ಅಮೆರಿಕಾದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರಿಗೆ ಸೈಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ ₹30 ಲಕ್ಷ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನ್ಯಾಯ ಕೊಡಿಸುವಂತೆ ಅಮೆರಿಕದಿಂದ ವಂಚನೆಗೊಳಗಾದ ಬೆಂಗಳೂರು ಮೂಲದ ಅನಿವಾಸಿ ಭಾರತೀಯ (ಎನ್ಆರ್ಐ) ರಾಘವೇಂದ್ರ ಪ್ರಸಾದ್ ಎಂಬುವವರು ಟ್ವೀಟ್ (ಎಕ್ಸ್) ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ರಾಘವೇಂದ್ರ ಪ್ರಸಾದ್ ಎಂಬುವವರು ಅಮೆರಿಕಾದಲ್ಲಿ ಕಳೆದ ಹಲವು ವರ್ಷಗಳಿಂದ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪೋಷಕರು ಹಾಗೂ ಸಂಬಂಧಿಕರೆಲ್ಲರೂ ಬೆಂಗಳೂರಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟುವ ಸಲುವಾಗಿ ನಿವೇಶನ ಖರೀದಿಗೆ ರಾಘವೇಂದ್ರ ಅವರು ಮುಂದಾಗಿದ್ದರು.
ಕೆಂಗೇರಿಯಲ್ಲಿ ರಾಯಲ್ ನಿಸರ್ಗ ಲೇಔಟ್ನಲ್ಲಿ ಸೈಟ್ಗಳಿವೆ ಎಂದು ರಿಯಲ್ ಎಸ್ಟೇಟ್ ಕಂಪೆನಿಯು ಜಾಹೀರಾತು ನೀಡಿತ್ತು. ಈ ಬಗ್ಗೆ ರಾಘವೇಂದ್ರ ಪ್ರಸಾದ್ ಅವರು ಕಂಪನಿಯೊಂದಿಗೆ ವಿಚಾರಿಸಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ 2022ರ ಡಿಸೆಂಬರ್ನಲ್ಲಿ 30 ಲಕ್ಷಕ್ಕೆ ಸೈಟ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
@bdayananda @CPBlr
As an NRI based in the US, I’ve been swindled 30 Lakhs by Virtue Infra Builders Pvt Ltd, JP Nagar. They sold my plot to another party, refusing to refund me. It’s been 6 agonizing months of running around. 🙏 Seeking your support to rectify this injustice. pic.twitter.com/JBgo0EhOs6— Raghavendra Prasad (@Raghavendr5117) December 6, 2023
“ಜಾಹೀರಾತು ಮುಖಾಂತರ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಜೆಪಿ ನಗರದ ರಿಯಲ್ ಎಸ್ಟೇಟ್ ಕಂಪನಿ ಪರಿಚಯಿಸಿಕೊಂಡಿದೆ. ಬಳಿಕ ಸೈಟ್ ನೀಡುವುದಾಗಿ ಖಾಸಗಿ ಕಂಪನಿ ಮಾಲೀಕರಾದ ಅರವಿಂದ್ ಹಾಗೂ ಹರಿಕೃಷ್ಣ ಅವರಿಗೆ ಹಂತಹಂತವಾಗಿ ₹30 ಲಕ್ಷ ನೀಡಿದ್ದೇನೆ. ನಂತರ ಹೂಡಿಕೆ ಮಾಡಿಸಿಕೊಂಡು ಸೈಟ್ ಬುಕ್ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿ ಸೈಟ್ ನೋಂದಣಿ ಮಾಡಿಸದೆ ತಿಂಗಳುಗಟ್ಟಲೇ ಅಲೆದಾಡಿಸಿತ್ತು. ಈ ಬಗ್ಗೆ ನಾನು ಹಲವು ಬಾರಿ ಕೇಳಿದ್ದೇನೆ. ಕುಟುಂಬಸ್ಥರು ಸಹ ವಿಚಾರಿಸಿದರೂ ಇಲ್ಲಿಯವರೆಗೂ ಏನೂ ಪ್ರಯೋಜನವಾಗಿಲ್ಲ. ಹಣ ಜಮೆಯಾದ ಬಳಿಕ ಬುಕ್ ಮಾಡಿದ್ದ ಸೈಟ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ” ಎಂದು ಟ್ವೀಟ್ ಮೂಲಕ ದೂರು ನೀಡಿದ್ದಾರೆ.
“ಬಳಿಕ ಕಂಪನಿ ಬೇರೆ ಸೈಟ್ ನೀಡುವುದಾಗಿ ತಿಳಿಸಿತ್ತು. ಅಂತಿಮವಾಗಿ ಸೈಟ್ ಬೇಡ ಎಂದು ನಿರ್ಧರಿಸಿದೆ. ಕಂಪನಿಯವರಿಗೆ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡುವಂತೆ ಹೇಳಿದೆ. ಆದರೆ, ಹಣವನ್ನು ಇಲ್ಲಿಯವರೆಗೂ ರಿಫಂಡ್ ಮಾಡಿಲ್ಲ. ಆರು ತಿಂಗಳಿಂದ ಹಣ ಕೊಡದೆ ವಂಚನೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಈ ಬಗ್ಗೆ ಜೆ.ಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ಕಂಪನಿ ಹಲವರಿಗೆ ವಂಚಿಸಿದೆ. ಈ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹೀಗಾಗಿ, ನಗರ ಪೊಲೀಸ್ ಆಯುಕ್ತರು ನ್ಯಾಯ ದೊರಕಿಸಿಕೊಡಬೇಕು” ಎಂದು ರಾಘವೇಂದ್ರ ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 15 ನಿಲ್ದಾಣಗಳ ಆಧುನೀಕರಣ: ಯೋಗೇಶ್ ಮೋಹನ್
ಕೆರೆಯಲ್ಲಿ ಖಾಸಗಿ ಉದ್ಯೋಗಿ ಶವ ಪತ್ತೆ
ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಶವ ಬುಧವಾರ ಸಂಜೆ ಬೆಂಗಳೂರಿನ ತಲಘಟ್ಟಪುರದ ಕೆರೆಯೊಂದರಲ್ಲಿ ಪತ್ತೆಯಾಗಿದೆ.
ಮೃತ ದೇಹವನ್ನು ಶರತ್ (30) ಎಂದು ಗುರುತಿಸಲಾಗಿದೆ.
ಬಾರ್ವೊಂದರಲ್ಲಿ ಮಂಗಳವಾರ ತಡರಾತ್ರಿ ನಡೆದಿದ್ದ ಗಲಾಟೆ ಬಳಿಕ ಶರತ್ ಹತ್ಯೆಯಾಗಿದೆ. ಹತ್ಯೆ ಬಳಿಕ ಮೃತದೇಹವನ್ನು ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.