ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೋನಮ್ ವಾಂಗ್ಚುಕ್ ಅವರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ, ಲೇಹ್ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದಲ್ಲಿರುವ ವಾಂಗ್ಚುಕ್ ಅವರನ್ನು ಭೇಟಿ ಮಾಡಲು ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರಿಗೆ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಗೆ ಗೀತಾಂಜಲಿ ಅವರು ಪತ್ರ ಬರೆದಿದ್ದು, ‘ನನ್ನ ಗಂಡನನ್ನು ಭೇಟಿ ಮಾಡುವ ಅರ್ಹತೆ ನನಗಿಲ್ಲವೇ? ನನ್ನ ಗಂಡನನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 24ರಂದು ನಡೆದ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು, ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರಕ್ಕೆ ವಾಂಗ್ಚುಕ್ ಅವರು ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅವರನ್ನು ಜೋಧ್ಪುರ ಜೈಲಿನಲ್ಲಿ ಇರಿಸಲಾಗಿದೆ.
ತಮ್ಮ ಪತಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಲೇಹ್ ಜಿಲ್ಲಾಧಿಕಾರಿಗೆ ಗೀತಾಂಜಲಿ ಪತ್ರ ಬರೆದಿದ್ದಾರೆ. “ನನ್ನ ಪತಿ ‘ಹವಾಮಾನ ಕಾರ್ಯಕರ್ತ’ನಾಗಿದ್ದು, ಲಡಾಖ್ನ ಉಳಿವು, ಅದರ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಲಡಾಖ್ಗಾಗಿ ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ದರಾಗಿ ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದಾರೆ. ಅವರು ಯಾರಿಗೂ ಯಾವತ್ತಿಗೂ ಬೆಸರಿಕೆಯಾಗಿರಲು ಸಾಧ್ಯವೇ ಇಲ್ಲ. ಅವರನ್ನು ಬಿಡುಗಡೆ ಮಾಡಿ” ಎಂದು ಒತ್ತಾಯಿಸಿದ್ದಾರೆ.
“ನನ್ನ ಪತಿಯನ್ನು ಅವರು ಬಂಧಿಸಿ, ಇರಿಸಲಾಗಿರುವಲ್ಲಿ ಅವರನ್ನು ಫೋನ್ ಮತ್ತು ವೈಯಕ್ತಿಕವಾಗಿ ಸಂಪರ್ಕಿಸಲು ಮತ್ತು ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ. ನನ್ನ ಪತಿಯನ್ನು ಭೇಟಿಯಾಗಲು ಮತ್ತು ಮಾತನಾಡಲು ನನಗೆ ಅರ್ಹತೆ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ನನ್ನ ಪತಿ ಬಂಧನದ ಕಾರಣವನ್ನು ತಿಳಿದುಕೊಳ್ಳಲು ಮತ್ತು ನ್ಯಾಯಾಲಯದ ಮುಂದೆ ನ್ಯಾಯವನ್ನು ಪಡೆಯುವ ಅವರ ಕಾನೂನುಬದ್ಧ ಹಕ್ಕುಗಳಿಗಾಗಿ ಅವರಿಗೆ ನಾನು ಸಹಾಯ ಮಾಡುವಂತಿಲ್ಲವೇ? ನನ್ನ ಪತಿಯ ಸ್ಥಿತಿಯನ್ನು ತಿಳಿದುಕೊಳ್ಳಲು ನನಗೆ ಅರ್ಹತೆ ಇಲ್ಲವೇ? ಅವರು ಸೆಪ್ಟೆಂಬರ್ 26, 2025ರಿಂದ ಬಂಧನದಲ್ಲಿದ್ದಾರೆ. ಅವರು ನನ್ನೊಂದಿಗೆ ಅಥವಾ ನಮಗೆ ಹತ್ತಿರವಿರುವ ಯಾರೊಂದಿಗೂ ಯಾವುದೇ ಸಂವಹನ ನಡೆಸಲು ಅವಕಾಶ ನೀಡಲಾಗಿಲ್ಲ ಯಾಕೆ? ಭಾರತದ ಜವಾಬ್ದಾರಿಯುತ ನಾಗರಿಕರಾಗಿ, ನಮಗೆ ಶಾಂತಿಯುತ ಅಭಿವ್ಯಕ್ತಿ ಮತ್ತು ಚಲನೆಯ ಸ್ವಾತಂತ್ರ್ಯದ ಹಕ್ಕಿಲ್ಲವೇ?” ಎಂದು ಕೇಳಿದ್ದಾರೆ.
ಈ ಲೇಖನ ಓದಿದ್ಧೀರಾ?: ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು
ಪೊಲೀಸರಿಂದ ತನಗೆ ಬಂದಿರುವ ಸಂದೇಶಗಳನ್ನು ತೋರಿಸಿರುವ ಗೀತಾಂಜಲಿ, “ವಾಂಗ್ಚುಕ್ ಜೋಧ್ಪುರ ಜೈಲಿಗೆ ತಲುಪಿದ ತಕ್ಷಣ ಅವರನ್ನು ಸಂಪರ್ಕಿಸಲು ಅವಕಾಶ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಅಧಿಕಾರಿಗಳ ಭರವಸೆಗಳ ಹೊರತಾಗಿಯೂ ತನ್ನ ಪತಿಯನ್ನು ಭೇಟಿಯಾಗಲು ಸಾಧ್ಯವಾಗಿಲ್ಲ” ಎಂದು ಹೇಳಿದ್ದಾರೆ.
“ನನ್ನ ಗಂಡನ ಸ್ಥಿತಿಯ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ಅಧಿಕಾರಿಗಳು ನಮ್ಮ ಕಾನೂನು ಹಕ್ಕುಗಳ ಕುರಿತು ನಮಗೆ ವಿವರಿಸುತ್ತಾರೆಂದು ಹೇಳಲಾಗಿತ್ತು. ಆದರೆ, ಈವರೆಗೆ ಯಾವುದೇ ಅಧಿಕಾರಿಯೂ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನನ್ನು ಫಿಯಾಂಗ್ನಲ್ಲಿ ಸಿಆರ್ಪಿಎಫ್ ಕಣ್ಗಾವಲಿನಲ್ಲಿ ಇರಿಸಲಾಗಿದೆ. ನಮ್ಮ ಸಂಸ್ಥೆ ‘ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಖ್’ನ (HIAL) ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸಹ ಬಿಗಿ ಕಣ್ಗಾವಲಿನಲ್ಲಿ ಇರಿಸಲಾಗಿದೆ” ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.