ಎಲ್ಲ ಕಾಲಕ್ಕೂ ಅನ್ವಯವಾಗುವ ಮಂಟೋರ ʼಹಿಂದೂಸ್ತಾನ್ ಕೋ ಲೀಡರೋ ಸೆ ಬಚಾವೋʼ

Date:

Advertisements
ಸಾದತ್ ಹಸನ್ ಮಂಟೋ ಮೊಹಮ್ಮದ್ ಅಲಿ ಜಿನ್ಹಾರನ್ನ ಗಮನದಲ್ಲಿಟ್ಟುಕೊಂಡು ಬರೆದ ಲೇಖನ ʼʼಹಿಂದೂಸ್ತಾನ್ ಕೋ ಲೀಡರೋ ಸೆ ಬಚಾವೋʼʼ ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. More so ever now… ಒಮ್ಮೆ ಓದಿಬಿಡಿ...

ನಾನು ಬಹಳ ಇಷ್ಟಪಟ್ಟು ಓದುವ ಸಣ್ಣ ಕತೆಗಾರರಲ್ಲಿ ನಿಕೊಲಾಯ್ ಗೊಗೊಲ್, ಕಾಫ್ಕ, ಸಾರ್ತ್ರ, ಬೋರ್ಗೆಸ್, ಚೆಕಾವ್, ಪ್ರೇಮ್ ಚಂದ್, ವೈಕೋಂ ಬಷೀರ್, ಅಂತರ್ಜನಂ ಸದಾ ಇರುತ್ತಾರೆ. ಸಾಮಾಜಿಕ ಪಿಡುಗುಗಳನ್ನ, ಶೋಷಣೆಗೆ ತೊಡಗಿರುವ ಸಾಂಸ್ಥಿಕ ಧರ್ಮಗಳನ್ನ, ಭ್ರಷ್ಟ ವ್ಯವಸ್ಥೆಯನ್ನ ನೀರ್ಭಿತರಾಗಿ ಪ್ರಶ್ನಿಸುವ ಎದೆಗಾರಿಕೆಗೆ, ಅವರಿಗಿದ್ದ ಸಾಮಾಜಿಕ ಬದ್ಧತೆ ಮತ್ತು ಮನುಷ್ಯನ ಅಸ್ತಿತ್ವವನ್ನೇ ಎಳೆಎಳೆಯಾಗಿ ಬಿಚ್ಚಿಟ್ಟ ಈ ಕತೆಗಾರರು ಆದರ್ಶವೇ ಸರಿ. ಆದರೆ ದೇಶ ವಿಭಜನೆಯಾಗುವ ತೀರಾ ಗೊಂದಲಮಯ ಕಾಲದಲ್ಲಿ ಕತೆಗಳನ್ನ ಬರೆದ ಹಸನ್ ಮಂಟೋಗೆ ನನ್ನೆದೆಯಲ್ಲಿ ವಿಶೇಷ ಸ್ಥಾನವಿದೆ. ಅವನ ದೃಢ ನಿಲುವು, ನೇರ ನುಡಿಗಳಿಂದ ಆತ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿ, ಪರದಾಡಿದರೂ ಅಳುಕದ ಬರಹಗಾರ ಮಂಟೋ. ಮಂಟೋ ನಮ್ಮವ ಎಂದು ಭಾರತೀಯರು ಹೇಳಿಕೊಂಡರೆ, ಪಾಕಿಸ್ತಾನಿಯರಿಗೂ ಮಂಟೋ ಮೇಲೆ ಅಭಿಮಾನವಿದೆ. ಭಾರತ-ಪಾಕಿಸ್ತಾನ ವಿಭಜನೆಯನ್ನೇ ಮಹಾ ಹುಚ್ಚುತನವೆಂದಿದ್ದ ಮಂಟೋ ಒಮ್ಮೆ ಹೀಗೆಂದಿದ್ದ- “It’s quite amazing that I’m considered one of Pakistan’s and India’s big writers. I can only say that it’s possible that I’ve tricked them into believing this shit.” ಸಾದತ್ ಹಸನ್ ಮಂಟೋ ಮೊಹಮ್ಮದ್ ಅಲಿ ಜಿನ್ಹಾರನ್ನ ಗಮನದಲ್ಲಿಟ್ಟುಕೊಂಡು ಬರೆದ ಲೇಖನ ʼʼಹಿಂದೂಸ್ತಾನ್ ಕೋ ಲೀಡರೋ ಸೆ ಬಚಾವೋʼʼ ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. More so ever now… ಒಮ್ಮೆ ಓದಿಬಿಡಿ…

