- ಸಿನಿಮಿಯ ರೀತಿಯಲ್ಲಿ ಆರೋಪಿಗಳ ಬೆನ್ನಟ್ಟಿದ ಪೊಲೀಸರು
- ಕಾರು ಮರಕ್ಕೆ ಡಿಕ್ಕಿಹೊಡೆದಿದ್ದರಿಂದ ಅಲ್ಲಿಯೇ ಬಿಟ್ಟು ಪರಾರಿ
ಕೊಡಗು ಜಿಲ್ಲೆ ನಾಪೋಕ್ಲು ಬಳಿಯ ಕಕ್ಕಬ್ಬೆ ಕುಂಜಿಲ ಗ್ರಾಮದಿಂದ ಅಕ್ರಮವಾಗಿ ಕಾಡುಕೋಣದ ಮಾಂಸ ಸಾಗಾಟ ಮಾಡುತ್ತಿದ್ದ ಕೇರಳ ರಾಜ್ಯದ ನೋಂದಣಿ ಹೊಂದಿರುವ ಕಾರನ್ನು ಸೀನಿಮಿಯ ರೀತಿಯಲ್ಲಿ ಬೆನ್ನಟ್ಟಿ, ವಶಕ್ಕೆ ಪಡೆದುಕೊಳ್ಳುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಪೋಕ್ಲು ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮದಿಂದ ಶುಕ್ರವಾರ ಮದ್ಯರಾತ್ರಿ ಕೇರಳ ರಾಜ್ಯದ (KL-26-L-8042) ನೊಂದಣಿ ಹೊಂದಿರುವ ವ್ಯಾಗನಾರ್ ಕಾರಿನಲ್ಲಿ ಅಕ್ರಮವಾಗಿ ಕಾಡುಕೋಣ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ನಾಪೋಕ್ಲು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ವಾಹನದೊಂದಿಗೆ ಆರೋಪಿಗಳು ಪರಾರಿ ಯಾಗಲು ಯತ್ನಿಸಿದ್ದಾರೆ.
ಆರೋಪಿಗಳನ್ನು ಸೆರೆ ಹಿಡಿಯಲು ಸಿನಿಮಿಯ ರೀತಿಯಲ್ಲಿ ಬೆನ್ನಟ್ಟಿದ ನಾಪೋಕ್ಲು ಪೊಲೀಸರು ಮಡಿಕೇರಿ ಗ್ರಾಮಾಂತರ ಪೋಲೀಸರ ಸಹಕಾರದೊಂದಿಗೆ ಮಡಿಕೇರಿ ಸಮೀಪದ ಮೇಕೇರಿ ಸುಭಾಷ್ ನಗರ ಗ್ರಾಮದ ರಸ್ತೆಯಲ್ಲಿ ಸಂಚರಿಸುವಾಗ ಆರೋಪಿಗಳ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದರಿಂದ ಸಂಚರಿಸಲಾಗದೆ ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನ ಸಮೇತ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆಬಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಕರಣವನ್ನು ಅರಣ್ಯ ವನ್ಯಜೀವಿ ಸಂರಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚಿಸಿ ತೀರ್ಮಾನ: ಪಶುಸಂಗೋಪನೆ ಸಚಿವ ವೆಂಕಟೇಶ್