ನಿರುದ್ಯೋಗ ಹೆಚ್ಚಳಕ್ಕೆ ಮತಗಳ್ಳತನ ನೇರ ಕಾರಣ, ದೇಶದ ಯುವಕರ ಮುಂದಿರುವ ಗಂಭೀರ ಸಮಸ್ಯೆಯಾದ ನಿರುದ್ಯೋಗವು ನೇರವಾಗಿ ಮತ ಕಳ್ಳತನದ ಜೊತೆ ಸಂಬಂಧ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಚುನಾವಣಾ ಪ್ರಕ್ರಿಯೆ ಪ್ರಾಮಾಣಿಕವಾಗುವವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ ಎಂದು ಹೇಳಿದರು.
“ಯಾವುದೇ ಸರ್ಕಾರ ಸಾರ್ವಜನಿಕ ವಿಶ್ವಾಸದ ಆಧಾರದ ಮೇಲೆ ಅಧಿಕಾರಕ್ಕೆ ಬಂದಾಗ ಅದರ ಮೊದಲ ಜವಾಬ್ದಾರಿ ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ಆದರೆ ಬಿಜೆಪಿ ಚುನಾವಣೆಗಳನ್ನು ಗೆಲ್ಲುವುದು ಜನರ ಬೆಂಬಲದಿಂದಲ್ಲ, ಬದಲಾಗಿ ಮತ ಕಳ್ಳತನ ಮತ್ತು ಚುನಾವಣಾ ಆಯೋಗದ ದುರುಪಯೋಗದಿಂದ, ಇದೆಲ್ಲದರ ಪರಿಣಾಮವಾಗಿ ನಿರುದ್ಯೋಗವು 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ” ಎಂದು ಹೇಳಿದರು.
“ಉದ್ಯೋಗಗಳು ಕುಸಿಯುತ್ತಿವೆ, ನೇಮಕಾತಿ ಪ್ರಕ್ರಿಯೆಗಳು ಹಾಳಾಗುತ್ತಿವೆ, ಪ್ರತಿಯೊಂದು ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿಯೂ ಭ್ರಷ್ಟಾಚಾರದ ಮೂಲಕವೇ ನಡೆಯುತ್ತಿದೆ,” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ
ಯುವಕರ ಶ್ರಮ, ಕನಸು ಮತ್ತು ಹೋರಾಟ ವ್ಯರ್ಥವಾಗುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ ಮತ್ತು ಕೋಟ್ಯಾಧಿಪತಿಗಳಿಗೆ ಲಾಭ ಕಲ್ಪಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಯುವಕರ ಭರವಸೆಯನ್ನು ಹಾಳುಮಾಡುವುದು, ಅವರನ್ನು ನಿರಾಶೆಗೊಳಿಸುವುದೇ ಈ ಸರ್ಕಾರದ ಗುರುತು. ಇಂದಿನ ನಿಜವಾದ ಹೋರಾಟವು ಉದ್ಯೋಗಕ್ಕಾಗಿ ಮಾತ್ರವಲ್ಲ, ಮತ ಕಳ್ಳತನದ ವಿರುದ್ಧವೂ ಆಗಿದೆ. ಚುನಾವಣೆಗಳಲ್ಲಿ ಮತ ಕಳ್ಳತನ ನಿಲ್ಲುವವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಯುವಕರು ಇನ್ನು ಮುಂದೆ ಉದ್ಯೋಗ ಕಳ್ಳತನ ಅಥವಾ ಮತ ಕಳ್ಳತನವನ್ನು ಸಹಿಸುವುದಿಲ್ಲ” ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಉದ್ಯೋಗಕ್ಕಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್ ದೃಶ್ಯ ಹಾಗೂ ಇನ್ನೊಂದೆಡೆ ಪ್ರಧಾನಿ ಮೋದಿ ಸಸಿಗಳನ್ನು ನೆಡುವುದು, ನವಿಲುಗಳಿಗೆ ಆಹಾರ ನೀಡುವುದು ಮತ್ತು ಯೋಗಾಭ್ಯಾಸ ಮಾಡುತ್ತಿರುವ ದೃಶ್ಯಗಳಿರುವ ವಿಡಿಯೊವನ್ನೂ ರಾಹುಲ್ ಗಾಂಧಿ ತಮ್ಮ ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.