ನಾವುಗಳು ಕೆಲ ಕಾಲದಿಂದ ಕೇಳಿಸಿಕೊಳ್ಳುತ್ತಲೇ ಬಂದಿದ್ದೇವೆ- ಭಾರತವನ್ನ ಇದರಿಂದ ಉಳಿಸಿ, ಭಾರತವನ್ನ ಅದರಿಂದ ಉಳಿಸಿ ಎಂದು. ವಾಸ್ತವವೇನೆಂದರೆ ಹೀಗೆ ಭಾರತವನ್ನ ಉಳಿಸಿ, ಉಳಿಸಿ ಎಂದು ಕೂಗಿಕೊಳ್ಳುವವರಿಂದ ಭಾರತವನ್ನ ಉಳಿಸಬೇಕಿದೆ, ರಕ್ಷಿಸಬೇಕಿದೆ. ಈ ರೀತಿಯ ವಿಷಯಗಳನ್ನ ಹುಟ್ಟುಹಾಕುವುದರಲ್ಲಿ ಅವರು ನಿಪುಣರೆಂಬುವುದರಲ್ಲಿ ಯಾವ ಅನುಮಾನಗಳಿಲ್ಲ. ಕನಿಷ್ಠ ಪ್ರಾಮಾಣಿಕತೆಯು ಈ ನಿಪುಣರಲ್ಲಿ ಇರುವುದಿಲ್ಲ. ಇಳಿಸಂಜೆಯಲ್ಲಿ ಎಲ್ಲವನ್ನು ಖಂಡಿಸಿ, ಕೆರಳಿಸುವ ಉಗ್ರ ಭಾಷಣ ಮಾಡಿ ಮತ್ತು ನೀತಿ ಬೋಧನೆ ನೀಡಿದ ನಂತರ ಶಯನಗಾರಕ್ಕೆ ಮರಳಿ ಮೃದು ಹಾಸಿಗೆಯ ಮೇಲೆ ಕುಳಿತಾಗ ಇವರ ತಲೆಗಳು ಖಾಲಿಯಾಗಿರುತ್ತವೆ, ದೇಶವನ್ನ ಉಳಿಸುವ, ಜನರನ್ನ ರಕ್ಷಿಸುವ ಪೊಳ್ಳು ಮಾತುಗಳು ಮೆದುಳಿನಿಂದ ಮಾಯವಾಗಿರುತ್ತವೆ.

ಭಾರತವನ್ನ ನಿಜವಾಗಿಯೂ ಬಾಧಿಸುತ್ತಿರುವ ವಿಷಯಗಳ ಕುರಿತು ಅವರು ಒಂದು ಕ್ಷಣವೂ ವ್ಯಯಿಸುವುದಿಲ್ಲ. ಅವರ ಕಳವಳ, ಕಾಳಜಿಗಳೆಲ್ಲಾ ವೈಯಕ್ತಿಕ ವಿಚಾರಗಳಿಗಷ್ಟೇ ರಾಷ್ಟ್ರಕ್ಕಲ್ಲ. ಸ್ವಾರ್ಥ ಅವರನ್ನ ಯಾವ ಮಟ್ಟಕ್ಕೆ ಆವರಿಸಿಕೊಂಡಿರುತ್ತವೆಯೆಂದರೆ ಜನರ ಕುರಿತು ಆಲೋಚಿಸುವುದಕ್ಕೆ ಅವರಿಗೆ ಆಸಕ್ತಿಯೇ ಇರುವುದಿಲ್ಲ. ತಮ್ಮ ಕುಟುಂಬ ಮತ್ತು ಮನೆಯನ್ನೇ ಸಮರ್ಥವಾಗಿ ನಿಭಾಯಿಸಲಾಗದಿದ್ದವರು, ಗುಣದಲ್ಲಿ ನೀಚರು, ದೇಶವನ್ನ ಸರಿಪಡಿಸುತ್ತೇವೆ ಎನ್ನುತ್ತಾರೆ, ಸರಿ ತಪ್ಪುಗಳ ಕುರಿತು ಬೋಧಿಸುತ್ತಾರೆ! ಇವರ ಹೇಳಿಕೆಗಳು ಇಷ್ಟು ಹಾಸ್ಯಾಸ್ಪದವಾಗಿಲ್ಲದಿದ್ದರೆ ಇವುಗಳನ್ನ ಬಹುಶಃ ತಮಾಷೆ ಎಂದಾದರೂ ಪರಿಗಣಿಸಬಹುದಿತ್ತು.

