ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, “ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ನಾನು ವೈಯಕ್ತಿಕವಾಗಿ ಮತ್ತು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಪರವಾಗಿ ಖಂಡಿಸುತ್ತೇನೆ.
ಹಿರಿಯ ವಕೀಲರೊಬ್ಬರು ಹೀಗೆ ಮುಖ್ಯನ್ಯಾಯಾಧೀಶರ ಮೇಲೆ ಶೂ ಎಸೆದ ಪ್ರಕರಣವು ವೈಯಕ್ತಿಕ ಅಸಹನೆ ಮಾತ್ರವಾಗಿರದೆ, ದೇಶದಲ್ಲಿ ಆವರಿಸಿಕೊಳ್ಳುತ್ತಿರುವ ಅಮಾನವೀಯ ಧಾರ್ಮಿಕ ಮೂಲಭೂತವಾದದ ಒಂದು ಸಂಕೇತವಾಗಿದೆ. ಧರ್ಮದ ಹೆಸರಿನಲ್ಲಿ ನೈಜ ಧಾರ್ಮಿಕತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯಾರೇ ಮಾಡಿದರೂ ಖಂಡಿಸಬೇಕು. ಅದರಲ್ಲೂ ಸಂವಿಧಾನದ ಆಶಯಗಳಿಗೆ ನಿಷ್ಠರಾಗಲೇಬೇಕಾದ ವಕೀಲರು ನ್ಯಾಯಾಲಯದ ಕಾರ್ಯ ಕಲಾಪದ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡು ಶೂ ಎಸೆದದ್ದು ಮನುವಾದಿ ವಿಕೃತಿಯ ಪ್ರತೀಕವಾಗಿದೆ. ಸೌಹಾರ್ದತೆ ಮತ್ತು ಸಮಾನತೆಗಳ ಪರಂಪರೆಯುಳ್ಳ ಭಾರತದಲ್ಲಿ ಇಂತಹ ದ್ವೇಷ ಮತ್ತು ಅಸಹಿಷ್ಣುತೆಯ ಕೃತ್ಯಗಳು ನಡೆಯುವುದು ಧಾರ್ಮಿಕವೂ ಅಲ್ಲ, ನೈತಿಕವೂ ಅಲ್ಲ, ಕಾನೂನಾತ್ಮಕವೂ ಅಲ್ಲ. ಆದ್ದರಿಂದ ಇಂತಹ ಕೃತ್ಯಗಳನ್ನು ನಿರ್ದಿಷ್ಟ ಧರ್ಮ, ಪಕ್ಷ, ಪಂಥಗಳನ್ನು ಮೀರಿ ಮಾನವೀಯವಾದವರೆಲ್ಲರೂ ಖಂಡಿಸಬೇಕು; ಶಿಕ್ಷೆಯಾಗಬೇಕು.
ಈ ಕೃತ್ಯ ನಡೆದಾಗ ವಿಚಲಿತರಾಗದೆ ಕಾರ್ಯಕಲಾಪಗಳನ್ನು ಮುಂದುವರೆಸುವ ಮೂಲಕ ಮುತ್ಸದ್ಧಿತನವನ್ನು ತೋರಿದ ಮುಖ್ಯ ನ್ಯಾಯಾಮೂರ್ತಿ ಬಿ ಆರ್ ಗವಾಯಿಯವರ ನಡೆ ಅಭಿನಂದನೀಯವಾದುದು” ಎಂದು ಹೇಳಿದ್ದಾರೆ.