ಮೀನುಗಾರರ ಕುಟುಂಬಗಳಿಗೆ ನಿವೇಶನ, ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ(ಆರ್) ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ (ಕ್ರಾಂತಿಕಾರಿ) ಯಾದಗಿರಿ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಸಿ, ವಡಗೇರಾ ತಹಸೀಲ್ದಾರರ ಮುಖಾಂತರ ಯಾದಗಿರಿ ಜಿಲ್ಲಾಧಿಕಾರಿಗೆ
ಮನವಿ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, “2024ರ ಅಕ್ಟೋಬರ್ 21ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ರವರು ವಡಗೇರಾ ತಾಲೂಕಿನ ಕದರಾಪೂರ ಗ್ರಾಮದ ಕೃಷ್ಣಾ ನದಿಯ ದಡದಲ್ಲಿರುವ ಮೀನುಗಾರರ ಗುಡಿಸಲುಗಳಿಗೆ ಭೇಟಿ ಕೊಟ್ಟು, ಇವರಿಗೆ ಖಾಯಂ ಆಗಿ ಒಂದು ಕಡೆ ವಾಸಿಸಲು ಮನೆಗಳಿಗಾಗಿ ಜಮೀನು ಮಂಜೂರು ಮಾಡುವಂತೆ ಮೌಖಿಕವಾಗಿ ಆದೇಶ ಮಾಡಿದ್ದರು. ಈ ಹಿಂದಿನ ತಹಶೀಲ್ದಾರರು ಪಂಚನಾಮೆ ಮಾಡಿಕೊಂಡು ಬಂದಿದ್ದು, ಗ್ರಾಮ ಲೆಕ್ಕಿಕ, ಕಂದಾಯ ನೀರಿಕ್ಷಕರು ಅವರು ಕೂಡಾ ಪಂಚನಾಮೆ ಮಾಡಿದ್ದರು. ಆದರೆ ಮೇಲಧಿಕಾರಿಗಳು ಇಲ್ಲಿಯವರೆಗೂ ಪ್ರಸ್ತಾವನೆ ಸಲ್ಲಿಸದೆ ಕಾರ್ಯ ರೂಪಕ್ಕೆ ತರದೆ ಇರುವುದು ಖಂಡನೀಯ” ಎಂದರು.
“ಕದರಾಪೂರ ಮತ್ತು ರೋಟ್ನಡಗಿ ಸೀಮೆಯಲ್ಲಿ ಜಮೀನು ಲಭ್ಯವಿಲ್ಲದ ಪ್ರಯುಕ್ತ ತುಮಕೂರು ಪರಂಪೋಕ ಸರ್ವೆ ನಂ. 378 ರಲ್ಲಿ ಜಮೀನು ಲಭ್ಯವಿದ್ದು, ನಿವೇಶನಕ್ಕಾಗಿ, ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಿ ಇವರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು” ಮನವಿ ಮಾಡಿದ ಅವರು, “ಒಂದು ವೇಳೆ ವಿಳಂಬವಾದಲ್ಲಿ ಇದೇ ಆಗಸ್ಟ್ 28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೀನುಗಾರರ ಕುಟುಂಬದವರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಯಾದಗಿರಿ | ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕುರಕುಂದಿ, ಮಹಾದೇವಪ್ಪ ಬಿಜಾಸಪುರ್, ಅಜೀಜಸಾಬ್ ಐಕ್ಯೂರ್, ಮಲ್ಲಿಕಾರ್ಜುನ ಶಾಖಾನವರ್, ಶೇಖರ್ ಜೀವಣಗಿ, ಮಾನಪ್ಪ ಬಿಜಾಸಪುರ್, ರಾಮಣ್ಣ ಶೆಳ್ಳಗಿ, ಜಟ್ಟೆಪ್ಪ ನಾಗರಾಳ, ದೇವಿಂದ್ರಾಪ್ಪ ಬಾದ್ಯಾಪುರ್, ಬಸವರಾಜ್ ಗೋನಾಲ, ಚಂದ್ರಕಾಂತ ಹಂಪಿನ್, ಮೂರ್ತಿ ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರರು ಇದ್ದರು.