ಮಾಜಿ ಸಚಿವ, ಬೀದರ್ ಜಿಲ್ಲೆತ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಪುತ್ರನ ವಿರುದ್ಧ ಲೈಂಗಿಕ ಕಿರುಕುಳ ಆರೋಪಿ ಕೇಳಿ ಬಂದಿದ್ದು, ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ್ ಚವ್ಹಾಣ ಅವರು ತನ್ನನ್ನ ಮದುವೆಯಾಗೋದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಔರಾದ್ನ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ, ಪೊಲೀಸರು ದೂರು ಸ್ವೀಕರಿಸಿಲ್ಲ. ಹೀಗಾಗಿ ಆಯೋಗಕ್ಕೆ ದೂರು ನೀಡಿದ್ದಾಗಿ ಯುವತಿ ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಲೈಂಗಿಕವಾಗಿಯೂ ಬಳಸಿಕೊಂಡು ಮೋಸ ಮಾಡಿದ್ದಾನೆಂದು ಯುವತಿ, ಶಾಸಕ ಪಭು ಚವ್ಹಾಣ ಪುತ್ರ ಪ್ರತೀಕ್ ಚವ್ಹಾಣ ವಿರುದ್ಧ ಆರೋಪಿಸಿದ್ದು, ಈ ಸಂಬಂಧ ನ್ಯಾಯ ಒದಗಿಸುವಂತೆ ಸಂತ್ರಸ್ತೆ ಯುವತಿ, ಪ್ರತೀಕ್ ಚವ್ಹಾಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.
ಯುವತಿ ದೂರಿನಲ್ಲೇನಿದೆ?
ಮಹಿಳಾ ಆಯೋಗಕ್ಕೆ ಪ್ರತೀಕ್ ಚವ್ಹಾಣ ವಿರುದ್ಧ ದೂರು ಸಲ್ಲಿಕೆಯಾಗಿದೆ. ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದು, ಲೈಂಗಿಕವಾಗಿಯೂ ಬಳಸಿಕೊಂಡಿದ್ದಾಗಿ ಯುವತಿ ಆರೋಪಿಸಿದ್ದಾರೆ. ಮನೆಯವರೆಲ್ಲ ಸೇರಿ 2023ರ ಡಿಸೆಂಬರ್ 25ರಂದು ನಿಶ್ಚಿತಾರ್ಥ ಮಾಡಿದ್ದರು. ಎರಡೂ ಕುಟುಂಬಸ್ಥರು ಒಪ್ಪಿ ಪ್ರತೀಕ್ ನಿವಾಸದಲ್ಲೇ ನಿಶ್ಚಿತಾರ್ಥ ಮಾಡಿದ್ದರು. ಬಳಿಕ ಪ್ರತಿಕ್ ಜೊತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿಕೊಟ್ಟಿದ್ದರು. ಅದರಂತೆ ಪ್ರತೀಕ್ 2025ರ ಮಾರ್ಚ್ 7, 24, 27, ಏಪ್ರಿಲ್ 8 ರಂದು ಮಹಾರಾಷ್ಟ್ರದ ಲಾತೂರ್ಗೆ ನನ್ನನ್ನ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ರೆ ತಪ್ಪಿಲ್ಲ ಅಂತ ಪ್ರತೀಕ್ ಒತ್ತಾಯಿಸಿದ್ರೂ, ಅದಾದ್ಮೇಲೆ ನಾನೂ ಸಹಕರಿಸಿದೆ. ಅದಾದ ಬಳಿಕ ಬೇರೆ ಸ್ಥಳಕ್ಕೆ ಹೋಗಿದ್ದ ವೇಳೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಈ ಬಗ್ಗೆ ಇದೇ ಜುಲೈ 6ರಂದು ಔರಾದ್ನ ಹೋಕ್ರಾನ್ ಠಾಣೆಗೆ ದೂರು ಕೊಡಲು ಹೋಗಿದ್ದೆವು. ಆದ್ರೆ ಅವರು ಸ್ವೀಕರಿಸಲಿಲ್ಲ. ಅವರು ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇವೆ. ಮಹಿಳಾ ಆಯೋಗ ಏನೋ ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ, ನಮಗೆ ನ್ಯಾಯ ಬೇಕು ಅಂತ ದೂರಿನಲ್ಲಿ ತಿಳಿಸಿದ್ದಾರೆ.
