ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಜನರ ಮೇಲೆ ಫ್ಯಾಸಿಸಂ ದಾಳಿ ನಡೆಸುತ್ತಿದೆ. ಇದಕ್ಕೆ ದೃತಿಗೆಡದೇ ಸಮರ್ಥವಾಗಿ ಪ್ರತಿರೋಧ ಒಡ್ಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಉಳಿಸಲು ಸಾರ್ವಜನಿಕರು ಕಟಿಬದ್ಧರಾಗಬೇಕಿದೆ ಎಂದು ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಕರೆ ನೀಡಿದರು.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಟೌನ್ಹಾಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ 2ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, “ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶ ಹಿಂದೂರಾಷ್ಟ್ರವಾದರೆ ಅಂತಹ ದುರಂತ ಬೇರೊಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ದೇಶವನ್ನು ಹಿಂದೂರಾಷ್ಟ್ರ ನಿರ್ಮಾಣಕ್ಕೆ ಹೊರಟಿವೆ. ಸಮಾಜವನ್ನು ಒಂದು ಗೂಡಿಸುವುದಕ್ಕಿಂತ ವಿಭಜಿಸುವ ಕೃತ್ಯ ಯಥೇಚ್ಛವಾಗಿ ನಡೆಯುತ್ತಿದೆ” ಎಂದು ಕಿಡಿಕಾರಿದರು.
“ಎರಡು ನೂರು ವರ್ಷ ದೇಶವನ್ನು ಆಳಿದ ಬ್ರಿಟೀಷರನ್ನು ತ್ಯಾಗ, ಬಲಿದಾನಗಳ ಮೂಲಕ ಈ ದೇಶದ ಸ್ವಾತಂತ್ರ್ಯ ಸೇನಾನಿಗಳು ತೊಲಗಿಸಿದ್ದಾರೆ. ಆದರೆ, ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಸಾಮ್ರಾಜ್ಯಶಾಹಿಗಳೊಂದಿಗೆ ಶಾಮೀಲಾಗುವ ಮೂಲಕ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ.
ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದಾಗಿ ಸರ್ಕಾರದ ಕಾನೂನುಗಳು ವರ್ಷದಿಂದ ವರ್ಷಕ್ಕೆ ಕಠಿಣಗೊಳ್ಳುತ್ತಿವೆ. ಸಾರ್ವಜನಿಕ ಉದ್ದಿಮೆಗಳು ವರ್ಷದಿಂದ ವರ್ಷಕ್ಕೆ ಖಾಸಗಿಯವರ ಪಾಲಾಗುತ್ತಿವೆ” ಎಂದು ಅಪಾದಿಸಿದರು.
“ಅಂಬಾನಿ, ಆದಾನಿಯಂತವರು ಸಾರ್ವಜನಿಕ ಉದ್ಯಮಗಳನ್ನು ತಮ್ಮ ಕಬ್ಜಾಕ್ಕೆ ತೆಗೆದುಕೊಳ್ಳುವ ಮೂಲಕ ಸಂಪತ್ತನ್ನು ದ್ವಿಗುಣಗೊಳಿಸಿಕೊಳ್ಳುತ್ತಿದ್ದಾರೆ. ಘನತೆಯುಕ್ತ ಬದುಕು ನಡೆಸಬೇಕಾದ ಕಾರ್ಮಿಕರನ್ನು ದೇಶದ ಆಡಳಿತಾರೂಢ ಸರ್ಕಾರ ಕಾರ್ಮಿಕ ಕಾನೂನುಗಳಿಗೆ ಮನಬಂದಂತೆ ತಿದ್ದುಪಡಿ ತರುವ ಮೂಲಕ ಗುಲಾಮಗಿರಿಗೆ ತಳ್ಳುತ್ತಿದೆ. ಇದರಿಂದ ದುಡಿಯುವ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿತ್ತಿದ್ದಾರೆ. ಕಾರ್ಪೋರೇಟ್ ಮತ್ತು ಕೋಮುವಾದಿಗಳನ್ನು ಪ್ರತಿರೋಧಿಸುವ ಸವಾಲು ನಮ್ಮೆಲ್ಲರ ಮುಂದಿದೆ. ಇದಕ್ಕೆ ದೀರ್ಘ ಸಂಘರ್ಷವೇ ಬೇಕಿದೆ. ದೇಶದಲ್ಲಿ ಎಲ್ಲ ಎಡ ಪಕ್ಷಗಳು ಒಗ್ಗಟ್ಟಾಗಿ ಪರ್ಯಾಯವನ್ನು ಹುಡುಕಬೇಕಿದೆ. ಇಲ್ಲದೇ ಹೋದರೆ ದೇಶದ ದುಡಿಯುವ ವರ್ಗ ಮತ್ತಷ್ಟು ತೊಂದರೆಗೀಡಲಾಗಲಿದೆ” ಎಂದು ಹೇಳಿದರು.
ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಜಾರಿಯೋ ಮಾತನಾಡಿ, “ದೇಶದಲ್ಲಿ ಎಲ್ಲ ದುಡಿಯುವ ಜನರು ಕಡುಕಷ್ಟ ಕಾಲದಲ್ಲಿ ಬದುಕುತ್ತಿದ್ದಾರೆ. ಬಿಜೆಪಿ ಅಜೆಂಡಾ ಬಹುತ್ವ ಭಾರತವನ್ನು ಹಿಂದೂರಾಷ್ಟ್ರ ಮಾಡುವುದಾಗಿದೆ. ಹಿಂದೂರಾಷ್ಟ್ರ ಪರಿಕಲ್ಪನೆಯೇ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬಂದೊದಗಿದ ಆಪತ್ತಾಗಿದೆ. ಒಂದು ವೇಳೆ ಹಿಂದೂ ರಾಷ್ಟ್ರ ಕಲ್ಪನೆ ಸಾಕಾರಗೊಂಡರೆ ದೇಶದಲ್ಲಿ ಪುನಃ ಜಾತಿ ಶ್ರೇಣಿಕೃತ ವ್ಯವಸ್ಥೆ ರೂಪುಗೊಂಡು ತಳ ಸಮುದಾಯದವರು ಇನ್ನಷ್ಟು ಸಂಕಷ್ಟ, ದಬ್ಬಾಳಿಕೆಯನ್ನು ಎದುರಿಸಲಿವೆ. ಹಾಗಾಗಿ ಫ್ಯಾಸಿಸಂ ಸೋಲಿಸಲು ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬೇಕು” ಎಂದು ಕರೆ ನೀಡಿದರು.
ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 111ನೇ ಸ್ಥಾನ:
ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, “ಜನರಿಗೆ ಹುಸಿ ಭ್ರಮೆಯನ್ನು ತುಂಬುತ್ತಿರುವ ಸರ್ಕಾರಗಳಿಂದಾಗಿ ಇಂದು ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ತಲುಪಿದೆ. ಅಂಬಾನಿ, ಆದಾನಿ ಸೇರಿದಂತೆ ದೇಶದ ನೂರಕ್ಕೂ ಹೆಚ್ಚು ಶ್ರೀಮಂತರ ಆಸ್ತಿ ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಏರುತ್ತಿದ್ದರೆ, ಬಡವರ ತಲಾ ಆದಾಯ ತೀವ್ರ ಕುಸಿತ ಕಂಡಿದೆ. ಮೋದಿಯವರ ಸರ್ಕಾರ ಬಹುಜನರ ಮೇಲೆ ವಿಪರೀತ ತೆರಿಗೆಯನ್ನು ಹೇರಿ, ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಿದೆ. ಆರ್ಎಸ್ಎಸ್ ಮತ್ತು ಹಿಂದೂಪರ ಸಂಘಟನೆಗಳು ಕಾರ್ಪೋರೇಟ್ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ಬಿಜೆಪಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿದೆ. ಜನಪರವಾಗಿ ಧ್ವನಿ ಎತ್ತಿದವರನ್ನು ಜೈಲಿಗೆ ಹಾಕುವ ಮೂಲಕ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ. ಹಾಗಾಗಿ ಎಡ ಚಳವಳಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಕೋಮುವಾದಿ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ಐಪ್ವಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ರತಿರಾವ್ ಅವರು ಮಾತನಾಡಿ, “ಕೋಮುವಾದ, ಕಾರ್ಪೋರೇಟ್ವಾದ ಮತ್ತು ಮನುವಾದ ಮಹಿಳಾ ಅನುಪಾತದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆ ಭ್ರೂಣ ಹತ್ಯೆಯಂತಹ ಪೈಶಾಚಿಕ ಕೃತ್ಯಗಳನ್ನು ಪೋಷಿಸುತ್ತಿದೆ. ಈ ದುರ್ದಾಳಿಯನ್ನು ಸಮರ್ಥವಾಗಿ ಪ್ರತಿರೋಧಿಸಬೇಕು” ಎಂದು ಕರೆ ನೀಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಅವರು ಮಾತನಾಡಿ, “ಹುಸಿ ರಾಷ್ಟ್ರೀಯಯವಾದವನ್ನೇ ಆರ್ಎಸ್ಎಸ್ ಮತ್ತು ಹಿಂದೂಪರ ಸಂಘಟನೆಗಳು ಬಿತ್ತುವ ಮೂಲಕ ಸಮಾಜವನ್ನು ಒಡೆಯುತ್ತಿವೆ. ಇದಕ್ಕೆ ಕಮ್ಯುನಿಸ್ಟ್ ಚಳವಳಿಗಳ ಮೂಲಕವೇ ಉತ್ತರ ಕೊಡಬೇಕಿದೆ” ಎಂದರು.
ಸಮಾರಂಭದಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಚಂದ್ರ ಮೋಹನ್, ಮೈತ್ರೇಯಿ ಕೃಷ್ಣನ್ ಸಿಪಿಐ(ಎಂಎಲ್) ಲಿಬರೇಶನ್ ಪಾಲಿಟ್ ಬ್ಯುರೋ ಸದಸ್ಯ ವಿ.ಶಂಕರ್, ರಾಜ್ಯ ಸಮಿತಿ ಸದಸ್ಯರಾದ ಪಿ.ಆರ್.ಎಸ್ ಮಣಿ, ಪಿ.ಪಿ.ಅಪ್ಪಣ್ಣ, ನಿರ್ಮಲಾ.ಎಂ., ಲೇಖಾ ಸೇರಿದಂತೆ ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಗಂಗಣ್ಣ ದಿನ್ನಿ, ಆರ್.ಎಚ್.ಕಲ್ಮಂಗಿ, ಶ್ರೀನಿವಾಸ ಬುಕ್ಕನಟ್ಟಿ ಸೇರಿದಂತೆ ಇನ್ನಿತರರಿದ್ದರು. ರಾಜ್ಯ ಸಮಿತಿ ಸದಸ್ಯ ನಾಗರಾಜ್ ಪೂಜಾರ್ ಸಮಾವೇಶ ನಿರ್ವಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ : ಸ್ಥಳದಲ್ಲೇ ಓರ್ವ ಸಾವು
ಸಮಾವೇಶಕ್ಕೂ ಮುನ್ನ ನಗರದ ಎಪಿಎಂಸಿಯಿಂದ ಟೌನ್ಹಾಲ್ವರೆಗೆ ಸಾವಿರಾರು ಜನರೊಂದಿಗೆ ಬೃಹತ್ ರ್ಯಾಲಿ ನಡೆಯಿತು. ಭಗತ್ ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಅವರ ನೇತೃತ್ವದಲ್ಲಿ ಹುತಾತ್ಮರ ಭಾವಚಿತ್ರಗಳೊಂದಿಗೆ 100ಕ್ಕೂ ಹೆಚ್ಚು ಆಟೋಗಳ ರ್ಯಾಲಿ ಗಮನ ಸೆಳೆಯಿತು. ರ್ಯಾಲಿಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಳೆ ತಂದರು. ವಿವಿಧ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.