ಕರ್ನಾಟಕದ ಜನತೆಯನ್ನು ತಲ್ಲಣ ಗೊಳಿಸಿದ ಭ್ರೂಣ ಹತ್ಯೆಯ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಎಐಎಮ್ಎಸ್ಎಸ್ ಮಹಿಳಾ ಸಂಘಟನೆ ಒತ್ತಾಯಿಸಿದೆ. ವಿಜಯಪುರ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ದೇಶಕ್ಕೆ ಸ್ವಾತಂತ್ರ್ಯಬಂದು 76ವರ್ಷಗಳು ಕಳೆದರೂ, ಸಮಾಜದಲ್ಲಿ ಮೌಢ್ಯತೆ ನೆಲೆಸಿದೆ, ಇದಕ್ಕೆ ಸಾಕ್ಷಿಎಂಬಂತೆ, ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ 900 ಹೆಣ್ಣು ಭ್ರೂಣ ಹತ್ಯೆ ಮಾಡಿರುವಂತ ಸಮಾಜಘಾತುಕ ಕೆಲಸವು ನಡೆದಿದೆ. ಈ ಪ್ರಕರಣದ ಹಿಂದೆ ದೊಡ್ಡ ಜಾಲವಿರುವ ಶಂಕೆ ಇದೆ. ಈ ಘಟನೆಗೆ ಸಂಬಂಧಿಸಿದಂತೆ ವೈದ್ಯರು, ನರ್ಸ್, ಸೇರಿದಂತೆ ಹತ್ತುಜನ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಗ್ಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಸಲು ಸರ್ಕಾರವು ಸಿಐಡಿ ಗೆ ವಹಿಸಿರುವುದು ಶ್ಲಾಘನೀಯ. ಆದರೆ, ಆದಷ್ಟು ತ್ವರಿತವಾಗಿ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಬೇಕು.
ಲಿಂಗ ಪತ್ತೆ ಮತ್ತು ಸ್ತ್ರೀ ಭ್ರೂಣ ಹತ್ಯೆಯನ್ನು ನಿಷೇಧಿಸುವಂತ ಕಾನೂನು ಇದ್ದರೂ, ಇಂತಹ ಪ್ರಕರಣ ನಡೆದಿರುವುದು ಆಳುವ ವರ್ಗದ ನಿರ್ಲಕ್ಷ್ಯಧೋರಣೆ ಮತ್ತು ಜನಗಳ ಮನಸ್ಥಿತಿ ಬದಲಾಗದೆ ಇರುವುದು ಹಾಗೂ ನೈತಿಕತೆಯು ಕುಸಿಯುತ್ತಿರುವುದು ಕಾರಣವಾಗಿದೆ. ಹೆಣ್ಣು ಮಕ್ಕಳಾದರೆ ಖರ್ಚು ಜಾಸ್ತಿ, ಗಂಡು ಮಕ್ಕಳು ತಮ್ಮನ್ನು ದುಡಿದು ಸಾಕುತ್ತಾರೆ ಎಂಬ ಹಳೆಯ ವಿಚಾರ ಪೋಷಕರಲ್ಲಿ ಇಂದಿಗೂ ಇದೆ. ಹೆಣ್ಣುಗಂಡು ಇಬ್ಬರು ಸಮಾನರು ಎಂದು ಜಾಗೃತಿ ಮೂಡಿಸುವ ಕೆಲಸ ಇಂದಿನ ತುರ್ತುಅವಶ್ಯಕತೆ ಆಗಿದೆ. ಅಲ್ಲದೆ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾನೂನಿನ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು.
ಈ ಪ್ರಕರಣವು ಬಯಲಾದ ನಂತರ ಮತ್ತೊಂದು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಒಂದು ತಂಡವು 60 ನವಜಾತ ಶಿಶುಗಳನ್ನು ಮಕ್ಕಳಿಲ್ಲದ ಪೋಷಕರಿಗೆ ಎಂಟರಿಂದ ಹತ್ತು ಲಕ್ಷಕ್ಕೆ ಮಾರಾಟ ಮಾಡಿರುವುದು ಮಾತ್ರವಲ್ಲ, ಬಡ ಹೆಣ್ಣು ಮಕ್ಕಳಿಗೆ ಎರಡು ಲಕ್ಷವನ್ನುಕೊಟ್ಟು ಬಾಡಿಗೆ ತಾಯಿಂದರಾಗಿ ಗರ್ಭಧರಿಸುವಂತೆ ಮಾಡಿ ಜನಿಸಿದ ಶಿಶುವನ್ನು ಮಾರಾಟ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ.
ಆದರೆ, ಇಂತಹ ಘಟನೆಗಳು ಇಡಿ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ನಶಿಸಿ, ಮಾನವೀಯತೆಯೇ ನಾಶವಾಗುತ್ತಿದ್ದೆ. ಈ ಪರಿಸ್ಥಿತಿಯಲ್ಲಿ ಇಂತಹ ಅಪರಾಧಗಳ ವಿರುದ್ಧ ಕಠಿಣವಾದ ಕಾನೂನನ್ನು ರೂಪಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿ, ಯುವಜನರಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುವಂತ ನೀತಿಗಳನ್ನು ಸರ್ಕಾರರೂಪಿಸಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.