2020ರ ದೆಹಲಿ ಕೋಮುಗಲಭೆ ಪ್ರಕರಣದ ಸಂಬಂಧದಲ್ಲಿ, ಏನೇನೋ ಆರೋಪ ಹೊರಿಸಲಾಗಿ, ಐದು ವರ್ಷಗಳಿಂದ ಸೆರೆಮನೆಯಲ್ಲಿರುವ ಶರ್ಜೀಲ್ ಇಮಾಮ್, ಉಮರ್ ಖಾಲಿದ್, ಅತ್ತರ್ ಖಾನ್, ಅಬ್ದುಲ್ ಖಾಲಿದ್ ಸೈಯಫಿ, ಗುಲ್ಫಿಷಾ ಫಾತಿಮಾ, ಮೀರನ್ ಹೈದರ್, ಶಿಫಾ-ಉರ್-ರಹಮಾನ್, ಮೊಹಮ್ಮದ್ ಸಲೀಂ ಖಾನ್, ಶಾದಾಬ್ ಅಹಮದ್ ಮತ್ತು ತಸ್ಲೀಂ ಅಹಮದ್ ಅವರುಗಳಿಗೆ ದೆಹಲಿಯ ಹೈಕೋರ್ಟು ಜಾಮೀನು ನೀಡಲು ಮತ್ತೂ ಒಮ್ಮೆ ನಿರಾಕರಿಸಿದೆ. ಅವರನ್ನೂ, ಅವರಂತೆಯೇ ಭೀಮಾ-ಕೋರೆಗಾಂವ್ ಪ್ರಕರಣದ ಸಂಬಂಧದಲ್ಲಿ, ಏನೇನೋ ಆರೋಪ ಹೊರಿಸಲಾಗಿ ವರ್ಷಗಟ್ಟಲೆ ಕಾಲ ಸೆರೆಮನೆವಾಸ ಕಂಡ ಇಲ್ಲವೆ ಕಾಣುತ್ತಿರುವ ಸುರೇಂದ್ರ ಗಾಡ್ಲಿಂಗ್, ಆನಂದ್ ತೇಲ್ತುಂಬ್ಡೆ, ಶೋಮಾ ಸೇನ್, ಹುತಾತ್ಮ ಫಾದರ್ ಸ್ಟ್ಯಾನ್ ಸ್ವಾಮಿ ಮುಂತಾದ ಇತರ ಧೀಮಂತ-ಧೀಮಂತೆಯರನ್ನೂ, ಹಾಗೂ ಅವರೆಲ್ಲರಂಥ ಇನ್ನೂ ಎಷ್ಟೆಷ್ಟೋ ಜನರನ್ನೂ ನೆನೆಯುತ್ತ, ವಿಜ್ಞಾನಿ ಮತ್ತು ಉರ್ದು ಕವಿ ಗೌಹರ್ ರಜಾ಼ ಅವರು ಬರೆದ ‘ಮೈ ಲಾರ್ಡ್’ ಕವಿತೆಯ ಕನ್ನಡ ಭಾವರೂಪಾಂತರ, ರಘುನಂದನ ಅವರ ‘ನಾನು ಸತ್ತಮೇಲೆ’ ಕವನ ಸಂಕಲನದಿಂದ:
ಹೌದು ಮಹಾಸ್ವಾಮಿ
ಹೌದು ಮಹಾಸ್ವಾಮಿ
ಪಾತಕ ಮಾಡಿದ್ದೇನೆ ನಾನು ಮಹಾಪಾಪಿಷ್ಠನೆ
ಬಾಯಿಮುಚ್ಚಿಕೊಂಡಿರಬೇಕಾದೀ ಕಾಲದಲ್ಲಿ
ಸೊಲ್ಲೆತ್ತಿಬಿಟ್ಟೆ ತಪ್ಪು ತಪ್ಪಾಯಿತು ಮಹಾ
ಪಾತಕವಾಯ್ತು ತಪ್ಪಿತಸ್ಥನೆಂದೇ ತೀರ್ಮಾನಿಸಿ
ಬೇಕಾದ ಶಾಸ್ತಿಮಾಡಿ ಬೇಕಾsದಂತೆ ಮಾಡಿಬಿಡಿ
ಪರಮಾತ್ಮನ ನೆರಳು ನೀವು ಮಹಾಸ್ವಾಮಿ
