ನಿಶ್ಚಿತಾರ್ಥ ಮಾಡಿಕೊಂಡು, ದೈಹಿಕ ಸಂಬಂಧ ಬೆಳೆಸಿ ಮದುವೆ ಮಾಡಿಕೊಳ್ಳದೆ ವಂಚಿಸಿದ್ದಾರೆ ಎಂದು ಬಿಜೆಪಿ ಶಾಶಕ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪ್ರತೀಕ್ ವಿರುದ್ಧ ಸಂತ್ರಸ್ತ ಯುವತಿ ಮಹಿಳಾ ಆಯೋಗದಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಾರೆ. ತಮ್ಮ ಪುತ್ರನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ಸುಳ್ಳು ಆರೋಪ ಎಂದಿರುವ ಪ್ರಭು ಔಹಾಣ್, ದೂರುದಾರ ಯುವತಿಯ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಔರಾದ ಶಾಸಕರಾಗಿರುವ ಚೌಹಾಣ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ದೂರು ನೀಡಿರುವ ಯುವತಿ ಬೇರೆಯೊಬ್ಬರ ಜೊತೆ ಮೆಸೇಜ್, ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಳು. ಹೀಗೆ ಮಾಡುವ ಯುವತಿಯ ಜೊತೆ ಮಗ ಹೇಗೆ ಮದುವೆಯಾಗಲು ಸಾಧ್ಯ? ನಿಶ್ಚಿತಾರ್ಥವಾದ ದಿನದಿಂದಲೂ ಯುವತಿಗೆ ಬುದ್ಧಿವಾದ ಹೇಳಿದ್ದೇವೆ. ಹುಡುಗಿಯ ಸೋದರ ಮಾವನನ್ನು ಕರೆದು ಆಕೆಗೆ ಬುದ್ದಿ ಹೇಳುವಂತೆ ಸೂಚಿಸಿದ್ದೇವೆ. ಆದರೆ, ಆಕೆ ತನ್ನ ನಡೆತೆಯನ್ನು ಬದಲಿಸಿಕೊಂಡಿಲ್ಲ” ಎಂದು ಯುವತಿ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.

“ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಆರೋಪ ನಮ್ಮ ವಿರುದ್ಧ ಬಂದಿಲ್ಲ. ಯುವತಿಯ ಆರೋಪ ಕೇಳಿ ನನಗೆ ತುಂಬಾ ನೋವಾಗಿದೆ. ನಾನೇ ನಿಂತು ನೂರಾರು ಮದುವೆ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಕೆಲವರು ಅಡೆತಡೆ ಮಾಡಿದರೂ ನಾವು ನಿಶ್ಚಿತಾರ್ಥ ಮಾಡಿದ್ದೇವೆ. ಆಕೆ ನನ್ನ ಮಗಳ ಸಮಾನಳು. ಆಕೆ ತಪ್ಪು ಮಾಡಿದರೂ ನಾವು ಸುಮ್ಮನಿದ್ದೆವು. ಆದರೆ, ಆಕೆ ತನ್ನ ವಿಡಿಯೋ ಕಾಲ್-ಚಾಟಿಂಗ್ಅನ್ನು ನಿಲ್ಲಿಸದ ಕಾರಣ, ಹೀಗಾಗಿ, ಊರಿನ ಮುಖಂಡರ ಜೊತೆ ಸಭೆ ನಡೆಸಿ, ಮದುವೆಯನ್ನು ರದ್ದು ಮಾಡಲಾಗಿದೆ” ಎಂದು ಹೇಳಿದ್ದಾರೆ.
“ನನ್ನ ಕುಟುಂಬದ ಹೆಸರು ಕೆಡಿಸಲು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರ ಗ್ಯಾಂಗ್ ಕೆಲಸ ಮಾಡುತ್ತಿದೆ. ನಾವು ಏನೇ ಮಾಡಿದರೂ, ಆ ಗ್ಯಾಂಗ್ ಅಡ್ಡಿಪಡಿಸುತ್ತದೆ. 2014ರಿಂದಲೂ ಆ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿದೆ. ಈಗ ದೂರುದಾರ ಯುವತಿಯನ್ನು ಕರೆದೊಯ್ದು ಮಹಿಳಾ ಆಯೋಗಕ್ಕೆ ದೂರು ಕೊಡಿಸಿದೆ. ನನ್ನ ಮಗ, ಸೊಸೆ ಹಾಗೂ ಅವರ ಸಹೋದರಿ ಶಿರಡಿಗೆ ಹೋಗಿದ್ದಾರೆ. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡಿಲ್ಲ. ಬೇಕಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಲಿ” ಎಂದಿದ್ದಾರೆ.