ತೆಲಂಗಾಣ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ 64 ಶಾಸಕರಲ್ಲಿ ಒಮ್ಮತ ಮೂಡಿಲ್ಲ. ಆರಂಭದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಎ ರೇವಂತ್ ರೆಡ್ಡಿ, ಮುಖ್ಯಮಂತ್ರಿಯಾಗಿ ಹಾಗೂ ಕೆಲ ಸಚಿವರು ಪ್ರಮಾಣ ವಚನ ಸ್ವೀಕರಿಸಲು ರಾಜಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಆದರೆ, ಹಿರಿಯ ನಾಯಕರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದು, ಪಕ್ಷವು ಕಾರ್ಯಕ್ರಮವನ್ನು ಮುಂದೂಡಲು ಯೋಜಿಸಿದೆ. ಮಲ್ಲು ಭಟ್ಟಿ ವಿಕ್ರಮಾರ್ಕ, ಉತ್ತಮ್ ಕುಮಾರ್ ರೆಡ್ಡಿ, ಶ್ರೀಧರ್ ಬಾಬು, ಮತ್ತು ಕೋಮಟಿರೆಡ್ಡಿ ಸಹೋದರರು ರೇವಂತ್ ಸಿಎಂ ಆಗುವುದನ್ನು ವಿರೋಧಿಸಿದರು ಎಂದು ಕಾಂಗ್ರೆಸ್ನ ಮುಖಂಡರೊಬ್ಬರು ಗೌಪ್ಯವಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ವೀಕ್ಷಕರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರ ರಚನೆಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ದೆಹಲಿಯಲ್ಲಿ ಚರ್ಚೆ ನಡೆಸಿ ಇಂದು (ಡಿ.5) ಸಂಜೆಯೊಳಗೆ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? 4 ರಾಜ್ಯಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ಗೆ ಹೆಚ್ಚು ಮತ: ‘ಕೈ’ ಪಕ್ಷದ ಮೇಲೆ ಜನರಿಗೆ ಹೆಚ್ಚು ನಂಬಿಕೆ
ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್ರಾವ್ ಠಾಕ್ರೆ ಸೇರಿದಂತೆ ಎಐಸಿಸಿ ವೀಕ್ಷಕರು ಪಕ್ಷದ ಹೈಕಮಾಂಡ್ನೊಂದಿಗೆ ಹೆಚ್ಚಿನ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಸುಸೂತ್ರವಾಗಿ ಸರ್ಕಾರ ರಚನೆ ಮಾಡಲು ವೀಕ್ಷಕರನ್ನು ನಿಯೋಜಿಸಲಾಗಿತ್ತು.
ಸಂಭಾವ್ಯ ಸಿಎಂ ಅಭ್ಯರ್ಥಿ ರೇವಂತ್ ರೆಡ್ಡಿ ಕೆಲವು ಹಿರಿಯ ನಾಯಕರಿಂದ ವಿರೋಧ ಎದುರಿಸಿದ್ದು, ಆಯ್ಕೆ ಪ್ರಕ್ರಿಯೆಯನ್ನು ದೆಹಲಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಸಿಎಲ್ಪಿ ಸಭೆಯಲ್ಲಿ ಸರ್ವಾನುಮತದ ನಿರ್ಣಯದ ನಂತರ, ಸಿಎಂ ಆಯ್ಕೆಗೆ ಖರ್ಗೆಯವರಿಗೆ ಅಧಿಕಾರ ನೀಡಿ, 64 ಶಾಸಕರ ವೈಯಕ್ತಿಕ ಅಭಿಪ್ರಾಯಗಳನ್ನು ಹೈದರಾಬಾದಿನ ಉಪನಗರವಾದ ಗಚಿಬೌಲಿಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಸಂಗ್ರಹಿಸಲಾಯಿತು.
ಕೆಲವು ಶಾಸಕರು ಭಟ್ಟಿ ವಿಕ್ರಮಾರ್ಕ, ಉತ್ತಮ್ ಕುಮಾರ್ ರೆಡ್ಡಿ ಮತ್ತು ಶ್ರೀಧರ್ ಬಾಬು ಅವರನ್ನು ಸಂಭಾವ್ಯ ಸಿಎಂ ಎಂದು ಸೂಚಿಸಿದರೆ, ಬಹುತೇಕರು ರೇವಂತ್ ಅವರನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ರೇವಂತ್ ರೆಡ್ಡಿ ಅವರನ್ನು ಸಿಎಂ ಆಗಿ ಅಂತಿಮಗೊಳಿಸಿದೆ ಎಂಬ ಆರಂಭಿಕ ಊಹಾಪೋಹವನ್ನು ಬಹುತೇಕ ಹಿರಿಯ ನಾಯಕರು ನಿರಾಕರಿಸಿದ್ದಾರೆ. ಕಾಂಗ್ರೆಸ್ನ ದಲಿತ ಸಿಎಂ ಮುಖ ಎಂದು ಹೇಳಲಾಗುತ್ತಿರುವ ಭಟ್ಟಿ ವಿಕ್ರಮಾರ್ಕ, ಡಿಸಿಎಂ ಹುದ್ದೆ ಹೊಂದುವುದಕ್ಕೆ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಆ ಖಾತೆ ನೀಡಿದರೆ ಪ್ರಮುಖ ಖಾತೆಯೊಂದಿಗೆ ಏಕೈಕ ಉಪ ಮುಖ್ಯಮಂತ್ರಿಯಾಗಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸ್ಪೀಕರ್, ಉಪಸಭಾಪತಿ ಮತ್ತು ತೆಲಂಗಾಣ ಪಿಸಿಸಿ ಅಧ್ಯಕ್ಷರ ಬಗ್ಗೆಯೂ ಒಮ್ಮತಕ್ಕೆ ಬಂದಿಲ್ಲ. ರೇವಂತ್ ಸಿಎಲ್ಪಿ ನಾಯಕರಾಗಿ ಆಯ್ಕೆಯಾದರೆ ಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಿರಿಯ ನಾಯಕರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.