ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ತಪ್ಪನ್ನು ಒಪ್ಪಿಕೊಂಡಿದ್ದರು ಎಂದು ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಪಿ.ಚಿದಂಬರಂ ಅವರು ಸುಮಾರು ಐವತ್ತು ವರ್ಷಗಳ ಬಳಿಕ ತುರ್ತು ಪರಿಸ್ಥಿತಿ ಘೋಷಿಸಿದ ದಿನವಾದ ಜೂನ್ 25 ಅನ್ನು ಸಂವಿಧಾನ ಹತ್ಯೆ ದಿನವನ್ನಾಗಿ ಘೋಷಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಿ ಚಿದಂಬರಂ, “ಬಿಜೆಪಿ ಏಕೆ 18 ಅಥವಾ 17ನೇ ಶತಮಾನಕ್ಕೆ ಹಿಂತಿರುಗುತ್ತಿಲ್ಲ? ಇಂದು ವಾಸಿಸುವ ಶೇಕಡ 75ರಷ್ಟು ಭಾರತೀಯರು 1975ರ ನಂತರ ಜನಿಸಿದವರು. ತುರ್ತು ಪರಿಸ್ಥಿತಿಯು ಒಂದು ತಪ್ಪು ಮತ್ತು ಅದನ್ನು ಇಂದಿರಾ ಗಾಂಧಿಯವರು ಒಪ್ಪಿಕೊಂಡಿದ್ದರು. ತುರ್ತು ಪರಿಸ್ಥಿತಿಯನ್ನು ಅಷ್ಟು ಸುಲಭವಾಗಿ ಹೇರಲು ಸಾಧ್ಯವಾಗದಂತೆ ನಾವು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದೇವೆ” ಎಂದು ಹೇಳಿದರು.
“50 ವರ್ಷಗಳ ನಂತರ ತುರ್ತು ಪರಿಸ್ಥಿತಿಯ ಹಕ್ಕುಗಳು ಮತ್ತು ತಪ್ಪುಗಳ ಬಗ್ಗೆ ಚರ್ಚಿಸುವುದರಲ್ಲಿ ಏನು ಪ್ರಯೋಜನ” ಎಂದು ಪ್ರಶ್ನಿಸಿದ ಚಿದಂಬರಂ “ಈ ವಿಚಾರದಲ್ಲಿ ಹಿಂದಿನಿಂದಲೂ ಪಾಠ ಕಲಿತಿದ್ದೇವೆ. 50 ವರ್ಷಗಳ ನಂತರ ತುರ್ತು ಪರಿಸ್ಥಿತಿಯ ಹಕ್ಕು-ತಪ್ಪುಗಳ ಬಗ್ಗೆ ಚರ್ಚೆ ನಡೆಸುವುದರಲ್ಲಿ ಅರ್ಥವೇನು? ಬಿಜೆಪಿಯವರು ಹಿಂದಿನದನ್ನು ಮರೆಯಬೇಕು, ನಾವು ಹಿಂದಿನ ತಪ್ಪಿನ ಪಾಠಗಳನ್ನು ಕಲಿತಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಅಘೋಷಿತ ತುರ್ತು ಪರಿಸ್ಥಿತಿ | ಅಂಬೇಡ್ಕರ್ ರಚಿತ ಸಂವಿಧಾನ ನಾಶಕ್ಕೆ ಬಿಜೆಪಿ ಪಿತೂರಿ: ಶರದ್ ಪವಾರ್
ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿದ ದಿನವನ್ನು ಸಂವಿಧಾನ ಹತ್ಯೆ ದಿವಸವಾಗಿ ಘೋಷಿಸಿದೆ. ಇದಾದ ಬಳಿಕ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಕಳೆದ 10 ವರ್ಷಗಳಲ್ಲಿ ನಿಮ್ಮ ಸರ್ಕಾರವು ಪ್ರತಿದಿನ ಸಂವಿಧಾನ ಹತ್ಯೆ ದಿನ ಆಚರಿಸಿದೆ. ನೀವು ಪ್ರತಿಯೊಬ್ಬ ಬಡ ಮತ್ತು ವಂಚಿತ ವರ್ಗದ ಸ್ವಾಭಿಮಾನವನ್ನು ಕಿತ್ತುಕೊಂಡಿದ್ದೀರಿ” ಎಂದು ಹೇಳಿದರು.
ಇನ್ನು ಟಿಎಂಸಿ ನಾಯಕ ಕುನಾಲ್ ಘೋಷ್, “ಬಿಜೆಪಿ ತನ್ನ ಜನವಿರೋಧಿ ನೀತಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
#WATCH | On June 25 to be observed as Samvidhan Hatya Divas in remembrance of the 1975 Emergency, Congress leader P Chidambaram says, “Why is the BJP not going back to the 18th or the 17th century? 75% of the Indians living today were born after 1975. Emergency was a mistake and… pic.twitter.com/XAxmbgbHQC
— ANI (@ANI) July 14, 2024