ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಬಿಡುಗಡೆ ಮಾಡಿರುವ ‘ಕಲಿಕಾ ಪಠ್ಯಕ್ರಮ ಆಧಾರಿತ ಕಲಿಕಾ ಚೌಕಟ್ಟು’ (ಎಲ್ಒಸಿಎಫ್) ಕರಡು ನೀತಿಯನ್ನು ಕೇರಳ ಸರ್ಕಾರ ಕೂಡ ತಿರಸ್ಕರಿಸಿದೆ.
“ಯುಜಿಸಿ ರೂಪಿಸಿದ ಪಠ್ಯಕ್ರಮವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಆಗಸ್ಟ್ನಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ರಾಜ್ಯ ಸರ್ಕಾರದ ಪರವಾಗಿ ಸ್ಪಷ್ಟಪಡಿಸಿದ್ದರು. ಇದೀಗ ಕೇರಳ ಸರ್ಕಾರ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಯುಜಿಸಿ ಕರಡು ಪಠ್ಯಕ್ರಮ ನೀತಿಯನ್ನು ತಿರಸ್ಕರಿಸಿದೆ.
“ಕಳೆದ ಆಗಸ್ಟ್ನಲ್ಲಿ ಯುಜಿಸಿ ಒಂಬತ್ತು ವಿಷಯಗಳಿಗೆ ಕರಡು ನೀತಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು. ಯುಜಿಸಿ ಕರಡು ನೀತಿಯು ಹಳೆಯದ್ದು, ಅವೈಜ್ಞಾನಿಕವಾಗಿದೆ ಮತ್ತು ಸಂಘ ಪರಿವಾರದ ಸೈದ್ಧಾಂತಿಕ ಹಿತಾಸಕ್ತಿಗಳ ಪರವಾಗಿದೆ” ಎಂದು ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ತಿಳಿಸಿದ್ದಾರೆ.
ಭಾರತೀಯ ಜ್ಞಾನ ವ್ಯವಸ್ಥೆಯ ಸೋಗಿನಲ್ಲಿ ನಿರ್ದಿಷ್ಟ ಸಿದ್ದಾಂತದ ವಿಷಯಗಳನ್ನು ಹೇರುವ ಬಗ್ಗೆ ಗಂಭೀರ ಕಳವಳಗಳನ್ನು ಕೇರಳ ಸರ್ಕಾರ ವ್ಯಕ್ತಪಡಿಸಿದೆ.
“ಯುಜಿಸಿಯ ಪ್ರಸ್ತಾವಿತ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ನೀತಿಯು ವಿಶ್ವವಿದ್ಯಾಲಯ ಶಿಕ್ಷಣದಿಂದ ನಿರೀಕ್ಷಿಸಲಾದ ಬೌದ್ಧಿಕ ಮತ್ತು ಶಿಸ್ತಿನ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ” ಎಂದು ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅಧ್ಯಕ್ಷತೆಯ ಸಮಿತಿ ಕೇರಳ ಸರ್ಕಾರದ ಸಮಿತಿ ಹೇಳಿದೆ. ಈ ಸಮಿತಿಯಲ್ಲಿ ಇತಿಹಾಸಕಾರ ರೊಮಿಲಾ ಥಾಪರ್ ಮತ್ತು ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ರಾಜನ್ ಗುರುಕ್ಕಲ್ ಇದ್ದಾರೆ.
ವಿವಿಧ ಪಠ್ಯಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಆಶಯದಿಂದ ಎಲ್ಒಸಿಎಫ್ ರೂಪಿಸಲಾಗಿದೆ ಎಂದು ಯುಜಿಸಿ ಹೇಳಿಕೊಂಡಿದೆ. ನಿದರ್ಶನಕ್ಕೆ, ರಸಾಯನ ವಿಜ್ಞಾನ ವಿಷಯದ ಆರಂಭದಲ್ಲೇ ಹಿಂದೂಗಳ ಜ್ಞಾನದ ದೇವತೆ ಎಂದು ಪರಿಗಣಿಸಲಾಗಿರುವ ಸರಸ್ವತಿಯ ಫೋಟೊ ಬಳಸಿ ಪ್ರಾರ್ಥನೆಯನ್ನು ಪ್ರಕಟಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ದ್ವೇಷ ರಾಜಕಾರಣವನ್ನು ಸದೆಬಡಿಯದಿದ್ದರೆ ಉಳಿಗಾಲವಿಲ್ಲ
ವಾಣಿಜ್ಯ ಮತ್ತು ಅರ್ಥಶಾಸ್ತ್ರದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸೇರಿಸಲಾಗಿದೆ. ಗಣಿತದಲ್ಲಿ ಕಾಲಗಣನೆ, ಜ್ಯೋತಿಷ್ಯ, ಬೀಜಗಣಿತ ಹಾಗೂ ಕ್ಯಾಲ್ಕುಲಸ್ಗೆ ಪ್ರಾಚೀನ ಭಾರತದ ಕೊಡುಗೆ ಸೇರಿಸಲಾಗಿದೆ. ರಾಜ್ಯಶಾಸ್ತ್ರ ಪಠ್ಯದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟ ಕುರಿತ ಪಾಠದಲ್ಲಿ ವಿ.ಡಿ.ಸಾವರ್ಕರ್ ಅವರ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಕೃತಿಯನ್ನು ‘ರೀಡಿಂಗ್’ (ಹೆಚ್ಚಿನ ಅಧ್ಯಯನದ ಪುಸ್ತಕಗಳ) ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೆಯೇ ಸಾವರ್ಕರ್ ಬಗ್ಗೆ ಪಾಠವೂ ಇದೆ. ದೀನ ದಯಾಳ್ ಉಪಾಧ್ಯಾಯರ ಕುರಿತ ಪಾಠವನ್ನೂ ಅಳವಡಿಸಲಾಗಿದೆ.
ಯುಜಿಸಿಯ ಈ ಪ್ರಯತ್ನಕ್ಕೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯುಜಿಸಿಯ ಮೂಲಕ ಪಠ್ಯಪುಸ್ತಕಗಳಲ್ಲಿ ಆರ್ಎಸ್ಎಸ್ ಕಾರ್ಯಸೂಚಿಯನ್ನು ಜಾರಿಗೆ ತರುವ ಮೂಲಕ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿದೆ ಎನ್ನುವ ಟೀಕೆ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಕರಡನ್ನು ವಿರೋಧಿಸಿವೆ. ಆಂಧ್ರಪ್ರದೇಶ ಕ್ರಿಶ್ಚಿಯನ್ ಲೀಡರ್ಸ್ ಫೋರಂನಂಥ ಕೆಲವು ಅಲ್ಪಸಂಖ್ಯಾತ ಸಂಸ್ಥೆಗಳು ಕರಡನ್ನು ವಿರೋಧಿಸಿ ಸಹಿ ಸಂಗ್ರಹ ಮಾಡಿವೆ.