ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಸಾವಿನ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು, ‘2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ’ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಆರೋಗ್ಯ ಸೇವೆಗಳ ನಿರ್ದೇಶನಾಲಯ(DGHS) ಪ್ರಕಟಣೆ ಹೊರಡಿಸಿದೆ. “ನಿರ್ದೇಶನವು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮಕ್ಕಳಿಗೆ ತೀರಾ ಅಗತ್ಯವಿದ್ದರೆ ಮಾತ್ರ ಕೆಮ್ಮಿನ ಸಿರಪ್ ನೀಡಬೇಕು. ಇಲ್ಲದಿದ್ದಲ್ಲಿ, ಕೆಮ್ಮಿನ ಸಿರಪ್ ನೀಡುವುದನ್ನು ‘ಅವಾಯ್ಡ್’ ಮಾಡಬೇಕು” ಎಂದು ಸೂಚಿಸಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕೆಮ್ಮಿನ ಸಿರಪ್ ಸೇವಿಸಿ 9 ಮಕ್ಕಳ ಸಾವನ್ನಪ್ಪಿದ್ದಾರೆ. ಅಂತೆಯೇ, ರಾಜಸ್ಥಾನದ ಸಿಕಾರ್ನಲ್ಲಿ ಇದೇ ರೀತಿ ಇಬ್ಬರು ಮಕ್ಕಳು ಸಾವಪ್ಪಿದ ಘಟನೆಗಳು ವರದಿಯಾಗಿವೆ.
ಇದು ತೀವ್ರ ಕಳವಳ ಉಂಟುಮಾಡಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆದಾಗ್ಯೂ, ಮಧ್ಯಪ್ರದೇಶ ಮತ್ತು ನೆರೆಯ ರಾಜಸ್ಥಾನದ ಆರೋಗ್ಯ ಅಧಿಕಾರಿಗಳು, ಇದಕ್ಕೆ ಕಲುಷಿತ ಕೆಮ್ಮಿನ ಸಿರಪ್ಗಳ ಸೇವನೆ ಕಾರಣ ಎಂದು ಶಂಕಿಸಿದ್ದಾರೆ.
“ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಿರಪ್ ನೀಡುವ ಅಗತ್ಯ ಇಲ್ಲ. ತೀರಾ ಅಗತ್ಯವಿದ್ದಾಗ ಮಾತ್ರ ಸೂಕ್ತ ಪ್ರಮಾಣದಲ್ಲಿ ಅತ್ಯಂತ ಕಡಿಮೆ ಅವಧಿಗೆ ಸಿರಪ್ ನೀಡಬೇಕು” ಎಂದು DGHS ಸೂಚಿಸಿದೆ.