ಈಗ ರಂಗಶಂಕರದಲ್ಲಿ ಕವನವಾಚನ, ನಾಟಕವನ್ನು ನಡೆಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಒಂದೆಡೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಸ್ರೇಲ್ ಅತಿಕ್ರಮಣ, ಆಕ್ರಮಣವನ್ನು ಖಂಡಿಸುತ್ತಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆ ಅದಕ್ಕೆ ವಿರುದ್ಧವಾಗಿದೆ.
ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಇತಿಹಾಸದಲ್ಲಿ ಕಂಡಿರಯದಷ್ಟು ಕೋಮು ದ್ವೇಷಕ್ಕೆ ಕರ್ನಾಟಕವು ಸಾಕ್ಷಿಯಾಯಿತು. ಅದರಲ್ಲೂ ಬಸವರಾಜ ಬೊಮ್ಮಾಯಿಯವರ ಮುಖ್ಯಮಂತ್ರಿ ಆದ ಅವಧಿಯಲ್ಲಂತೂ ಕೋಮು ದೌರ್ಜನ್ಯ ಸರ್ಕಾರ ಪ್ರಯೋಜಿತ ಕಾರ್ಯಕ್ರಮದಂತೆ ಕಂಡಿತು. ಶಾಂತಿ, ಸೌಹಾರ್ದತೆಯನ್ನು ಬಯಸುವ ಜನರು ಅದರಿಂದ ಬೇಸತ್ತು ಆಕ್ರೋಶಗೊಂಡಿದ್ದರು. ಇದರ ಜೊತೆಗೆ ಮಿತಿ ಮೀರಿದ ಭ್ರಷ್ಟಾಚಾರ, ಹಳಿ ತಪ್ಪಿದ ಆರ್ಥಿಕ ಶಿಸ್ತಿನಿಂದ ಆಡಳಿತ ಯಂತ್ರ ಹಳ್ಳ ಹಿಡಿದಿತ್ತು.
ಸರ್ಕಾರದ ಈ ಜನವಿರೋಧಿ ನೀತಿಯಿಂದ ರೋಸೆದ್ದ ಜನರು, ಸಂವೇದನಾಶೀಲ ಸಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದರು. ಹಾಗೆ ಟೀಕಿಸಿದ್ದಕ್ಕೆ ಅವರೆಲ್ಲ ಪೊಲೀಸರ ಅತಿಥಿಗಳಾಗಿ ಠಾಣೆ ಸುತ್ತುವಂಥ ಶಿಕ್ಷೆಯನ್ನು ಬಿಜೆಪಿ ಸರ್ಕಾರ ದಯಪಾಲಿಸಿತ್ತು. ಅದಕ್ಕೆ – ಯಾವತ್ತು ರಾಜಕೀಯದ ಬಗ್ಗೆ ಹೇಳಿಕೆ ನೀಡದ ಸಂಶೋಧಕ, ಹಿರಿಯ ಸಾಹಿತಿ ಹಂಪನಾ ಅವರನ್ನೂ ಪೊಲೀಸ್ ಠಾಣೆ ಮೆಟ್ಟಲೇರುವಂತೆ ನಡೆಸಿಕೊಂಡದ್ದು ಒಂದು ನಾಚಿಕೆಗೇಡಿನ ಪ್ರಸಂಗ.
ಇದೇ ಕಾರಣವಾಗಿ ಕನ್ನಡಿಗರು ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದರು. ಆದರೆ, ಈ ಸರ್ಕಾರವೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಲ್ಲಿ ಹಿಂದೆ ಬಿದ್ದಿಲ್ಲ.
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವುದು ಯುದ್ಧವಲ್ಲ. ಅದು ನರಮೇಧ. ಸತ್ತವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. ಭಾರತದಲ್ಲಿ ಆಳುವ ಮೋದಿ ಸರ್ಕಾರಕ್ಕೆ ಮಾರಿಕೊಂಡಿರುವ ಗೋದಿ ಮಾಧ್ಯಮಗಳು ಪ್ಯಾಲೆಸ್ತೀನಿಯನ್ನರ ಗೋಳುಗಳನ್ನು ಪ್ರಕಟಿಸದೆ, ಇಸ್ರೇಲ್ ದಾಳಿಯನ್ನು ಸಂಭ್ರಮಿಸುತ್ತಿದೆ.
