ಸಂಸತ್ತಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಪತ್ರಿಕಾಗೋಷ್ಠಿ ಮತ್ತು ಬಿಚ್ಚಿಟ್ಟ ಮಾಹಿತಿಗಳು ಅನುಮಾನಕ್ಕೆ ಆಸ್ಪದವಿಲ್ಲದಂತಿದೆ. ಮಹದೇವಪುರ ವಿಧಾನಸಭಾ ವಲಯದ ಮತದಾರರ ಪಟ್ಟಿಯಲ್ಲಿ ನಡೆದಿರುವ ಅಪರಾಧಿ ಚಟುವಟಿಕೆಗಳು ಸಾಬೀತಾಗಿವೆ. ಈ ಕೂಡಲೇ ಚುನಾವಣಾ ಆಯೋಗ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಎದ್ದೇಳು ಕರ್ನಾಟಕ ಆಗ್ರಹಿಸಿದೆ.
ಸೋಮವಾರ ಎದ್ದೇಳು ಕರ್ನಾಟಕದ ಕೇಂದ್ರಕಾರಿ ಸಮಿತಿ ಸದಸ್ಯರಾದ ತಾರಾರಾವ್, ಮುಹಮ್ಮದ್ ಯೂಸುಫ್ ಕನ್ನಿ, ಫಾ.ಅರುಣ್ ಲೂಯಿಸ್, ಕೆ.ಎಲ್.ಅಶೋಕ್, ಜೆ.ಎಂ.ವೀರಸಂಗಯ್ಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಪರಾಧಿ ಚಟುವಟಿಕೆಗಳು ನಡೆದಿದೆ ಎಂದು ಹೇಳುತ್ತಿರುವುದು ಆರೋಪ ಮಾತ್ರವಲ್ಲ, ಸಾಕ್ಷ್ಯ. ಐದು ಬಗೆಯ ಅಕ್ರಮಗಳ ಕುರಿತು ಒಂದಲ್ಲ, ಸಾವಿರಾರು ಸಾಕ್ಷಿಗಳನ್ನು ಒದಗಿಸಲಾಗಿದೆ. ನಕಲು ಮತದಾರರನ್ನು ಸೃಷ್ಟಿಸಿರುವ, ತಂದೆಯ ಹೆಸರಿಲ್ಲದ, ವಿಳಾಸವಿಲ್ಲದ ಮತ ಚೀಟಿಗಳನ್ನು ವಿತರಿಸಿರುವ, ಭಾವಚಿತ್ರವೇ ಇಲ್ಲದಂತೆ ಅಥವಾ ಕಾಣದಂತೆ ಮತದಾನ ಚೀಟಿ ನೀಡಿರುವ, ಒಂದೇ ವಿಳಾಸದಲ್ಲಿ 40, 80 ಜನರಿಗೆ ಮತಚೀಟಿ ಸೃಷ್ಟಿಸಿರುವ, ಹೊಸ ಮತದಾರರಿಗೆ ನೀಡಬೇಕಾದ ಫಾರಂ ನಂಬರ್ 6ನ್ನು ದುರುಪಯೋಗ ಪಡಿಸಿಕೊಂಡಿರುವ, ಅಪರಾಧ ಸಾಕಷ್ಟು ಸಾಕ್ಷ್ಯಗಳ ಮೂಲಕ ಸಾಬೀತಾಗಿದೆ ಎಂದು ವಿವರಿಸಿದೆ.
ಇದು ಒಂದು ಲೋಕಸಭಾ ಕ್ಷೇತ್ರದ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮ. ಇಡೀ ದೇಶದಲ್ಲಿ ನೂರಾರು ಕಡೆ ಇದು ನಡೆದಿರುವ ಎಲ್ಲ ಸಾಧ್ಯತೆಗಳೂ ಇವೆ. ಚುನಾವಣಾ ಫಲಿತಾಂಶ ಬಂದ ಕೂಡಲೇ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆ ಎದ್ದೇಳು ಕರ್ನಾಟಕ ಹೇಳಿಕೆ ನೀಡಿತ್ತು. ಮರು ಮತದಾನಕ್ಕೆ ಹಾಕುವಂತೆ ಬೆಂಗಳೂರು ಕೇಂದ್ರದ ಅಭ್ಯರ್ಥಿಯನ್ನೂ ಒತ್ತಾಯಿಸಿತ್ತು. ಜುಲೈ 2024 ರಲ್ಲಿ ವೋಟ್ ಫಾರ್ ಡೆಮಾಕ್ರಸಿ ಎಂಬ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿ, ಅದರಲ್ಲಿ ದೇಶದ 79 ಕ್ಷೇತ್ರಗಳಲ್ಲಿ ಮತ ಕಳವು ನಡೆದಿರುವುದಕ್ಕೆ ಸಾಂದರ್ಭಿಕ ಸಾಕ್ಷ್ಯವನ್ನು ಮುಂದಿಟ್ಟಿತ್ತು ಎಂದು ಸಮಿತಿ ಮಾಹಿತಿ ನೀಡಿದೆ.