ಈ ನಾಯಕರು- ಧರ್ಮವನ್ನೊಂದು ಕುಂಟು, ಅಂಗವಿಕಲನಂತೆ ನೋಡುತ್ತಾರೆ. ಆ ಕುಂಟನನ್ನ ಭಿಕ್ಷಾಟನೆ ಬಿಡುತ್ತಾರೆ. ಹಣ ಸಂಗ್ರಹಿಸುತ್ತಾರೆ. ಧರ್ಮವನ್ನ, ಮೇಲಧಿಕಾರಿಗಳನ್ನ ಕಣ್ಮುಚ್ಚಿ ನಂಬುವ ಜನರ ಮುಂದೆ ಆಗಾಗ ಅಂಗವಿಕಲನ ಹೆಣವನ್ನ ಪ್ರದರ್ಶನಕ್ಕಿಟ್ಟು ಮೊರೆಯಿಡುತ್ತಾರೆ. ಪರಿಶ್ರಮ, ಪ್ರಯತ್ನಗಳಿಂದ ಸತ್ತ ಅಂಗವಿಕಲನಿಗೂ ಮರುಜೀವ ನೀಡುತ್ತೇವೆಂದು ನುಡಿಯುತ್ತಾರೆ.

ನಿಜ ಏನೆಂದರೆ ಧರ್ಮ ಹೇಗಿತ್ತೋ ಹಾಗೆ ಇದೆ. ಅದು ಹಾಗೆ ಉಳಿಯಲಿದೆ. ಧಾರ್ಮಿಕ ತತ್ವಗಳು ಅಖಂಡವಾಗಿ, ಮಜಬೂತಾಗಿವೆ. ಧರ್ಮ ಎಂದಿಗೂ ಬದಲಾಗದು. ಅಪ್ಪಳಿಸುವ ಅಲೆಗೆ ಸವೆಯದ ಪರ್ವತವದು. ಹಾಗಾಗಿ “ನಮ್ಮ ಧರ್ಮ ಅಪಾಯದಲ್ಲಿದೆ” ಎಂದು ಅಳುವ, ಗೋಳಿಡುವ ನಾಯಕರೆಲ್ಲ ಅಸಂಬದ್ಧ… It is all rubbish.

ಮೊದಲಿಗೆ ಧರ್ಮ, ಮತ, ನಂಬಿಕೆ ಎಂಬುದು ಅಪಾಯದಲ್ಲಿ ಬೀಳುವ ವಿಷಯಗಳೇ ಅಲ್ಲ. ಸದಾ ಅಪಾಯದಲ್ಲಿರುವವರು ನಾಯಕರು ಮಾತ್ರ. ಧರ್ಮ ಅಪಾಯದಲ್ಲಿದೆ ಎಂದೇಳಿ ತಮ್ಮನ್ನ ತಾವು ರಕ್ಷಿಸಿಕೊಳ್ಳುತ್ತಾರೆ. ಹಿತಕರ ಪರಿಸರದಲಿ ನಂಜಿಡುವ ನಾಯಕರುಗಳಿಂದ ಭಾರತವನ್ನ ರಕ್ಷಿಸಿ. ನಿಮಗೆ ತಿಳಿದಿಲ್ಲವೆನ್ನಿಸುತ್ತೆ ಈ ನಾಯಕರು ಕೈಯಲ್ಲಿ ಕತ್ತರಿ ಹಿಡಿದು ಬೀದಿ ಬೀದಿ ಸುತ್ತುತ್ತಾರೆ, ನಿಮಗೆ ಅರಿವಿಲ್ಲದ ಹಾಗೆ ನಿಮ್ಮ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ. ಅವರ ಜೀವನದ ಪರಮ ಗುರಿ ಹಣ, ಸಂಪತ್ತು. ಅವರು ಪ್ರತಿಬಾರಿ ನಿಟ್ಟುಸಿರು ಬಿಟ್ಟಾಗಲು ಅಲ್ಲಿ ಅಪ್ರಾಮಾಣಿಕತೆ, ದುರಾಸೆಯ ದುರ್ನಾತವಿರುತ್ತದೆ.

