ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಹಾಗೂ ಭೀಮ ನದಿ ಅಪಾಯ ಮಟ್ಟ ಮೀರಿ ಹರಿದ ಹಿನ್ನೆಲೆ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದೆ. ಅಧಿಕಾರಿಗಳು ಈಗಾಗಲೇ ಬೆಳೆಹಾನಿ ಸಮೀಕ್ಷೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಸಮೀಕ್ಷೆ ನಡೆಸಿ ಬೆಳೆ ನಷ್ಟದ ಕುರಿತು ವರದಿಯನ್ನು ಸಿದ್ದಪಡಿಸಲಿದ್ದು, ಆ ವರದಿಯಂತೆ ಸರ್ಕಾರ ಪರಿಹಾರ ನೀಡಲಿದೆ ಎಂದು ಸಂಸದ ಜಿ.ಕುಮಾರ ನಾಯಕ ತಿಳಿಸಿದರು.
ಯಾದಗಿರಿ ತಾಲ್ಲೂಕಿನ ಯಾದಗಿರಿ ಬಿ,ನಾಯ್ಕಲ್, ಗುರುಶಿಣಗಿ, ಹತ್ತಿಗೂಡುರ್ ಗ್ರಾಮ ವ್ಯಾಪ್ತಿಯ ಸೀಮಾಂತರದಲ್ಲಿ ಬೆಳೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯ ರೈತರೊಂದಿಗೆ ಮಾತನಾಡಿ ಮಾಹಿತಿ ಪಡೆದರು.

ನೆರೆಪೀಡಿತ ಪ್ರದೇಶಗಳಿಗೆ ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರ, ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ನಾನು ಕೂಡ ನಿರಂತರವಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ. ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆಗೆ ನಿಮ್ಮ ನಿಮ್ಮ ಗ್ರಾಮಗಳಿಗೆ ಬರುತ್ತಾರೆ, ಆ ಸಂರ್ಭದಲ್ಲಿ ಬೆಳೆಹಾನಿ ಬಗ್ಗೆ ಸಂಪೂರ್ಣ ವಿವರವನ್ನು ರೈತರು ನೀಡಬೇಕೆಂದು ಅವರು ಸೂಚನೆ ನೀಡಿದರು.
ಇದನ್ನೂ ಓದಿ: ಯಾದಗಿರಿ | ರೈತರ ಪರ ಎಐಕೆಕೆಎಂಎಸ್,ಎಸ್ಯುಸಿಐ(ಸಿ) ಬೃಹತ್ ಪ್ರತಿಭಟನೆ
ಅಧಿಕಾರಿಗಳು ರೈತರಿಗೆ ಅನ್ಯಾಯವಾಗದಂತೆ ಸರಿಯಾದ ರೀತಿಯಲ್ಲಿ ಹಾನಿಯಾದ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಹತ್ತಿ, ಭತ್ತ, ತೊಗರಿ, ಜೋಳ ಸೇರಿದಂತೆ ಈಗ ಬಿತ್ತನೆಯಾದ ಎಲ್ಲ ಬೆಳೆಗಳ ಸಮೀಕ್ಷೆ ಮಾಡಬೇಕು. ಸಮೀಕ್ಷೆ ಮುಗಿದ ನಂತರ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರದ ಎನ್ಡಿಆರ್ಎಫ್ ನಿಧಿಯಿಂದ ತಮಗೆ ಪರಿಹಾರ ದೊರಕುವ ಭರವಸೆ ಇದೆ. ಒಂದು ವೇಳೆ ಕೇಂದ್ರ ಸರ್ಕಾರವು ಪರಿಹಾರ ನಿಧಿಯನ್ನು ನೀಡುವುದಕ್ಕೆ ತಡವಾದರೆ ನಾನು ಕೇಂದ್ರಕ್ಕೆ ಪತ್ರವನ್ನು ಬರೆದು ಈ ಭಾಗದ ರೈತರಿಗೆ ಕೂಡಲೇ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್, ಕೃಷಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಮೇಟಿ, ಸುದರ್ಶನ ನಾಯಕ್, ಶಾಂತಗೌಡ ನಾಯ್ಕಲ್, ಎಮ್.ಡಿ.ಖಾಜಾ ಮಿರ್ಚಿ, ರಮೇಶ್ ದೊರೆ, ವೆಂಟಕೇಶ್ ಬೇಟೆಗಾರ್, ಸೇರಿದಂತೆ ಅನೇಕ ರೈತರು ಸಾರ್ವಜನಿಕರು ಹಾಜರಿದ್ದರು.