ಚುನಾವಣಾ ಆಯೋಗ ಎಷ್ಟು ಮತದಾನ ನಡೆದಿದೆ ಎಂಬ ಬಗ್ಗೆ ನೀಡಿದ ಎರಡು ಸಂಖ್ಯೆಗಳ ನಡುವಿನ ಅಂತರ ಆ ಕ್ಷೇತ್ರದ ಗೆಲುವಿನ ಅಂತರಕ್ಕಿಂತ ಹೆಚ್ಚಿರುವುದನ್ನು ಗುರುತಿಸಿ ಈ ಕ್ಷೇತ್ರಗಳಲ್ಲಿ ಕಳವಾಗಿರುವ ಎಲ್ಲ ಸಾಧ್ಯತೆಗಳಿವೆ ಎಂದು ಆರೋಪಿಸಿತ್ತು. ಆ 79 ಕ್ಷೇತ್ರಗಳ ಪಟ್ಟಿಯನ್ನು ಒದಗಿಸಿತ್ತು. ಅದರಲ್ಲಿ ಕರ್ನಾಟಕದ 6 ಕ್ಷೇತ್ರಗಳ ಹೆಸರುಗಳು ಇದ್ದವು. ಅದರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರವೂ ಇತ್ತು. ಈಗ ಈ 79 ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಸಮಿತಿ ತಿಳಿಸಿದೆ.
ಸಂವಿಧಾನ ಪದ್ದತಿಗೆ ವಿರುದ್ಧವಾಗಿ ಚುನಾವಣಾ ಆಯೋಗವನ್ನು ತಾನೇ ನೇಮಿಸಿರುವ ಬಿಜೆಪಿ ಸರಕಾರ, ಅದನ್ನು ಬಳಸಿಕೊಂಡು ಪ್ರಜಾತಂತ್ರವನ್ನು ಕೊಲೆಮಾಡಲು ಹೊರಟಿದೆ. ಜನಾಕ್ರೋಶ ಬೆಳೆಯುತ್ತಿದ್ದು, ಚುನಾವಣೆಗಳಲ್ಲಿ ಸೋಲುವ ಭೀತಿ ಹೆಚ್ಚಿರುವುದರಿಂದ, ಮತಗಳನ್ನು ಅಪಹರಿಸುವ ಮತ್ತು ಕಳ್ಳ ಮತಗಳನ್ನು ಬರೆಸುವ ಮತಮಾಫಿಯಾ ಕೆಲಸಕ್ಕೆ ಕೈಹಾಕಿದೆ. ಸಾಕ್ಷ್ಯಗಳನ್ನು ಮುಂದಿಟ್ಟಾಗ ಮೌನ ವಹಿಸುವುದು ಅಪರಾಧವನ್ನು ಮುಚ್ಚಿಡುವ ತಂತ್ರವಾಗುತ್ತದೆ. ಚುನಾವಣಾ ಆಯೋಗ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಕು ಎಂದು ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ರಾಹುಲ್ ಗಾಂಧಿ ಬಿಚ್ಚಿಟ್ಟ ಸತ್ಯ ಎಂಬುದಾದರೆ ಅದನ್ನು ಚುನಾವಣಾ ಆಯೋಗ ತಡಮಾಡದೆ ಜನತೆಯ ಮುಂದಿಡಬೇಕು. ಅಥವಾ ತಾನು ಮಾಡಿದ ತಪ್ಪಿಗಾಗಿ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ, ಈ ಅಕ್ರಮದ ಕುರಿತು ತನಿಖೆಯಾಗಬೇಕು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮರು ಮತದಾನಕ್ಕೆ ಆದೇಶ ಹೊರಡಿಸಬೇಕು. ಮತದಾರರ ಪಟ್ಟಿ ಮತ್ತು ಮತದಾನ ನಡೆದ ವಿಧಾನಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲ ಡಿಜಿಟಲ್ ಡಾಟಾವನ್ನು ಬಿಡುಗಡೆ ಮಾಡಬೇಕು ಎಂದು ಎದ್ದೇಳು ಕರ್ನಾಟಕ ಇದೇ ವೇಳೆ ಆಗ್ರಹಿಸಿದೆ.
