ರಾಜಸ್ಥಾನದ ಜೈಪುರದ ಸರ್ಕಾರಿ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಟ್ರಾಮಾ ಸೆಂಟರ್ನ ತೀವ್ರ ನಿಗಾ ಘಟಕದಲ್ಲಿ (ICU) ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ ಆರು ರೋಗಿಗಳು ಮೃತಪಟ್ಟಿದ್ದಾರೆ. ಈ ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಬೆಂಕಿ ಕಾಣಿಸಿಕೊಂಡ ಕೂಡಲೇ ಪರಾರಿಯಾದರೆಂದು ರೋಗಿಗಳ ಕುಟುಂಬಗಳು ಆರೋಪಿಸಿವೆ.
ಬೆಂಕಿಯು ಎರಡನೇ ಮಹಡಿಯ ಟ್ರಾಮಾ ICU ಮತ್ತು ಸೆಮಿ-ICU ವಿಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚು ಹೊಗೆ ಆವರಿಸಿದ್ದರಿಂದ ಆತಂಕ ಮನೆ ಮಾಡಿತು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಒಟ್ಟು 210 ರೋಗಿಗಳಿದ್ದರು, ಮತ್ತು ಪ್ರತಿ ICUನಲ್ಲಿ 40 ರೋಗಿಗಳಿದ್ದರು. ಆದರೆ, ರಾತ್ರಿಯ ವೇಳೆ ಪ್ರತಿ ICUಗೆ ಕೇವಲ ಒಬ್ಬ ಸಿಬ್ಬಂದಿಯಷ್ಟೇ ಇದ್ದರು, ಮತ್ತು ಅವರು ಬೆಂಕಿ ಕಾಣಿಸಿಕೊಂಡ ಕೂಡಲೇ ಓಡಿಹೋದರೆಂದು ಆರೋಪಿಸಲಾಗಿದೆ.
ಟ್ರಾಮಾ ಸೆಂಟರ್ನ ಉಸ್ತುವಾರಿ ಡಾ. ಅನುರಾಗ್ ಧಾಕಡ್ ಪ್ರಕಾರ, ಎರಡನೇ ಮಹಡಿಯಲ್ಲಿ ಒಟ್ಟು ಎರಡು ICUಗಳಿದ್ದವು—ಟ್ರಾಮಾ ICUನಲ್ಲಿ 11 ರೋಗಿಗಳು ಮತ್ತು ಸೆಮಿ-ICUನಲ್ಲಿ 13 ರೋಗಿಗಳಿದ್ದರು. “ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿತು, ಮತ್ತು ತೀವ್ರವಾದ ಹೊಗೆ ಮತ್ತು ವಿಷಕಾರಿ ಅನಿಲಗಳು ಹರಡಿದವು. ಟ್ರಾಮಾ ICUನಲ್ಲಿದ್ದ ಹೆಚ್ಚಿನ ರೋಗಿಗಳು ಕೋಮಾದಲ್ಲಿ ಅಥವಾ ಗಂಭೀರ ಸ್ಥಿತಿಯಲ್ಲಿದ್ದರು,” ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ಮೃತಪಟ್ಟ ಆರು ರೋಗಿಗಳಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು. ಐವರು ರೋಗಿಗಳು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳ ಪೋಷಕರು ರೋಗಿಗಳನ್ನು ಹೊರಗೆ ಸಾಗಿಸಿದರು, ಕೆಲವರನ್ನು ಅವರ ಹಾಸಿಗೆಯೊಂದಿಗೆ ಹೊರಗೆ ತೆಗೆದರು. ಅಗ್ನಿಶಾಮಕ ದಳವು ಸುಮಾರು ಎರಡು ಗಂಟೆಗಳಲ್ಲಿ ಬೆಂಕಿಯನ್ನು ನಿಯಂತ್ರಿಸಿತು.
ರೋಗಿಗಳ ಕುಟುಂಬದವರು ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಹೊಗೆ ಕಾಣಿಸಿಕೊಂಡಾಗ ಸಿಬ್ಬಂದಿಗೆ ಎಚ್ಚರಿಕೆ ನೀಡಿದರೂ ಗಮನ ಹರಿಸಲಿಲ್ಲ. ಬೆಂಕಿ ಕಾಣಿಸಿಕೊಂಡಾಗ ಅವರೇ ಮೊದಲು ಓಡಿಹೋದರು. ಈಗ ನಮ್ಮ ರೋಗಿಗಳ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ,” ಎಂದು ಕುಟುಂಬದ ಸದಸ್ಯರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ಸಂಸದೀಯ ವ್ಯವಹಾರಗಳ ಸಚಿವ ಜೋಗರಾಮ್ ಪಟೇಲ್, ಮತ್ತು ಗೃಹ ಖಾತೆ ರಾಜ್ಯ ಸಚಿವ ಜವಾಹರ್ ಸಿಂಗ್ ಬೇಧಾಮ್ ಘಟನೆಯ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್, ಫೊರೆನ್ಸಿಕ್ ತಂಡವು ಬೆಂಕಿಯ ನಿಖರ ಕಾರಣವನ್ನು ಪತ್ತೆಹಚ್ಚಲಿದೆ ಎಂದು ತಿಳಿಸಿದ್ದಾರೆ. “ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಕಾಣುತ್ತದೆ. ಉಳಿದ ರೋಗಿಗಳನ್ನು ಇನ್ನೊಂದು ವಾರ್ಡ್ಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ,” ಎಂದು ಅವರು ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘಟನೆಗೆ ಸಂತಾಪ ಸೂಚಿಸಿ, ರಾಜ್ಯ ಸರ್ಕಾರವು ಈ ಘಟನೆಯನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಖಾತರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.