ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ ಕಾರಣ ವಿಜಯಪುರ ಜಿಲ್ಲೆಯ ಹೊಲೇರಹಳ್ಳಿ ಗ್ರಾಮದ ಕುಟುಂಬವೊಂದು, ಒಂದು ವರ್ಷದಿಂದ ತಾತ್ಕಾಲಿಕ ಶೆಡ್ನಲ್ಲಿ ವಾಸ ಮಾಡುತ್ತಿದ್ದು, ಸೂರಿಗಾಗಿ ಪಂಚಾಯಿತಿಗೆ ಆಗ್ರಹಿಸುತ್ತಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಹೊಲೇರಹಳ್ಳಿ ಗ್ರಾಮದ ಪದ್ಮಮ್ಮ ಅವರು, ಪಿಎಂಎಜಿವೈ ಯೋಜನೆ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಆಯ್ಕೆ ಪಟ್ಟಿಯನ್ನು ಪಂಚಾಯಿತಿಯಲ್ಲಿ ಅನುಮೋದನೆ ಮಾಡಿ, ತಾಲೂಕು ಪಂಚಾಯಿತಿಗೂ ಕಳುಹಿಸಿ ವರ್ಷ ಕಳೆದಿದೆ. ಆದರೆ, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ.
ಒಂದು ವರ್ಷದಿಂದ ತಾತ್ಕಾಲಿಕ ಶೆಡ್ನಲ್ಲಿ ನಾಲ್ಕು ಮಂದಿ ವಾಸಿಸುತ್ತಿದ್ದೇವೆ. ಮಳೆ, ಗಾಳಿ ಬಂದರೆ ಇಲ್ಲಿ ಇರುವುದು ಕಷ್ಟವಾಗಿದೆ. ಮಳೆ ನೀರು ಶೆಡ್ಗೆ ನುಗ್ಗುತ್ತದೆ. ಈಗ ಚಳಿಗಾಲ, ಶೀಟ್ಗಳಲ್ಲೇ ಗೋಡೆ ನಿರ್ಮಾಣ ಮಾಡಿಕೊಂಡು ಮೇಲೆಯೂ ಶೀಟ್ ಹೊದಿಕೆ ಹಾಕಲಾಗಿದೆ. ಸಾಲ ಮಾಡಿ ಪಾಯ ಹಾಕಿದ್ದೇವೆ. ಪಂಚಾಯಿತಿ ಕಡೆಯಿಂದ ಯಾವುದೇ ಭರವಸೆ ಸಿಗುತ್ತಿಲ್ಲ ಎನ್ನುತ್ತಾರೆ ಗೃಹಿಣಿ ಪದ್ಮಮ್ಮ.
ಪಿಎಂಎಜಿವೈ ಯೋಜನೆಯಡಿ ತಾಲೂಕಿನಲ್ಲಿ 280 ಮನೆಗಳು ಆಯ್ಕೆಯಾಗಿವೆ. ಎಲ್ಲ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 47 ಮನೆಗಳು ಪಾಯ ಹಂತದಲ್ಲಿವೆ. 25 ಮನೆಗಳು ಗೋಡೆ ಹಂತದಲ್ಲಿವೆ. 33 ಮನೆಗಳು ಮೋಲ್ಡ್ ಆಗಿವೆ. ಪದ್ಮಮ್ಮ ಎಂಬ ಫಲಾನುಭವಿ ಯೋಜನೆಗೆ ಆಯ್ಕೆಯಾಗಿಲ್ಲ. ನೆಲದ ಮಟ್ಟದಲ್ಲಿ ಜಿಪಿಎಸ್ ಮಾಡಬೇಕಾಗಿತ್ತು. ಪಂಚಾಯಿತಿಯವರು ಮಾಡಿಲ್ಲದ ಕಾರಣ ಆಯ್ಕೆಯಾಗಿಲ್ಲ. ಈ ವರ್ಷದಲ್ಲಿ ನೀಡುವ ಗುರಿಯಲ್ಲಿ ಸೇರಿಸಿ, ಜಿಪಿಎಸ್ ಮಾಡಿದರೆ ಆಯ್ಕೆಯಾಗುತ್ತಾರೆ ಎನ್ನುತ್ತಾರೆ ತಾಲೂಕು ಹೌಸಿಂಗ್ ನೋಡಲ್ ಅಧಿಕಾರಿ ಚಂದ್ರಪ್ಪ.
ಪಿಎಂಎಜಿವೈ ಯೋಜನೆಯಡಿ ಪದ್ಮಮ್ಮ ಅವರನ್ನು ಆಯ್ಕೆ ಮಾಡಿ, ಫಲಾನುಭವಿಗಳ ಪಟ್ಟಿ ಅನುಮೋದನೆಗೆ ಆಗಸ್ಟ್ ತಿಂಗಳಿನಲ್ಲಿ ತಾಲ್ಲೂಕು ಪಂಚಾಯಿತಿಗೆ ಕಳುಹಿಸಲಾಗಿದೆ. ಇದುವರೆಗೂ ಅನುಮೋದನೆ ಆಗಿಲ್ಲ. ಅನುಮೋದನೆಯಾಗಿ ಬಂದ ನಂತರ ಜಿ.ಪಿ.ಎಸ್ ಮಾಡಲಾಗುವುದು ಎಂದು ಬಿಜ್ಜವರ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಹೇಳಿದ್ದಾರೆ.
ಒಟ್ಟಿನಲ್ಲಿ ಸೂರಿನ ನಿರೀಕ್ಷೆಯಲ್ಲಿದ್ದ ಕುಟುಂಬವೊಂದು ಈ ಚಳಿಗಾಲವನ್ನು ಈ ಶೆಡ್ನಲ್ಲೆ ಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟುಬೇಗ ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಿ ನಮಗೊಂದು ಸೂರು ನೀಡಲಿ ಎಂದು ಆಗ್ರಹಿಸುತ್ತಿದೆ ಪದ್ಮಮ್ಮ ಕುಟುಂಬ.