ಜಿಲ್ಲಾಡಳಿತದ ಆದೇಶದಂತೆ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಇಂಧನ ನೀಡಲು ನಿರಾಕರಿಸಿದ ಪೆಟ್ರೋಲ್ ಪಂಪ್ ಉದ್ಯೋಗಿಯ ಮೇಲೆ ದುರುಳರು ಗುಂಡು ಹಾರಿಸಿದ ಘಟನೆ ಮಧ್ಯಪ್ರದೇಶದ ಭಿಂಡ್ನಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ, ಭಿಂಡ್-ಗ್ವಾಲಿಯರ್ ರಾಷ್ಟ್ರೀಯ ಹೆದ್ದಾರಿ (NH-719) ನಲ್ಲಿರುವ ಸಾವಿತ್ರಿ ಲೋಧಿ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುತ್ತಿರುವ 55 ವರ್ಷದ ತೇಜ್ ನಾರಾಯಣ್ ನರ್ವಾರಿಯಾ ಎಂಬವರು ಹೆಲ್ಮೆಟ್ ಧರಿಸದ ಇಬ್ಬರ ಬೈಕ್ಗೆ ಪೆಟ್ರೋಲ್ ತುಂಬಿಸಲು ನಿರಾಕರಿಸಿದ್ದಾರೆ.
ಇದನ್ನು ಓದಿದ್ದೀರಾ? ಅಪಘಾತ | ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ 3,000 ಮಂದಿ; ಹೆಲ್ಮೆಟ್ ಧರಿಸದೆ 50,000 ಮಂದಿ ಸಾವು
ಇದಾದ ಬೆನ್ನಲ್ಲೆ ಇಬ್ಬರು ವಾಹನ ಚಾಲಕರು ಮತ್ತು ಉದ್ಯೋಗಿ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರಿಂದ ತಾನು ಏನೂ ಮಾಡಲಾಗದು ಎಂದು ಉದ್ಯೋಗಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ದುಷ್ಕರ್ಮಿಗಳು ಉದ್ಯೋಗಿ ಮೇಲೆ ಗುಂಡು ಹಾರಿಸಿದ್ದು ಕೈಗೆ ಗುಂಡೇಟಾಗಿದೆ.
मध्य प्रदेश के भिंड में बगैर हेलमेट के पेट्रोल नहीं देने पर 2 युवकों ने पंपकर्मी को गोली मार दी !pic.twitter.com/bonOQRPkp4
— काश/if Kakvi (@KashifKakvi) August 30, 2025
ಪಂಪ್ನ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಒಬ್ಬ ಪಿಸ್ತೂಲ್ ಬಳಸಿ ಗುಂಡು ಹಾರಿಸುತ್ತಿರುವುದು, ಮತ್ತೋರ್ವ ರೈಫಲ್ನಿಂದ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ಬಹು ಸುತ್ತು ಗುಂಡು ಹಾರಿಸಿದ್ದು ಇದರಿಂದಾಗಿ ಪಂಪ್ನಲ್ಲಿ ಭಯಭೀತರಾದ ಉದ್ಯೋಗಿಗಳು ಅಡಗಿಕೊಂಡಿದ್ದಾರೆ.
ದುಷ್ಕರ್ಮಿಗಳು ಸ್ಥಳದಿಂದ ತೆರಳಿದ ಬಳಿಕ ಉದ್ಯೋಗಿ ನರ್ವಾರಿಯಾ ಅವರನ್ನು ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ನಂತರ ಗ್ವಾಲಿಯರ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ನರ್ವಾರಿಯಾ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ದಾಳಿಕೋರರು ಭಿಂಡ್ನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿಜ್ಪುರಿ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಿಜ್ಪುರಿಯಲ್ಲಿ ಕುಸ್ತಿ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ. “ನಾವು ಸಿಸಿಟಿವಿ ದೃಶ್ಯಗಳ ಮೂಲಕ ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಹುಡುಕಾಟ ನಡೆಯುತ್ತಿದೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಬರೋಹಿ ಪೊಲೀಸ್ ಠಾಣೆಯ ಉಸ್ತುವಾರಿ ಅತುಲ್ ಭಡೋರಿಯಾ ತಿಳಿಸಿದ್ದಾರೆ.
