ ಕೃಷಿ ಪರಿಕರ ವಿತರಣೆ
ಜಿಲ್ಲೆಯ ಹಿರಿಯ ಸಾಹಿತಿ ಸುಭಾಷ್ ಯಾದವಾಡ ಮಾತನಾಡಿ, “ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು. ಎಲ್ಲಾ ಮಕ್ಕಳು ಕಡಿಮೆ ಹಣದಿಂದ ವೈದ್ಯಕೀಯ ಶಿಕ್ಷಣ ಪಡೆಯಬಹುದು. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ” ಎಂದು ಕರೆ ಕೊಟ್ಟರು.
ಈ ವೇಳೆ ಹಿರಿಯ ಪತ್ರಕರ್ತ ಅನಿಲ್ ಹೊಸಮನಿ, ಅರವಿಂದ ಕುಲಕರ್ಣಿ, ಚಂದ್ರಶೇಖರ ಘಂಟೆಪಗೋಳ, ಫಾದರ್ ಕೆವಿನ್, ಲಲಿತಾ ಬಿಜ್ಜರಗಿ, ಜಗದೇವ್ ಸೂರ್ಯವಂಶಿ, ಮಲ್ಲಿಕಾರ್ಜುನ ಬಟಗಿ, ಅಕ್ರಮ ಮಾಷಳಕಾರ್, ಶ್ರೀನಾಥ್ ಪೂಜಾರಿ, ಬೋಗೇಶ್ ಸೊಲಾಪುರ, ದಸ್ತಗಿರಿ ಉಕ್ಕಲಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಹೆಚ್,ಕಾವೇರಿ ರಜಪೂತ, ಸಿದ್ಧಲಿಂಗ ಬಾಗೇವಾಡಿ,ಮಹದೇವಿ ಧರ್ಮಶೆಟ್ಟಿ, ಶಶಿಕಲಾ ಮ್ಯಾಗೇರಿ, ಸುರೇಖಾ ರಜಪೂತ, ಅನುಸೂಯ ಕಾಂಬಳೆ, ಮಲ್ಲಿಕಾರ್ಯನ ಬಟಗಿ, ಜಾಬುರಾವ್ ಬೀರಕಬ್ಬಿ ಇದ್ದರು.