ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ ಗೇಟ್ವರೆಗಿನ ಚತುಷ್ಫಥ ರಸ್ತೆ ಕಾಮಗಾರಿ ಪರಿಶೀಲಿಸಿ ಅಭಿವೃದ್ಧಿಯಿಂದ ದಕ್ಷಿಣ ಭಾಗದಿಂದ ನಗರ ಪ್ರವೇಶಕ್ಕೆ ಸಂಚಾರ ಸುಗಮವಾಗಲಿದೆ ಎಂದು ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ವೇಳೆ ಜೆಪ್ಪು ರೈಲ್ವೇ ಅಂಡರ್ ಪಾಸ್ ಪರಿಶೀಲನೆ ಬಳಿಕ ಮಾತನಾಡಿದರು.
ಜಲಾಭಿಮುಖ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ವಾಟರ್ ಫ್ರಂಟ್ ರಸ್ತೆ ಕಾಮಗಾರಿಯನ್ನು ಮೋರ್ಗನ್ ಗೇಟ್, ಮುಳಿಹಿತ್ಲು ಮತ್ತು ಬೋಳಾರ ಲೀವೆಲ್ಗೆ ಖುದ್ದು ತೆರಳಿ ವೀಕ್ಷಿಸಿದರು. ವಾಟರ್ ಫ್ರಂಟ್ ರಸ್ತೆ ನಿರ್ಮಾಣಗೊಳ್ಳಲಿರುವ ಪ್ರದೇಶದಲ್ಲಿ ಸುಮಾರು ಒಂದು ಕಿ.ಮೀ. ನಷ್ಟು ನಡೆದುಕೊಂಡು ಹೋದ ಸಚಿವರು, ಸ್ಥಳೀಯರೊಂದಿಗೂ ಮಾತನಾಡಿ, ಅಹವಾಲು ಆಲಿಸಿದರು. ನದಿ ತೀರದಲ್ಲಿ ವೀನುಗಾರಿಕೆ ಮಾಡುತ್ತಾ ನೆಲೆಸಿರುವ ಶಿಳ್ಳೆ ಖ್ಯಾತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಬಳಿಕ ಮಾತನಾಡಿದ ಸಚಿವರು, ಕೆಲವೆಡೆ ಈ ಕಾಮಗಾರಿಗೆ ಸಮಸ್ಯೆಗಳು ಉಂಟಾಗಿವೆ. ಕಾಮಗಾರಿ ಟೆಂಡರ್ ಅಂತಿಮಗೊಳ್ಳುವ ಮೊದಲೇ ಇದನ್ನು ಬಗೆಹರಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಜಮೀನು ಬಳಕೆದಾರರೊಂದಿಗೆ ಮಾತುಕತೆ ನಡೆಸಿ, ಯೋಜನೆಗೆ ಸಹಕರಿಸಲು ಕೋರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಯೋಜನೆಗೆ ಸಂಪರ್ಕ ರಸ್ತೆ, ಪಾರ್ಕಿಂಗ್ ಮತ್ತಿತರ ಕಾಮಗಾರಿಗಳಿಗೂ ಆದ್ಯತೆ ನೀಡಲು ದಿನೇಶ್ ಗುಂಡೂರಾವ್ ಸೂಚಿಸಿದರು.
ವಾಟರ್ ಫ್ರಂಟ್ ಕಾಮಗಾರಿಗೆ ಬಂದರು ಇಲಾಖೆ ಈಗಾಗಲೇ ನಿರಾಕ್ಷೇಪಣೆ ಪತ್ರ ನೀಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸಚಿವರಿಗೆ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಸ್ಸಿ/ಎಸ್ಟಿ ವಿದ್ಯಾರ್ಥಿನಿಯರಿಗೆ ಸೌಲಭ್ಯ ಕಲ್ಪಿಸಲು ಮಹಿಳಾ ವಿವಿ ವಿಫಲ; ಡಿವಿಪಿ ಆರೋಪ
ಈ ಸಂದರ್ಭದಲ್ಲಿ ಶಾಸಕರುಗಳಾದ ಮಂಜುನಾಥ ಭಂಢಾರಿ, ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್, ಸ್ಮಾರ್ಟ್ ಸಿಟಿ ಎಂಡಿ ರಾಜು, ಮಾಜಿ ಶಾಸಕರುಗಳಾದ ಜೆ ಆರ್ ಲೋಬೋ, ಐವನ್ ಡಿಸೋಜ, ಮಹಾನಗರಪಾಲಿಕೆ ಸದಸ್ಯ ಪ್ರವೀಣ್ ಕುಮಾರ್ ಆಳ್ವ, ಎ ಸಿ ವಿನಯರಾಜ್ ಸೇರಿದಂತೆ ಇತರರು ಇದ್ದರು.