ಭಾರಿಗಾತ್ರದ ಹೂಮಾಲೆ ತೊಟ್ಟು, ಬೃಹತ್ ಮೆರವಣಿಗೆಯ ಮುಂಚೂಣಿಯಲ್ಲಿದ್ದುಕೊಂಡು, ಟೊಳ್ಳು ಪದಗಳಿಂದಲೇ ತುಂಬಿತುಳುಕುವ ಅಂತ್ಯವಿಲ್ಲದ ಭಾಷಣ ನೀಡುತ್ತಲೇ ತಮ್ಮ ಅಧಿಕಾರದ ಹಾದಿ ಸುಗಮ ಮಾಡಿಕೊಳ್ಳುತ್ತಾರೆ. ಐಷಾರಾಮಿ ಜೀವನದ ದಾರಿ ಕಂಡುಕೊಳ್ಳುತ್ತಾರೆ. ಅಪಾರ ಹಣ ಸಂಗ್ರಹಿಸುವ, ಸಂಪತ್ತು ಕ್ರೋಡೀಕರಿಸಿಕೊಳ್ಳುವ ಇವರು ನಿರುದ್ಯೋಗ ಹೇಗೆ ಕೊನೆಗೊಳ್ಳುವುದೆಂದು ಎಂದಾದರೂ ಹೇಳಿದ್ದಾರೆಯೇ? “ಧರ್ಮ, ಧರ್ಮ”ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನ ನಿಷ್ಠೆಯಿಂದ ಪಾಲಿಸಿದ್ದಾರೆ? ಬೇರೆಯವರಿಂದ ಸಂಗ್ರಹಿಸಿದ ಹಣದಲ್ಲಿ ಬಾಳುವ, ಪರರು ನೀಡಿದ ಮನೆಗಳಲ್ಲಿ ಬದುಕುವ ಇವರು ನಿಮ್ಮನ್ನ ಸ್ವಾವಲಂಬಿಗಳಾಗಿ ಹೇಗೆ ಮಾಡಬಲ್ಲರು?

ಬೇರೆ ಬೇರೆ ರಾಗಗಳನ್ನಾಡುವ ನಾನಾ ನಾಯಕರು ಭಾರತಕ್ಕಿಂದು ಬೇಡ. ಒಂದೇ ರಾಗದಲ್ಲಿ ಒಂದೇ ಹಾಡು ಹಾಡುವ ನಾಯಕರು ಬೇಕು. ಲಂಗುಲಗಾಮಿಲ್ಲದೆ ಓಡುತ್ತಿರುವ ಆಡಳಿತದ ಹುಚ್ಚು ಕುದುರೆಯನ್ನ ಹತೋಟಿಗೆ ತರುವ ನಾಯಕ ಬೇಕು. ದಕ್ಷತೆಯಿಂದ ದೇಶವನ್ನ ಸ್ವಾತಂತ್ರ್ಯದೆಡೆಗೆ ನಡೆಸುವ ನಾಯಕ ಬೇಕು. ಕಲೀಫ್ ಉಮರ್‌ನ ವಿವೇಕ, ಆಟ ಟರ್ಕನ್‌ನ ಕೆಚ್ಚೆದೆಯ ನಾಯಕ ಬೇಕು.

ನೆನಪಿಡಿ- ಲೋಭಿಯೊಬ್ಬ ನಮ್ಮನ್ನು ಸರಿಯಾದ ಮಾರ್ಗದಲ್ಲೆಂದೂ ಕರೆದುಕೊಂಡು ಹೋಗಲಾರ. ರೇಷಿಮೆ ಉಡುಗೆ, ತೊಡುಗೆಯಲ್ಲಿರುವವರು ಬೀದಿ ಬದಿಯಲ್ಲಿ ಮಲಗುವವರಿಗೆ ಏನನ್ನೂ ಕೊಡಲಾರರು. ಲೋಭಿಗಳನ್ನ ಪಕ್ಕಕ್ಕೆ ಒಗೆಯಿರಿ. ಹಾಸಿಗೆಯ ಸಂದುಗಳಲ್ಲಿ ತೆವಳುತ್ತ ವಾಸಿಸುವ, ಹೊರಬಂದು ರಕ್ತ ಹೀರುವ ತಿಗಣೆಗಳವರು. ನಿಮ್ಮ ಧಿಕ್ಕಾರ-ಪ್ರತಿರೋಧದ ಕಾವಿನಿಂದ ಇವರನ್ನ ಸಂದುಗಳಿಂದ ಹೊರಗೆಳೆದು, ಹೊರತಳ್ಳಿ.