ಕೆಲ ಮಾನವೀಯ ಹೃದಯಗಳು ನರಮೇಧಕ್ಕೆ ಸಂಕಟಪಟ್ಟು, ಬೀದಿಗಿಳಿದು ಪ್ರತಿಭಟಿಸಿ ಇಸ್ರೇಲ್ ನಡೆಯನ್ನು ಖಂಡಿಸುತ್ತಿವೆ. ಜಗತ್ತಿನಲ್ಲಿ ಎಲ್ಲೂ ನೆಲೆ ಇರದ ಇಸ್ರೇಲ್ ಹೇಗೆ ಪ್ಯಾಲೆಸ್ತೀನ್ ನಲ್ಲಿ ಅಕ್ರಮವಾಗಿ ನೆಲೆಸಿ, ಅಲ್ಲಿದ್ದ ಜನರನ್ನೇ ಹೊರಹಾಕಿ ಪರದೇಶಿಗಳನ್ನಾಗಿ ಮಾಡಿದ ಅಸಲೀ ಚಿತ್ರಣವನ್ನು ಸೆಮಿನಾರ್ ಮಾಡಿ ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡುತ್ತಿದೆ. ಪುಸ್ತಕಗಳು ಪ್ರಕಟವಾಗುತ್ತಿದೆ.
ಆದರೆ, ಸಮಾಜವಾದ ಹಿನ್ನೆಲೆಯ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ, ಪೊಲೀಸ್ ವ್ಯವಸ್ಥೆ ಅಂತಹ ಎಲ್ಲಾ ಪ್ರತಿಭಟನೆ, ಸೆಮಿನಾರ್ ಗಳಿಗೆ ಅನುಮತಿ ಕೊಡದೆ ಪರೋಕ್ಷವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ.
ಉಡುಪಿಯಲ್ಲಿ ಪ್ಯಾಲೆಸ್ತೀನ್ ಬಗ್ಗೆ ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಪೊಲೀಸರು ಪ್ರಶ್ನಿಸಿದ್ದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಎಡಪಕ್ಷಗಳು “ಯುದ್ಧಬೇಡ ಶಾಂತಿ ಬೇಕು” ಎಂದು ಪ್ರತಿಭಟನೆ ಮಾಡಿದಾಗ ಘೋಷಣೆ ಕೂಗುತ್ತಿದ್ದವರನ್ನು ಬಸ್ಸಿನಲ್ಲಿ ತುಂಬಿಸಿ ಜಾಗ ಖಾಲಿ ಮಾಡಿಸಿದ್ದರು. “ಪ್ಯಾಲೆಸ್ತೀನ್ ಸಮಸ್ಯೆ: ಒಂದು ಅವಲೋಕನ” ಸಭೆಯನ್ನು ಸಾಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಸಂಘಟನೆ ಆಯೋಜಿಸಿದಾಗ ಪೊಲೀಸರು ತಡೆದು, ಸಭಾಂಗಣಕ್ಕೆ ಬೀಗ ಹಾಕಿ ಕೀಲಿಕೈಯನ್ನು ತೆಗೆದುಕೊಂಡು ಹೋಗಿದ್ದರು. ಇನ್ನು ಬೆಂಗಳೂರು, ಬಿಜಾಪುರದಲ್ಲೂ ಪ್ರತಿಭಟನೆ ಮಾಡಿದವರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಈಗ ರಂಗಶಂಕರದಲ್ಲಿ ಕವನವಾಚನ, ನಾಟಕವನ್ನು ನಡೆಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಒಂದೆಡೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಸ್ರೇಲ್ ಅತಿಕ್ರಮಣ, ಆಕ್ರಮಣವನ್ನು ಖಂಡಿಸುತ್ತಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆ ಅದಕ್ಕೆ ವಿರುದ್ಧವಾಗಿದೆ. ಡಾ. ಕೆ. ಮರುಳಸಿದ್ದಪ್ಪ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಚಿಂತಕರು ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ಅವಕಾಶಕ್ಕಾಗಿ ಕೇಳಿದಾಗ, ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಬಂಧನೆಯನ್ನು ತೆರವುಗೊಳಿಸಲು ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು.
ಹೀಗಿರುವಾಗ ಯಾವ ಕಾರಣಕ್ಕಾಗಿ ಪ್ರತಿಭಟನೆ ಕಾರ್ಯಕ್ರಮಗಳಿಗೆ ಅನುಮತಿಯನ್ನು ನಿರಾಕರಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ವಿರೋಧಿಗಳ ಟೀಕೆಗೆ ಹೆದರಿ ಅನುಮತಿ ಕೊಡುತ್ತಿಲ್ಲ ಎಂದಾದರೆ ಮೊದಲಿದ್ದ ಕೋಮುವಾದಿ ಸರ್ಕಾರಕ್ಕೂ ಇವರಿಗೂ ಏನು ವ್ಯತ್ಯಾಸ?
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಕರ್ನಾಟಕ ಸರ್ಕಾರದ ಈ ಜನವಿರೋಧಿ ನಡೆ ಒಪ್ಪತಕ್ಕದ್ದಲ್ಲ. ಕಾವ್ಯ ವಾಚನ, ನಾಟಕವನ್ನು ನಿಲ್ಲಿಸುವ ಸರ್ಕಾರ ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷದ ಬಗ್ಗೆ ತನ್ನ ನಿಲುವನ್ನಾದರೂ ಜನರಿಗೆ ತಿಳಿಸಬೇಕು.

ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