ಕೌಟುಂಬಿಕ ಸಮಸ್ಯೆಯಲ್ಲಿ ಕಾಣದ ಕೈಗಳ ರಾಜಕೀಯ :
ಮಹಾರಾಷ್ಟ್ರ ಮೂಲದ ಯುವತಿಯೊಬ್ಬರು ನನ್ನ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ವಿರೋಧಿಗಳ ರಾಜಕೀಯ ಷಡ್ಯಂತ್ರವಾಗಿದೆ ಎಂದು ಶಾಸಕ ಪ್ರಭು ಬಿ.ಚವ್ಹಾಣ ತಿಳಿಸಿದ್ದಾರೆ
‘ನನ್ನ ಮಗನೊಂದಿಗೆ ವರ್ಷದ ಹಿಂದೆ ನಿಶ್ಚಿತಾರ್ಥವಾಗಿರುವುದು ನಿಜ. ನಂತರ ಯುವತಿಯ ಪೋಷಕರು ಮತ್ತು ಸಮಾಜದ ಪಂಚರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧ ಮುರಿದು ಬಿದ್ದಿದೆ. ಯಾವ ಕಾರಣಕ್ಕಾಗಿ ಸಂಬಂಧ ಮುರಿದು ಬಿತ್ತು ಎನ್ನುವುದನ್ನು ಯುವತಿಯ ಭವಿಷ್ಯದ ಹಿತದೃಷ್ಟಿಯಿಂದ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದಿಲ್ಲ. ಕಾರಣಗಳು ಮತ್ತು ಸಾಕ್ಷ್ಯವನ್ನು ಈಗಾಗಲೇ ಯುವತಿಯ ಪಾಲಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼನಾಲ್ಕು ಗೋಡೆಗಳ ಮಧ್ಯ ಬಗೆಹರಿಯುವಂತಹ, ಬಗೆಹರಿಯಬೇಕಿದ್ದ ಕೌಟುಂಬಿಕ ಸಮಸ್ಯೆಯನ್ನು ವ್ಯವಸ್ಥಿತವಾಗಿ ಷಡ್ಯಂತ್ರದ ರೂಪ ನೀಡಿ ಆ ಕುಟುಂಬವನ್ನು ಬಳಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಮೂರನೇಯವರು ಈ ಕುಟುಂಬವನ್ನು ಬಳಕೆ ಮಾಡಿಕೊಂಡು ಅವರ ಕುಟುಂಬಕ್ಕೆ ಮಸಿ ಬಳಿಯುವುದರ ಮೂಲಕ ನಮ್ಮ ಕುಟುಂಬದ ಗೌರವಕ್ಕೆ ನನ್ನ ರಾಜಕೀಯ ಜೀವನಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದ್ದಾರೆʼ ಎಂದು ದೂರಿದ್ದಾರೆ.
ʼನನ್ನನ್ನು ತೇಜೋವಧೆ ಮಾಡಬೇಕು ಮತ್ತು ಮಾನಸಿಕವಾಗಿ ಕುಗ್ಗಿಸಬೇಕೆಂಬ ಉದ್ದೇಶದಿಂದ ನನ್ನ ವಿರೋಧಿ ತಂಡವು ಸುಮಾರು 10 ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದೆ. ಜುಲೈ 6ರಂದು ಕ್ಷೇತ್ರದ ಮಹಾಜನತೆ ನನ್ನ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದನ್ನು ಅರಿತ ವಿರೋಧಿಗಳು ಯುವತಿಯ ಮನೆಗೆ ಹೋಗಿ ಅವರೆಲ್ಲ ನನ್ನ ಮನೆಗೆ ಬಂದು ಗಲಾಟೆ ಮಾಡುವಂತೆ ಮತ್ತು ದೂರುಗಳನ್ನು ನೀಡುವಂತೆ ಪ್ರಚೋದನೆ ನೀಡಿದ್ದರುʼ ಎಂದಿದ್ದಾರೆ.
ʼರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ದುರುದ್ದೇಶದಿಂದ ನನ್ನ ಕೌಟುಂಬಿಕ ವಿಚಾರಗಳನ್ನು ಸಾರ್ವಜನಿಕ ಗೊಳಿಸುವ ಪ್ರಯತ್ನ ಪದೆ ಪದೇ ಮಾಡುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದ್ದರು. ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಡ್ಡಿಪಡಿಸಲು ಹರಸಾಹಸ ಮಾಡಿದ್ದರು. ಈಗ ಮಹಿಳಾ ಆಯೋಗಕ್ಕೆ ದೂರು ನೀಡುವ ಮೂಲಕ ಮತ್ತೊಮ್ಮೆ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದಾರೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದೇ ಈ ರೀತಿಯ ಷಡ್ಯಂತ್ರ ನಡೆಸುತ್ತಿದ್ದಾರೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೀದರ್ | ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಘಟನೆ : ಆಸ್ಪತ್ರೆಗೆ ಸಚಿವದ್ವಯರ ದಿಡೀರ್ ಭೇಟಿ
ʼಅದೆಷ್ಟೋ ಹೆಣ್ಣು ಮಕ್ಕಳ ಮದುವೆಯನ್ನು ಮುಂದೆ ನಿಂತು ಮಾಡುವ ನಾನು ಯಾರೊಬ್ಬರ ಕೇಡು ಬಯಸುವುದಿಲ್ಲ. ಈ ಯುವತಿ ಕೂಡ ನನಗೆ ಮಗಳಿದ್ದಂತೆ. ನನ್ನ ಬಗ್ಗೆ ಕ್ಷೇತ್ರ ಮತ್ತು ಜಿಲ್ಲೆಯ ಜನತೆಗೆ ಸರಿಯಾಗಿ ಗೊತ್ತಿದೆ. ಮಹಿಳಾ ಆಯೋಗದಿಂದ ನೋಟಿಸ್ ಬಂದಲ್ಲಿ ಅದಕ್ಕೆ ಸಾಕ್ಷಿ ಸಮೇತವಾಗಿ ಮಾಹಿತಿಯನ್ನು ಆಯೋಗಕ್ಕೆ ಒದಗಿಸಲಾಗುತ್ತದೆ. ಯುವತಿಯ ಮತ್ತು ಅವರ ಹಿಂದಿರುವ ಕಾಣದ ಕೈಗಳ ಎಲ್ಲ ಆರೋಪಗಳಿಗೂ ಕಾನೂನಾತ್ಮಕವಾಗಿಯೇ ಉತ್ತರ ನೀಡಲಾಗುತ್ತದೆʼ ಎಂದು ಸ್ಪಷ್ಟಪಡಿಸಿದ್ದಾರೆ.