(ಈಗಿನ ನಾಯಕರು) ತಾವು ಸಿರಿವಂತರಾಗುವ ಉದ್ದೇಶದಿಂದಲೇ ಸಿರಿವಂತರ ವಿರುದ್ಧ ಗಲಾಟೆ ಮಾಡುತ್ತಾರೆ. ನಿಮ್ಮ ಕಲ್ಪನೆಗೂ ನಿಲುಕದ ನೀಚರಿವರು. ಠಕ್ಕರಲ್ಲಿ ಮಹಾ ಠಕ್ಕರು. ಅವರಿಗೆ ನಿಮ್ಮ ಅನಿಸಿಕೆಗಳನ್ನ ತಿಳಿಸಿಬಿಡಿ. ಆಕ್ರಮಿಸಿಕೊಂಡಿರುವ ಸಿಂಹಾಸನ, ಮಹಾಪೀಠಗಳಿಂದ ಇವರನ್ನ ಕೆಳಗಿಳಿಸಿ, ಹೊರದಬ್ಬುವ ಬಲಿಷ್ಠ ಬಾಹು, ಅಗಲ ಎದೆಯಿರುವ ಹರಿದಬಟ್ಟೆ ತೊಟ್ಟ ದಿಟ್ಟ ಯುವಕರು ದೇಶಕ್ಕೆ ತುರ್ತಾಗಿ ಬೇಕಾಗಿದ್ದಾರೆ.

ಇದನ್ನು ಓದಿದ್ದೀರಾ?: ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಹಿಮಾಂಶಿ ಶೆಲತ್: ಅಗ್ರಹಾರ ಕೃಷ್ಣಮೂರ್ತಿ ಬರೆಹ

ಬಡವರ ಮೇಲೆ ಸಹಾನುಭೂತಿ ತೋರುವ ಹಕ್ಕು ಅವರಿಗಿಲ್ಲ. ನೆನಪಿಡಿ ಬಡತನದಲ್ಲಿ ಯಾವ ಅವಮಾನವಿಲ್ಲ. ಬಡತನದಲ್ಲಿ ಅವಮಾನವಿದೆಯೆಂದುಕೊಳ್ಳುವುದೇ ದೊಡ್ಡ ಅವಮಾನ. ಬಡವನಾದರೂ ತನ್ನ ದುಡಿಮೆಯಿಂದ ಬದುಕುವವ ಕಿತ್ತು ತಿನ್ನುವವನಿಗಿಂತ ಮೇಲು. ದುಡಿಮೆಯಿಂದ ಬದುಕುವವರಾಗಿ. ಸ್ವಾಭಿಮಾನಿಗಳಾಗಿ. ನಿಮ್ಮ ಒಳಿತೆಲ್ಲಿದೆ ಎಂದು ನಿಷ್ಠುರವಾಗಿ ನೋಡಿ. ನಮ್ಮ ಬದುಕು ನಮ್ಮ ಕೈಯಲ್ಲಿದೆ ಎಂದು ಸಾಬೀತುಪಡಿಸಿದಾಗ ಈ ನಾಯಕರಿಗೆ ಅವಿತುಕೊಳ್ಳಲು ಜಾಗವಿರುವುದಿಲ್ಲ.

(ಮೂಲ- ಸಾದತ್ ಹಸನ್ ಮಂಟೋ ಅವರ “ಹಿಂದೂಸ್ತಾನ್ ಕೋ ಲೀಡರೋ ಸೆ ಬಚಾವೋ” ಅನುವಾದ: ಹರೀಶ್ ಗಂಗಾಧರ್)

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

Download Eedina App Android / iOS

X