ತಾನೊಬ್ಬ ಗುಪ್ತಚರ ಅಧಿಕಾರಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾನ್ಫರೆನ್ಸ್ ‘ಕಾಲ್’ನಲ್ಲಿದ್ದಾರೆ ಎಂದು ಹೇಳಿಕೊಂಡು ವಂಚಕನೊಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ 4 ಕೋಟಿ ರೂ. ವಂಚಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ನಿವೃತ್ತ ಬ್ಯಾಂಕ್ ಅಧಿಕಾರಿ ಸೂರ್ಯಕಾಂತ್ ಥೋರಟ್ ಅವರು ವಂಚನೆಗೆ ತುತ್ತಾದ ಸಂತ್ರಸ್ತ. ಸೂರ್ಯಕಾಂತ್ ಅವರಿಗೆ ಪರಿಚಿತರೇ ಆಗಿದ್ದ ವಂಚಕರಿಗೆ, ಸೂರ್ಯಕಾಂತ್ ಅವರ ಮಗ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿತ್ತು. ಹೀಗಾಗಿ, ಗುಪ್ತಚರ ಅಧಿಕಾರಿಯ ಹೆಸರಿನಲ್ಲಿ ವಂಚಕರು ಕರೆ ಮಾಡಿದ್ದಾರೆ. ‘ನಿಮ್ಮ ಪುತ್ರ ವಿಶೇಷ ಕಾರ್ಯಾಚರಣೆ ಒಂದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಕಾರಣಕ್ಕೆ, ಕೇಂದ್ರ ಸರ್ಕಾರವು 38 ಕೋಟಿ ರೂ. ಬಹುಮಾನ ನೀಡಲು ನಿರ್ಧರಿಸಿದೆ. ಆದರೆ, ಅದಕ್ಕೂ ಮುಂಚೆ ಸಂಸ್ಕರಣಾ ಶುಲ್ಕ, ವಕೀಲರ ಶುಲ್ಕ ಹಾಗೂ ಹಿರಿಯ ಅಧಿಕಾರಿಗಳಿಗೆ ಉಡುಗೊರೆಗಳನ್ನು ಪಾವತಿಸಬೇಕಿದೆ. ಅದಕ್ಕಾಗಿ, 4 ಕೋಟಿ ರೂ. ಪಾವತಿಸಬೇಕು’ ಎಂದು ಕೇಳಿದ್ದಾಗಿ ಆರೋಪಿಸಲಾಗಿದೆ.
ಮುಂಗಡವಾಗಿ ಪಾವತಿಸುವ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ವಂಚಕರು ಭರವಸೆ ನೀಡಿದ್ದಾರೆ. ಅಲ್ಲದೆ, ಸೂರ್ಯಕಾಂತ್ ಅವರ ವಿಶ್ವಾಸವನ್ನು ಗಳಿಸಲು, ಆರೋಪಿಗಳು ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹಾಗೂ ಕೆಲವು ಅಧಿಕಾರಿಗಳು ಕಾನ್ಫರೆನ್ಸ್ ಕಾಲ್ನಲ್ಲಿದ್ದಾರೆ ಎಂದು ನಟಿಸಿದ್ದಾರೆ. ಅವರನ್ನು ನಂಬಿದ ಸೂರ್ಯಕಾಂತ್ ಅವರು ವಿವಿಧ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ಪಾವತಿ ಮಾಡಿದ್ದಾರೆ. ಅದಕ್ಕಾಗಿ, ಪರಿಚಿತರಿಂದ ಸಾಲವನ್ನೂ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಈ ಲೇಖನ ಓದಿದ್ದೀರಾ?: ಕೆ.ಆರ್.ಪೇಟೆ | ರಾತ್ರೋರಾತ್ರಿ ಗಣಪತಿ ಇಟ್ಟು ವಿವಾದ ಸೃಷ್ಟಿಸಲು ಯತ್ನ?
ತಮಗಾದ ವಂಚನೆ ಬಗ್ಗೆ ಹೇಳಿಕೊಂಡಿರುವ ಸೂರ್ಯಕಾಂತ್, “ಅವರು (ವಂಚಕರು) ತಮ್ಮ ಮಗನ ಐಡಿ ಕಾರ್ಡ್, ರಿವಾಲ್ವರ್, ಬ್ಯಾಂಕ್ ಸಂದೇಶವನ್ನು ನನಗೆ ತೋರಿಸಿದರು. ನಮಗೆ ಅವರ ಬಗ್ಗೆ ಎಂದಿಗೂ ಅನುಮಾನವೇ ಮೂಡಲಿಲ್ಲ. ನನ್ನ ಫ್ಲಾಟ್ಗಳು, ತೋಟ, ಅಂಗಡಿ, ಕಾರು ಹಾಗೂ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿ ಹಣ ಹೊಂದಿಸಿ, ಅವರಿಗೆ 4 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಟ್ಟಿದ್ದೇನೆ” ಎಂದು ಹೇಳಿದ್ದಾರೆ.
ಹಣ ಪಾವತಿಸಿದ ಕೆಲವು ತಿಂಗಳುಗಳ ಬಳಿಕ, ನಮಗೆ ಇದು ವಂಚನೆ, ಅದೊಂದು ಕಟ್ಟುಕಥೆ ಎಂಬುದು ಗೊತ್ತಾಯಿತು. ಬಳಿಕ ದೂರು ದಾಖಲಿಸಿದ್ದೇನೆ ಎಂದು ಸೂರ್ಯಕಾಂತ್ ಹೇಳಿಕೊಂಡಿದ್ದಾರೆ.
ಶುಭಂ ಸನಿಲ್ ಪ್ರಭಾಲೆ, ಸುನಿಲ್ ಬಬನ್ರಾವ್ ಪ್ರಭಾಲೆ, ಓಂಕಾರ್ ಸುನಿಲ್ ಪ್ರಭಾಲೆ, ಪ್ರಶಾಂತ್ ರಾಜೇಂದ್ರ ಪ್ರಭಾಲೆ ಮತ್ತು ಭಾಗ್ಯಶ್ರೀ ಸುನಿಲ್ ಪ್ರಭಾಲೆ ಎಂದು ಗುರುತಿಸಲಾದ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯನ್ನು ಆರ್ಥಿಕ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.