ರಾಯಚೂರು ನಗರದ ಎಸ್ಎನ್ಟಿ ಮತ್ತು ಮಿನಿ ಟಾಕೀಸ್ ಕೆಡವಿ ಸರ್ಕಾರಿ ಕೋಟೆ ಕಂದಕದ ಸ್ಥಳವನ್ನು ಅತಿಕ್ರಮಿಸಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತಡೆಯಬೇಕು ಎಂದು ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ಸರ್ಕಾರ ವಸ್ತು ಸಂಗ್ರಹಾಲಯ, ರಾಯಚೂರು ನಗರಸಭೆ ಪೌರಾಯಕ್ತರಿಗೆ ಪತ್ರ ಬರೆದಿದೆ.
ನಗರದ ಎಸ್ಎನ್ಟಿ ಮತ್ತು ಮಿನಿ ಟಾಕೀಸ್ ತೆರವುಗೊಳಿಸಿ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಹಿಂಬದಿಯಲ್ಲಿರುವ ಐತಿಹಾಸಿಕ ಕೋಟೆ ಕಂದಕದ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿದೆ.
ಯಾವುದೇ ಸೆಟ್ಬ್ಯಾಕ್ ಬಿಡದೆ ನಕ್ಷೆಯ ವಿರುದ್ಧವಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಬಹುಮಹಡಿ ಕಟ್ಟಡ ನಿರ್ಮಾಣ ತಡೆದು ಅತಿಕ್ರಮಿಸಿದ ಸ್ಥಳವನ್ನು ಪರಿಶೀಲನೆ ಮಾಡಿ ತೆರವುಗೊಳಿಸಬೇಕು ಎಂದು ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದಿಂದ ದೂರು ನೀಡಿದ್ದಾರೆ.
ರಾಜ್ಯ ಸಂರಕ್ಷಿತ ನಗರದ ಕೋಟೆ ಬಾಗಿಲು ನವರಂಗ ದರ್ವಾಜಾ ಸ್ಮಾರಕದಿಂದ ನೈರುತ್ಯಕ್ಕೆ 209.49 ಮೀಟರ್ ಅಂತರದಲ್ಲಿದ್ದು, ಸ್ಮಾರಕದ ನಿಯಂತ್ರಣ ಪ್ರದೇಶದಲ್ಲಿ ಬರುತ್ತದೆ. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳ ಅವಶೇಷ ಕಾಯ್ದೆ 1961 ಮತ್ತು ನಿಯಮ 1965ರ ಪ್ರಕಾರ ಸಂರಕ್ಷಿತ ಸ್ಮಾರಕ ಪ್ರದೇಶದ ಯಾವುದೇ ದಿಕ್ಕಿನಿಂದ 100 ಮೀಟರ್ ನಿಷೇಧಿತ ಪ್ರದೇಶವಾಗಿದ್ದು, ಯಾವುದೇ ಕಟ್ಟಡ ನಿರ್ಮಾಣ, ಗಣಿಗಾರಿಕೆ ಇತರೆ ಚಟುವಟಿಕೆಗಳನ್ನು ನಡೆಸಲು ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮೂಲಭೂತ ಸೌಲಭ್ಯ ವಂಚಿತ ಸರ್ಕಾರಿ ಪ್ರೌಢಶಾಲೆ, ಪರಿಹಾರಕ್ಕೆ ಮಕ್ಕಳ ಆಗ್ರಹ
“ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕ ಯೋಜನೆ ಕಾಮಗಾರಿಯನ್ನು ಒಳಗೊಂಡಂತೆ ಯಾವುದೇ ಕಾಮಗಾರಿ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. 200 ಮೀಟರ್ ನಿಷೇಧಿತ ಪ್ರದೇಶವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಮುನ್ನ ಆಯುಕ್ತರ ಪೂರ್ವಾನುಮತಿ ಪಡೆಯಬೇಕು. ಕೂಡಲೇ ಪರಿಶೀಲನೆ ಮಾಡಿ ಕ್ರಮ ವಹಿಸಬೇಕು” ಎಂದು ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ವರದಿ : ಹಫೀಜುಲ್ಲ