ಇರುವುದೇ ನ್ಯಾಯ ನೀತಿ ಧರ್ಮದ ಬಟ
ವಾಡೆಗೆಂದು ಆಗಲಿ ಆಗಲಿ ಮಹಾಸ್ವಾಮಿ
ಸಾಗಲಿ ಇಂದಿಗೆ ನಿಮ್ಮದೇs ನಡೆಯಲಿ
ನಿಮಗಾವ ಅಡ್ಡಿ ಮಹಾಸ್ವಾಮಿ ತಿರುಪಿ ತಿರುಚಿ
ನ್ಯಾಯ ನೀತಿ ಧರ್ಮ ಬೇಕಾದಂತೆ ಕೆತ್ತಿಬಿಡಿ
ಒಪ್ಪು ಒಪ್ಪಿಗೆಯೆ ಹಗೆ ತೀರಿಸಿಕೊಳ್ಳುವುದೇ ನ್ಯಾಯವೆನ್ನಿ
ಸೊಲ್ಲೆತ್ತಿದವರ ತುಟಿ ಹೊಲಿಯಲು ಇದೇ ದಬ್ಬಳವೆನ್ನಿ
ಇನ್ನೀಗ ಇದೇ ನ್ಯಾಯ ನೀತಿ ಧರ್ಮ ಎಂದು ಕುಡು
ಗೋಲಿನಿಂದ ಒಂದಾದಮೇಲೊಂದು ಬೆರಳ್ ಕೊಚ್ಚಿ
ಬಿಸುಟುಹಾಕಿ ಬೆರಳುಮಾಡದಂತೆ ಯಾರೂ
ಯಾವತ್ತೂ ಆಳುವ ದಣಿಗಳತ್ತ ಇನ್ನು ತೋರದಂತೆ
ನಿಮಗಾವ ಅಡ್ಡಿ ಮಹಾಸ್ವಾಮಿ ಕಾನೂನು ರೂಲುದೊಣ್ಣೆ
ಎತ್ತೆತ್ತಿ ಬಾರಿಸಿ ಕೂಲಿಮಠದಯ್ಯ ಬಡಿಯುತ್ತ ಇದ್ದಂತೆ
ತಲೆಹೋಕ ಹೈಕಳೆತ್ತಿದ್ದ ತಲೆಯ ಹೌದ್ಹೌದು ಮನ್ನಿಸ
ಬಾರದ ಪಾತಕಿ ನಾನು ಹಾಲಲ್ಲದ್ದಿ ಮಾಸ್ವಾಮಿ ಆಸಿಡ್ಡಲದ್ದಿ
ನಿಮ್ಮ ಪರ್ಮಿಟ್ಟಿದ್ದರೆ ಬುದ್ದೀ ಮತ್ತೊಂದು ಮಾತು
ಇತಿಹಾಸವೆ ಕಲಿಸಿದ್ದು: ಮಾಗಿ ಬೋಳಿನ ಮಧ್ಯದಲ್ಲಿ
ಹೂ ಅರಳಲು ಶುರುವಾದರೆ ತಡೆಯಲಾಗದು ಯಾರೂ
ಕಾರ್ಮೋಡ ಎದ್ದರೆ ತೊಯ್ದುಹೋಗುವುದು ಮರಳುಗಾಡೂ
ಎಲೆಯುದುರಿದ ಮರದಲ್ಲಿ ಕೋಗಿಲೆs ಹಾಡು ಶುರುವಾದರೆ
ಕೂಗೇ ಕೂಗತ sದ ಗಿರಣಿ ಕರೆಯೊ ಹಾಂಗ ಕಣಿವೆಕಣಿವೆ ಆಗ
ಓಗೊಟ್ಟುಗೊಟ್ಟು ಗುಡ್ಡಗುಡ್ಡ ನುಗ್ಗಾಗಿಹೋಗಿ ಯಾರು
ಏನು ಮಾಡಿದರೂ ನಿಲ್ಲದು ಮೀಯಿಸಿಬಿಡುತ್ತದೆ ಎಲ್ಲವನ್ನೂ
ಹೌದು ಮಹಾಸ್ವಾಮಿ
ಪಾತಕ ಮಾಡಿದ್ದೇನೆ ನಾನು ಮಹಾಪಾಪಿಷ್ಠನೆ
